ಚಿಕ್ಕಮಗಳೂರು: ದ್ವಿತೀಯ ಪಿ.ಯು.ಸಿ ಪರೀಕ್ಷೆ-3 ಜೂ.24ರಿಂದ ಜು.5ರ ವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ಸುವ್ಯವಸ್ಥಿತ, ಶಾಂತಿ, ಶಿಸ್ತು, ಪಾಲನೆಯೊಂದಿಗೆ ನಡೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒಟ್ಟು ಮೂರು ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಜೂ.24ರಂದು ಕನ್ನಡ, ಅರೇಬಿಕ್, 25ರಂದು ಇಂಗ್ಲೀಷ್, 26ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಮತ್ತು ಗಣಕ ವಿಜ್ಞಾನ, 27ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, 28ರಂದು ಅರ್ಥಶಾಸ್ತ್ರ, ರಸಾಯನಶಾಸ್ತ್ರ, 29ರಂದು ಇತಿಹಾಸ, ಭೌತಶಾಸ್ತ್ರ, ಜು.1ರಂದು ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, 2ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ ಮತ್ತು ಶಿಕ್ಷಣ ಶಾಸ್ತ್ರ, 3ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, 4ರಂದು ಹಿಂದಿ, 5ರಂದು ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಸಂಸ್ಕೃತ, ಫ್ರೆಂಚ್, ಹಿಂದೂಸ್ತಾನಿ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್ ಮತ್ತು ಬ್ಯೂಟಿ ಅಂಡ್ ವೆಲ್ನೆಸ್ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————————————–
ಸಾರ್ವಜನಿಕ ಹರಾಜು
ಚಿಕ್ಕಮಗಳೂರು: ನಗರ ಪೊಲೀಸ್ ಠಾಣೆ ವತಿಯಿಂದ ವಾರಸುದಾರರು ಪತ್ತೇಯಾಗದೆ ಇರುವ 14 ಮೋಟಾರ್ ಸೈಕಲ್ಗಳಿಗೆ ಜೂ.23ರಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಠಾಣೆ ಆವರಣದಲ್ಲಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆಸಕ್ತ ಸಾರ್ವಜನಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸೆಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——————————-
ವಿದ್ಯುತ್ ನಿಲುಗಡೆ
ಚಿಕ್ಕಮಗಳೂರು: ಗ್ರಾಮೀಣ ಉಪವಿಭಾಗದ ವ್ಯಾಪ್ತಿಯ ಮಲ್ಲೇನಹಳ್ಳಿ-ದೇವಿಪುರ ವಿದ್ಯುತ್ ಉಪಕೇಂದ್ರದಲ್ಲಿ ಪ್ರಥಮ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ 24 ರಂದು ಬೆಳಗ್ಗೆ 10.30 ಗಂಟೆಯಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಭಕ್ತರಹಳ್ಳಿ, ಮಲ್ಲೇನಹಳ್ಳಿ, ಕರ್ಕನಹಳ್ಳಿ, ಹೆಬ್ಬಳ್ಳಿ, ಮಾವಿನಹಳ್ಳಿ, ಅರಿಶಿನಗುಪ್ಪೆ, ದಾಸರಹಳ್ಳಿ, ಗಾಳಿಪೂಜೆ, ದೇವರಹಳ್ಳಿ, ಹೊಸಪೇಟೆ, ಅತ್ತಿಗಿರಿ ಮತ್ತು ಹಲಸುಬಾಳು ಗ್ರಾಮಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ಉಪ ವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==================
ಈ ಸುದ್ದಿ ನೋಡಿಲ್ಲ….
ಕಡೂರು ತಾಲೂಕು ಬಿಸಲೆರೆಯಲ್ಲಿ 1101ನೇ ಇಸವಿ ಹೊಯ್ಸಳ ದಾನ ಶಾಸನ ಪತ್ತೆ
ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅವರು ಜಿಪಂ ವ್ಯಾಪ್ತಿಯ ಗ್ರಾಮಗಳ ಇತಿಹಾಸ ಪರಂಪರೆಯನ್ನು ದಾಖಲಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡು “ನಮ್ಮ ಊರು ನಮ್ಮ ಬೇರು” ಶೀರ್ಷಿಕೆಯಲ್ಲಿ ಗ್ರಾಮ ಸಂಸ್ಕೃತಿಯ ಬೇರುಗಳನ್ನು ಅನ್ವೇಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೆಲ್ಲ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದ ಈ ಯೋಜನೆಗೆ ವಿಶಿಷ್ಟ ರೀತಿಯ ಮಹತ್ವ ದೊರೆತಿದೆ. ಅವುಗಳಲ್ಲಿ ಮುಖ್ಯವಾದುದು ಹಲವಾರು ಹೊಸ ಶಾಸನಗಳ ಶೋಧನೆ.
