ಹಾಸನ: ದೇಹ ಮತ್ತು ಆತ್ಮವನ್ನು ಸ್ಥಿರವಾಗಿಟ್ಟುಕೊಳ್ಳುವುದಕ್ಕೆ ಯೋಗ ಸಹಾಯ ಮಾಡುತ್ತದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಬಿ.ಕೆ.ಗಂಗಾಧರ್ ಹೇಳಿದರು.
ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ ನಡೆದ ಯೋಗ ದಿನಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮಗೆ ಸಿಗುವ ೨೪ ಗಂಟೆಗಳಲ್ಲಿ ಒಂದು ಗಂಟೆಯನ್ನು ಯೋಗಕ್ಕಾಗಿ ಸಮಯವನ್ನು ಮೀಸಲಿಡಬೇಕು. ಯೋಗವನ್ನು ಬ್ರಾಹ್ಮಿ ಮೂಹೂರ್ತದಲ್ಲಿ ಮಾಡುವುದು ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಲಿದೆ. ಯೋಗದಿಂದ ಆತ್ಮಸ್ಥೆರ್ಯ ಹೆಚ್ಚಿಸಿಕೊಳ್ಳಬಹುದು ಹಾಗೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಶಕ್ತಿ ಯೋಗಕ್ಕೆ ಇದೆ. ನಮ್ಮ ಭಾರತ ಯೋಗ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುತ್ತದೆ ಎಂದರು.
ಯುವಕರಿಂದ ವೃದ್ಧರವರೆಗೂ ಯೋಗದ ಅವಶ್ಯಕತೆ ಇದೆ. ಮನುಷ್ಯನ ಪ್ರತಿ ಹಂತದಲ್ಲೂ ಯೋಗಾಸನದ ಅವಶ್ಯಕತೆ ಇದ್ದು, ಮನುಷ್ಯನ ದೇಹದ ಮೇಲೆ ಆಗುವ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯೋಗ ಸಹಕಾರಿಯಾಗಿ ಕೆಲಸ ಮಾಡಲಿದೆ. ಯೋಗವೇ ಜೀವನ, ಯೋಗವನ್ನು ಯವ್ವನದಲ್ಲಿಯೇ ಮಾಡಿದರೆ ಮುಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಮನ ಶಾಂತಿಯನ್ನು ಪಡೆಯಬಹುದು ಎಂದು ಹೇಳಿದರು.
ಶಾಲೆಯ ಸುಮಾರು ೧೫೦೦ ಕ್ಕೂ ಅಧಿಕ ಮಕ್ಕಳು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹಾಜರಿದ್ದರು.