ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ವಿಶ್ವ ಯೋಗ ದಿನವನ್ನು ಭಾರತ ದೇಶ ಇಡೀ ಜಗತ್ತಿಗೆ ಯೋಗಾಸನದ ಮಹತ್ವವನ್ನು ಪರಿಚಯಿಸಿ ಸದೃಡ ಆರೋಗ್ಯಕ್ಕೆ ಕಾರಣಿಭೂತವಾಗಿದೆ. ಪಟ್ಠಣದ ಹಲೆವೆಡೆ ನಾನಾ ಸಂಘ ಸಂಸ್ಥೆಗಳು, ಸಾಮೂಹಿಕ ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ, ವಿವೇಕಾನಂದ ಯೋಗ ಕೇಂದ್ರ ಮತ್ತು ಶಾಲಿನಿ ವಿದ್ಯಾ ಸಂಸ್ಥೆ ಹಾಗೂ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು. ಯೋಗ ದಿನಾಚರಣೆ ಸಲುವಾಗಿ ಶ್ವೇತ ಬಣ್ಣದ ಬಟ್ಟೆ ಧರಿಸಿ ಆಗಮಿಸಿದ ನೂರಾರು ಶಿಬಿರಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ವಿವೇಕಾನಂದ ಯೋಗ ಕೇಂದ್ರದ ಸಂಸ್ಥಾಪಕರು ಹಾಗೂ ಪರಿಸರ ಪ್ರೇಮಿ ಚ.ನಾ.ಅಶೋಕ್ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಹಲವು ಯೋಗ ಭಂಗಿಗಳನ್ನು ಮತ್ತು ಪ್ರಾಣಾಯಾಮ ಹೇಳಿಕೊಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.
ಕೋರ್ಟ್ ಸಂಕೀರ್ಣದಲ್ಲಿ ಯೋಗ: ಯೋಗ ದಿನಾಚರಣೆ ಹಿನ್ನಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ಪಟ್ಟಣದ ಕೋರ್ಟ್ ಸಂಕೀರ್ಣದಲ್ಲಿಯೂ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು
ನ್ಯಾಯಾಧೀಶರಾದ ಅರುಣ್ ಎಸ್. ಗುಡಿಗೇನ್ನವರ್, ಬಿ.ಸಿ.ದೀಪು, ಎಸ್.ರಶ್ಮಿ, ಪಿ.ಮಮತಾ, ಸುನೀತ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಂದರ್ ರಾಜ್, ಕಾರ್ಯದರ್ಶಿ ಎ.ಡಿ.ಕುಮಾರ್, ಪದಾಧಿಕಾರಿಗಳು ನ್ಯಾಯಾಂಗ ಇಲಾಖೆಯ ನೌಕರರು ಹಾಗೂ ವಕೀಲರು ಉಪಸ್ಥಿರಿದರು.