- ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಪ್ರಾಯ । ಜನಪ್ರತಿನಿಧಿಗಳು-ಅಧಿಕಾರಿಗಳಿಂದ ಯೋಗ ದಿನಾಚರಣೆ
ಪ್ರತಿನಿಧಿ ವರದಿ ಹಾಸನ
ಈಗಿನ ಕಾಲಘಟ್ಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಡಯಾಬಿಟಿಸ್, ಹೃದಯಾಘಾತ ಸಂಭವಿಸುತ್ತಿದ್ದು, ಯಾವ ವೈದ್ಯರ ಬಳಿ ಹೋದರೂ ಯೋಗ ಮಾಡಿ ಎಂದು ಸಲಹೆ ನೀಡುತ್ತಾರೆ. ಹೀಗಾಗಿ ಎಲ್ಲ ಕಾಯಿಲೆಗಳಿಗೂ ಯೋಗ ಒಂದೇ ಮದ್ದಾಗಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಾನೂ ಮುಂದಿನ ದಿನಗಳಲ್ಲಿ ಯೋಗ ಮಾಡುವೆ ಎಂದರು.
ಸ್ವಸ್ಥ-ಸ್ವಚ್ಛ ಹಾಸನ ನಗರವಾಗಬೇಕು. ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಹಾಸನ ಮಾಡಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಡಲು ಗಿಡ ಮರ ಬೆಳೆಸಬೇಕು. ಸ್ವಚ್ಛತೆಯಲ್ಲಿ ನಗರವನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.
ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ 2 ಬಾರಿಯಾದರೂ ಯೋಗಾ ಭ್ಯಾಸ ಮಾಡಿಸಬೇಕು. ಪಠ್ಯದಲ್ಲೂ ಯೋಗ ವಿಷಯ ಸೇರಿಸಬೇಕು. ಯೋಗ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ, ದೈಹಿಕ ಸಧೃಡತೆ ಜತೆಗೆ, ಆರೋಗ್ಯವನ್ನು ಸಮತೋಲ ನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಗರದ ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜು.1ರಿಂದ ಪ್ಲಾಸ್ಟಿಕ್ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗುವುದು. ಸ್ವಚ್ಛತೆಯಲ್ಲಿ ಹಾಸನವನ್ನು ಮೊದಲ ಸ್ಥಾನಕ್ಕೆ ತರಲು ಎಲ್ಲರೂ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಡಾ.ಗುರುಬಸವರಾಜು ಎಲಗಚ್ಚಿನ ಮಾತನಾಡಿದರು.
ಎಡಿಸಿ ಕೆ.ಟಿ.ಶಾಂತಲಾ, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣಗೌಡ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್ ಇದ್ದರು.