ಪ್ರತಿನಿಧಿ ವರದಿ ಹಾಸನ
ನಗರದ ಹೇಮಾವತಿ ಪ್ರತಿಮೆ ಬಳಿ ಸೇವಾ ಭಾರತೀ ಸಂಸ್ಥೆಯ ವತಿಯಿಂದ ನಡೆದ ಗಾಲಿ ಕುರ್ಚಿ ರ್ಯಾಲಿಗೆ ಡಿವೈಎಸ್ಪಿ ಪಿ.ಕೆ.ಮುರುಳೀಧರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅನೇಕರು ಅಪಘಾತವಾಗಿ ಕೈಕಾಲು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ತಲೆಗೆ ಪೆಟ್ಟು ಬಿದ್ದು ಜೀವವನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ ತಪ್ಪದೇ ಹೆಲ್ಮೆಟ್ ಧರಿಸಬೇಕು. ಕಾನೂನಿನ ನಿಯಮದಲ್ಲಿ ವಾಹನ ಚಾಲನೆ ಮಾಡಿದರೆ ಆಗುವ ಅಪಘಾತವನ್ನು ತಪ್ಪಿಸಬಹುದಾಗಿದೆ. ಇಂತಹ ಜಾಗೃತಿ ಜಾಥ ನಡೆಸುವುದರಿಂದ ಸಾರ್ವಜನಿಕರಿಗೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದರು.
ಸೇವಾ ಭಾರತಿ ಕನ್ಯಾಡಿ ಅಧ್ಯಕ್ಷೆ ಸ್ವರ್ಣಗೌರಿ ಮಾತನಾಡಿ, ಅಪಘಾತದಿಂದ ಹಾಸಿಗೆ ಹಿಡಿದು ಬೆನ್ನು ಉರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ, ಎಲ್ಲರಂತೆ ಬದುಕಲು ಧೈರ್ಯ ತುಂಬುವ ಹಾಗೂ ಜಾಗೃತಿ ಮೂಡಿಸಲು ಈ ಗಾಲಿ ಕುರ್ಚಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಮರ ಹತ್ತುವಾಗ, ಎತ್ತರದ ಜಾಗಕ್ಕೆ ಹೋಗುವಾಗ ಹಾಗೂ ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರಬೇಕು ಎಂದರು.
ಗಾಲಿ ಕುರ್ಚಿ ರ್ಯಾಲಿಯು ಮಹಾರಾಜ ಉದ್ಯಾನವನದ ಮುಂಭಾಗದಿಂದ ಹೊರಟು ಆರ್.ಸಿ. ರಸ್ತೆ ಮೂಲಕ ಎನ್.ಆರ್. ವೃತ್ತದಲ್ಲಿ ಕೊನೆಯಾಯಿತು. ಈ ರ್ಯಾಲಿಯಲ್ಲಿ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್, ಸೇವಾ ಭಾರತಿ ಸಂಸ್ಥೆಯ ಹಿರಿಯ ಮ್ಯಾನೇಜರ್ ಚರಣ್, ಸಂಘಟನಾ ಕಾರ್ಯದರ್ಶಿ ಗಿರೀಶ್, ಮಂಜುನಾಥ್, ನಾಗಾರ್ಜುನ್ ಇತರರು ಉಪಸ್ಥಿತರಿದ್ದರು.