ಪ್ರಾಂಶುಪಾಲೆ ರೀನಾ ಮ್ಯಾಥೀವ್ ಅಭಿಪ್ರಾಯ
ಪ್ರತಿನಿಧಿ ವರದಿ ಆಲೂರು
ಯೋಗವು ಮನುಷ್ಯನ ದೇಹ ಮತ್ತು ಮನಸ್ಸನ್ನು ಸಂಯೋಜನೆ ಮಾಡುವುದರ ಮೂಲಕ ಸಂಯಮ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೆಥಸ್ಥ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ರೀನಾ ಮ್ಯಾಥೀವ್ ಅಭಿಪ್ರಾಯಪಟ್ಟರು.
ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಭೈರಾಪುರ ಬೆಥಸ್ಥ ವಿದ್ಯಾ ಸಂಸ್ಥೆಯ ಸಹಕಾರದಲ್ಲಿ ಶಾಲಾವಣದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಹುಟ್ಟಿದ ಯೋಗವು ಪ್ರಸ್ತುತ ವಿಶ್ವದ್ಯಂತ ಪಸರಿಸುತ್ತಿದೆ. ಯೋಗವು ಕೇವಲ ಜೂ.೨೧ಕ್ಕೆ ಮಾತ್ರ ಮೀಸಲಾಗಬಾರದು. ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕಾದರೆ ನಿತ್ಯದ ದಿನಚರಿಯಾಗಬೇಕು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯು ಈ ವರ್ಷದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಮಾತನಾಡಿ, ಯೋಗ ಅಂದರೆ ಒಂದುಗೂಡುವುದು ಅಥವಾ ಅದೃಷ್ಟ. ನಮ್ಮ ದಿನನಿತ್ಯದ ಬದುಕು ಆರೋಗ್ಯ ಪೂರ್ಣವಾಗಿ, ಸರಾಗವಾಗಿ ಸಾಗಬೇಕಾದರೆ ಶರೀರ ಮತ್ತು ಮನಸ್ಸು ಎರಡೂ ಪಕ್ವವಾಗಿರಬೇಕು. ಇವೆರಡೂ ಪಕ್ವವಾಗಬೇಕಾದರೆ ಯೋಗದ ಅವಶ್ಯಕತೆಯಿದೆ ಎಂದು ತಿಳಿಸಿದರು.
ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, ಯೋಗವು ಮನಸ್ಸನ್ನು ನಿಗ್ರಹ ಮಾಡುವುದರ ಜತೆಗೆ, ದೈಹಿಕವಾಗಿ ಸದೃಢಗೊಳಿಸುತ್ತದೆ. ಭಾರತದ ಸನಾತನ ಕಲೆಯಾದ ಯೋಗ ವಿಶ್ವಮಾನ್ಯತೆಗೊಂಡಿರುವುದು ಸಂತಸದ ಸಂಗತಿ. ಮನುಷ್ಯನಿಗೆ ದೇಹ ಎಷ್ಟೇ ಬಲಿಷ್ ವಾಗಿದ್ದರೂ ಮಾನಸಿಕವಾಗಿ ಸ್ಥಿರತೆಯಿಲ್ಲದಿದ್ದರೆ ಉತ್ತಮ ನಾಗರಿಕನಾಗಲು ಸಾಧ್ಯವಿಲ್ಲ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಯಾರು ಯೋಗ, ಧ್ಯಾನ, ಮಿತ ಆಹಾರಿಯಾಗಿರುತ್ತಾರೋ ಅವರು ಮಾತ್ರ ಉತ್ತಮ ಆರೋಗ್ಯವಂತರಾಗುವುದರ ಜತೆಗೆ, ದೀರ್ಘಾಯುಷಿಗಳಾಗಲು ಸಾಧ್ಯ. ಆದ್ದರಿಂದಲೇ ನಮ್ಮ ಭಾರತೀಯ ಪುರಾತನ ಕಾಲದ ಋಷಿ ಮುನಿಗಳು ನೂರಾರು ವರ್ಷಗಳ ಬದುಕಿ ಬಾಳುತ್ತಿದ್ದರು ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ ಸುನೀಲ್, ಗೈಡ್ಸ್ ಕ್ಯಾಪ್ಟನ್ ಶಿಲ್ಪಕೃತಿ, ಪ್ರಿಯಾಂಕ, ಸಹ ಶಿಕ್ಷಕ ಚಂದ್ರು ಹಾಸನ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.