ಕಡೂರು ತಾಲೂಕಿನ ಬಿಸಲೆರೆ ಗ್ರಾಪಂ ಪಿಡಿಓ ಶ್ರೀಮತಿ ನಂಜುಂಡಮ್ಮ ಮತ್ತವರ ಕಚೇರಿ ಸಹೋದ್ಯೋಗಿಗಳು ಗ್ರಾಮ ಸಂಸ್ಕೃತಿಯ ಪರಂಪರೆಯ ಅನ್ವೇಷಣಾ ಸಮಯದಲ್ಲಿ ದೊರೆತ ಶಾಸನವನ್ನು ಡಾ.ಮಂಜುಳಾ ಹುಲ್ಲಹಳ್ಳಿಯವರಿಗೆ ಕಳಿಸಿಕೊಟ್ಟರು. ಇದು ಈವರೆಗೆ ದಾಖಲಾಗದ ಶಾಸನವೆಂದು ಮನಗಂಡ ಮಂಜುಳಾ ಅವರು ಕೂಡಲೇ ಮೈಸೂರಿನ ಹಿರಿಯ ಶಾಸನತಜ್ಞರಾದ ಎಚ್.ಎಂ.ನಾಗರಾಜರಾವ್ ಅವರನ್ನು ಸಂಪರ್ಕಿಸಿದರು. ನಾಗರಾಜರಾವ್ ಅವರು ಈ ಶಾಸನವನ್ನುಬಹೊಸಗನ್ನಡಕ್ಕೆ ಪರಿವರ್ತಿಸಿ ಓದುವ ಮೂಲಕ ಹೊಯ್ಸಳ ಇತಿಹಾಸದ ಮಹತ್ವದ ಆಯಾಮದ ಮೇಲೆ ಬೆಳಕು ಬಂದಿದ್ದೆ.
ಹೊಯ್ಸಳ ರಾಜ್ಯದ ವಿಶಿಷ್ಟ ದೊರೆ ವೀರ ಎರೆಯಂಗ ಪೊಯ್ಸಳದೇವನು ಬೇಲೂರು ರಾಜಧಾನಿಯಿಂದ ರಾಜ್ಯವಾಳುವ ಸಂದರ್ಭದಲ್ಲಿ ಇವನ ಮೊದಲ ಮಗ ಒಂದನೇ ಬಲ್ಲಾಳ ಯುವರಾಜನಾಗಿರುತ್ತಾನೆ. ಆ ಸಮಯದಲ್ಲಿ ಅಂದರೆ, ಈ ಶಾಸನದ ಕಾಲವಾದ 12-05-1101ರಲ್ಲಿ ಪೊಯ್ಸಳದೇವನ ಬಿರುದಾವಳಿ ಮತ್ತು ಆತನ ಮನೋನಯನವಲ್ಲಭೆ ಎನಿಸಿದ ಬಾಚಲದೇವಿಯ ವರ್ಣನೆ ವಿಶೇಷವಾಗಿದೆ. ವಿಕ್ರಮಕಾಲದ [25] ವಿಷು ಸಂವತ್ಸರ, ಜೇಷ್ಟಮಾಸ, ಏಕಾದಶಿ, ಆದಿವಾರದಲ್ಲಿ ಶ್ರೀಮತು ಬಾಚಲದೇವಿಯರು ಬಿಸಿಲೆರೆಯನ್ನು ಆಳ್ವಿಕೆ ಮಾಡುತ್ತಿದ್ದುದನ್ನೂ ಉಲ್ಲೇಖಿಸುವ ಶಾಸನವು ಅವಳು ಕೆರೆಯನ್ನು ಕಟ್ಟಿಸಿ, ಬಾಚೇಶ್ವರ ದೇವಾಲಯವನ್ನು ನಿರ್ಮಾಣವನ್ನು ಮಾಡಿ ಬಿಟ್ಟ ದತ್ತಿಯ ವಿವರ ಹೊಂದಿದೆ.
ಚಿಕ್ಕಮಗಳೂರು ಸಂಸ್ಕೃತಿ ಪರಂಪರೆಯ ಅರಿವನ್ನು ಈ ಜಿಲ್ಲೆಯ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆನ್ನುವ ಹಂಬಲದಿಂದ “ನನ್ನ ಊರು ನನ್ನ ಬೇರು”ಎನ್ನುವ ಪ್ರಧಾನ ಶೀರ್ಷಿಕೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ಸಂಸ್ಕೃತಿ ಪರಂಪರೆಯನ್ನು ಅನ್ವೇಷಿಸಲು ಅಗತ್ಯ ಕ್ರಮ ವಹಿಸುತ್ತಿರುವ, ಈ ಸಂದರ್ಭದಲ್ಲಿ ಈ ಶಾಸನವನ್ನು ಶೋಧಿಸಿರುವ ಶ್ರೀಮತಿ ನಂಜುಂಡಮ್ಮ ಅವರ ತಂಡವನ್ನು ಮತ್ತು ಇದನ್ನು ಅರ್ಥೈಸಿ ಕೊಟ್ಟಿರುವ ಶಾಸನತಜ್ಞರಾದ ಶ್ರೀ ನಾಗರಾಜರಾವ್ ಅವರನ್ನು, ಈ ಬಗೆಗೆ ಕಾಳಜಿ ವಹಿಸಿ ಶಾಸನಗಳ ಅನ್ವೇಷಣೆಗೆ ಪ್ರೋತ್ಸಾಹದ ಕೊಂಡಿಯಾಗಿರುವ ಡಾ.ಮಂಜುಳಾ ಹುಲ್ಲಹಳ್ಳಿ ಅವರನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಅಭಿನಂದಿಸಿದ್ದಾರೆ.