ಪ್ರತಿನಿಧಿ ವರದಿ ಚಿಕ್ಕಮಗಳೂರು
ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಯೋಗ ದಿನ ಆಚರಿಸಲಾಯಿತು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತವು ಧ್ಯಾನ ಮತ್ತು ಯೋಗ ವಿಷಯದಲ್ಲಿ ಇಡೀ ಪ್ರಪಂಚದ ಗಮನ ಸೆಳೆದಿದ್ದು, ಹಲವು ರಾಷ್ಟ್ರಗಳು ನಮ್ಮ ದೇಶದ ಯೋಗ ಪರಂಪರೆ, ಸಂಸ್ಕೃತಿಯನ್ನು ಹಿಂಬಾಲಿಸುತ್ತಿವೆ. ಭಾರತದಲ್ಲಿ ಯೋಗಕ್ಕೆ ಪುರಾತನ ಇತಿಹಾಸವಿದೆ. ಸಾಧು ಸಂತರು ಯೋಗ, ಧ್ಯಾನದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ವಿದೇಶಗಳ ಅನೇಕ ಸಾಧಕರು ಭಾರತಕ್ಕೆ ಬಂದು ಧ್ಯಾನ ಮಾಡುತ್ತಾರೆ. ಹಲವರು ಯೋಗಭ್ಯಾಸ ಮಾಡಲು ನಮ್ಮಲ್ಲಿಗೆ ಬರುತ್ತಾರೆ. ಇದಕಾಗಿಯೆ ಭಾರತದಲ್ಲಿ ಯೋಗ ಶಾಲೆಗಳು ಎತ್ತೆಚ್ಚವಾಗಿವೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಯೋಗ ಉಪಯೋಗವಾಗುತ್ತದೆ. ಮಕ್ಕಳಿಂದ ಹಿರಿಯರವರೆಗೆ[ಸಲಹೆ ಮೇರೆಗೆ] ಯಾರು ಬೇಕಾದರು ಪ್ರತಿನಿತ್ಯ ಯೋಗ ಮಾಡಬಹುದು. ಪ್ರತಿ ಮನುಷ್ಯ ಬೆಳಗ್ಗೆ ಎದ್ದು ಧ್ಯಾನ, ಯೋಗ ಮಾಡಿದ ನಂತರ ಮನೆಯಿಂದ ಹೊರ ಬಂದು ದುಡಿಯಲು ಹೊರಟರೆ ಆ ದಿನಪೂರ್ತಿ ಲವ ಲವಿಕೆ ಮತ್ತು ಸಂತೋಷದಿಂದ ಇರಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪೊಲೀಸ್ ಅಧೀಕ್ಷಕರಾದ ವಿಕ್ರಂ ಅಮಟೆ ಸೇರಿ ಹಲವರು ಹಾಜರಿದ್ದರು.