- ಕಾರ್ಯಕ್ರಮಗಳಿಗೆ 15 ದಿನ ಮೊದಲೇ ಪೂರ್ವಭಾವಿ ಸಭೆ ನಡೆಸಿ
- ಶಾಸಕ ಮಂಜುನಾಥ್ ತಾಲೂಕು ಆಡಳಿತಕ್ಕೆ ಸೂಚನೆ
ಪ್ರತಿನಿಧಿ ವರದಿ ಹನೂರು
ಜಯಂತಿ ಕಾರ್ಯಕ್ರಮಗಳು ಕೇವಲ ಎರಡು ಮೂರು ದಿನಗಳು ಇರುವಾಗ ಪೂರ್ವಭಾವಿ ಸಭೆ ಕರೆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ಹದಿನೈದು ದಿನಗಳ ಮೊದಲೇ ಪೂರ್ವಭಾವಿ ಸಭೆಯನ್ನು ನಡೆಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡರವರ 515ನೇ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಆಚರಣೆ ಮಾಡುವ ಮಹಾನ್ ನಾಯಕರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗಳನ್ನು ನಿಗದಿತ ಅವಧಿಯಲ್ಲಿ ನಡೆಸಬೇಕು. ಕಾರ್ಯಕ್ರಮಕ್ಕೆ ಕೇವಲ ಎರಡು-ಮೂರು ದಿನಗಳು ಇರುವಾಗ ಪೂರ್ವಭಾವಿ ಸಭೆ ಕರೆದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕಾಲಾವಕಾಶ ಇಲ್ಲದೆ ಅವಸರದಲ್ಲಿ ಕಾರ್ಯಕ್ರಮಗಳನ್ನು ನಡೆಸಿದರೆ ಮನಸ್ತಾಪಗಳು ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಮಾಜದ ಮುಖಂಡ ಮಂಜೇಶ್ ಮಾತನಾಡಿ, ಕೇವಲ ನಾಮಕಾವಸ್ಥೆಗೆ ನಾಡಪ್ರಭು ಕೆಂಪೇಗೌಡ ಜಯಂತಿ ಮಾಡುವುದಾದರೆ ಯಾವುದೇ ಕಾರಣಕ್ಕೂ ಜಯಂತಿ ಮಾಡುವುದೇ ಬೇಡ. ಕಳೆದ ವರ್ಷವೂ ಸಹ ಆಗಿದ್ದ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿಯೂ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಇದು ಮತ್ತೊಮ್ಮೆ ಮರುಕಳಿಸಿದರೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ, ಪ್ರತಿ ಬಾರಿಯೂ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡುವಾಗ ತಾಲೂಕು ಆಡಳಿತ ಸರಿಯಾಗಿ ಪೂರ್ವ ಸಿದ್ದತೆ ಮಾಡಿಕೊಳ್ಳುವುದಿಲ್ಲ. ಜಯಂತಿ ಆಚರಣೆಗೆ ಕೇವಲ ಎರಡು-ಮೂರು ದಿನಗಳು ಇರುವಾಗ ಪೂರ್ವಭಾವಿ ಸಭೆ ಕರೆಯುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಒಕ್ಕಲಿಗ ಸಮಾಜದವರು ಇದ್ದಾರೆ. ಹಾಗಾಗಿ ನೀವು ನಮಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ನೀವು ಜಯಂತಿ ಮಾಡುವುದೇ ಬೇಡ ಎಂದರು.
ಪಟ್ಟಣ ಪಂಚಾಯತಿ ಸದಸ್ಯ ಹರೀಶ್ ಕುಮಾರ್ ಮಾತನಾಡಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಕೆಶಿಪ್ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ವೃತ್ತವನ್ನು ಅಗಲೀಕರಣ ಮಾಡುವ ಬಗ್ಗೆ ಮಾತನಾಡುತ್ತೇನೆ. ಕೆಂಪೇಗೌಡ ವೃತ್ತ ಮಾಡಬೇಕಾಗಿರುವ ಜಾಗವನ್ನು ಸರ್ವೆ ನಡೆಸಿ, ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಈಗಾಗಲೇ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ. ಸರ್ವೆ ಕಾರ್ಯ ಮುಗಿದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಒಕ್ಕಲಿಗ ಸಮಾಜದ ಮುಖಂಡರಾದ ಎಲ್.ನಾಗೇಂದ್ರ, ನಟರಾಜು, ರವಿ, ರಘು, ಸೋಮಣ್ಣ,ರಾಜುಗೌಡ, ಲಿಂಗರಾಜು, ಪ್ರವೀಣ, ಗೋವಿಂದೇಗೌಡ, ಪ್ರಸಾದ್, ಸತೀಶ್, ಒಕ್ಕಲಿಗ ಸಂಘದ ನಿರ್ದೇಶಕ ಮಂಜೇಶ್ ಇದ್ದರು.
22ಎಚ್ಎನ್ ಆರ್.1: ನಾಡಪ್ರಭು ಕೆಂಪೇಗೌಡರವರ 515ನೇ ಜಯಂತಿ ಆಚರಣೆ ಸಂಬಂಧ ಹನೂರಿನ ಪ್ರವಾಸಿಮಂದಿರದಲ್ಲಿ ಶಾಸಕ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.