। ಹೆಚ್ಚಾದ ಸೊಳ್ಳೆಗಳು
। ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ
। ಕ್ರಮ ಕೈಗೊಳ್ಳದ ಜನಪ್ರತಿನಿಧಿ, ಅಧಿಕಾರಿಗಳು
। ನೆರೆ-ಹೊರೆಯರಿಂದ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ
। ಕಸ ವಿಲೇವಾರಿ ಮಾಡಿಸದ್ದಿದ್ದರೆ ಪ್ರತಿಭಟನೆಗೆ ಮುಂದು
ಪ್ರತಿನಿಧಿ ವರದಿ ಸಕಲೇಶಪುರ
ಪಟ್ಟಣದ ಸುಭಾಷ್ ಮೈದಾನದ ಪಕ್ಕದಲ್ಲಿರುವ ತ್ಯಾಜ್ಯ ಕಸದಿಂದ ಬರುತ್ತಿರುವ ದುರ್ವಾಸನೆಯಿಂದ ಅಕ್ಕ-ಪಕ್ಕದ ಅಂಗಡಿ, ಮನೆಯವರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳಿಗೆ ಕಸ ವಿಲೇವಾರಿ ಸಮಸ್ಯೆ ಇದ್ದು, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇದರ ಬಗ್ಗೆ ಸರಿಯಾದ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬುದು ಪಟ್ಟಣದ ಜನರ ಆಕ್ರೋಶವಾಗಿದೆ.
ಮಳೆಗಾಲದಲ್ಲಿ ಕಸದ ರಾಶಿಯಿಂದ ದುರ್ವಾಸನೆ ಹೆಚ್ಚಾಗಿದ್ದು, ಇದರ ಸುತ್ತ ಮಳೆ ನೀರು ನಿಲ್ಲುವುದರಿಂದ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿವೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ. ಡೆಂಘೆಯಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬ ಭಯದಿಂದ ಅಕ್ಕ-ಪಕ್ಕದ ಜನರು ಬದುಕುವಂತಹ ಪರಿಸ್ಥಿತಿ ಉಂಟಾಗಿದೆ.
ಪ್ಲಾಸ್ಟಿಕ್ ನಿಂದ ಸಾವಿಗೀಡಾದ ದನಕರುಗಳು: ಇನ್ನು ಈ ಕಸದರಾಶಿಗೆ ದನಕರುಗಳು ಆಹಾರ ಹುಡುಕಿಕೊಂಡು ಬಂದು ಪ್ಲಾಸ್ಟಿಕ್ ತಿಂದು ಸಾವಿಗೀಡಾಗುತ್ತಿವೆ. ಅಲ್ಲದೆಹಳೆಯ ಸಂತೆ ಮೈದಾನದಲ್ಲಿ ಗ್ಯಾರೇಜ್ಗಳಿದ್ದ ಅಲ್ಲಿಗೆ ಯಂತ್ರ ಹಾಗೂ ವಾಹನ ರಿಪೇರಿಗಳಿಗೆ ಬರುವ ಜನರು ಕಸದ ರಾಶಿಯಿಂದ ಬರುವ ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ತಮ್ಮ ಕೆಲಸವನ್ನು ಮಾಡುವವರೆಗೂ ಆಡಳಿತ ಅಧಿಕಾರಿಗಳಿಗೆ ಬೈಯುತ್ತಾ ನಿಲ್ಲುವಂತಾಗಿದೆ.
ಅಧಿಕಾರಿಯಿಂದ 15 ದಿನಗಳೊಳಗೆ ಸ್ಥಳಾಂತರಿಸುವ ಹಾರಿಕೆ ಉತ್ತರ: ಪುರಸಭೆ ಅಧಿಕಾರಿ ರಮೇಶ್ ಅವರಿಗೆ ಈ ಬಗ್ಗೆ ತಿಳಿಸಿದರೆ ಅವರು 15 ದಿನಗಳೊಳಗೆ ಇದನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂಬ ಹಾರಿಕೆಯ ಉತ್ತರವನ್ನು ನೀಡುತ್ತಿದ್ದು, ಇದು ಜನರ ಕೆಂಗಣ್ಣಿಗೆ ಕಾರಣವಾಗಿದೆ. ಜತೆಗೆ ದುರ್ವಾಸನೆ ಬರದಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಆದೇಶವಿದ್ದರೂ ಯಾವುದೇ ರೀತಿಯ ಬ್ಲೀಚಿಂಗ್ ಪೌಡರ್ ಹಾಕುತ್ತಿಲ್ಲವೆಂಬುವುದು ಜನರ ಬೇಸರ.
ವರ್ಷಾನುಗಟ್ಟಲೆಯಿಂದ ಈ ಸಮಸ್ಯೆ ಇದ್ದರೂ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದ ಅಧಿಕಾರಿಗಳು. ನೊಂದ ಜನರು ಹಾಗೂ ಸಂಘಟನೆಗಳ ಮೂಲಕ ದೊಡ್ಡ ಮಟ್ಟದ ಪ್ರತಿಭಟನೆಗೆ ದಾರಿ ಮಾಡಿ ಕೊಡುತ್ತಿರುವುದಂತೂ ನಿಜ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಇದರ ಬಗ್ಗೆ ಗಮನಹರಿಸಿ ಕಸ ವಿಲೇವಾರಿ ಮಾಡಿಸುವಂತೆ ಆಗ್ರಹಿಸಿದ್ದಾರೆ.
——————
ಹೇಳಿಕೆಗಳು
ಪ್ರತಿದಿನ ಕಸದ ರಾಶಿಯಿಂದ ಬರುವ ದುರ್ವಾಸನೆಯಿಂದ ಮನೆಯಲ್ಲಿ ವಾಸಮಾಡಲು ಆಗುತ್ತಿಲ್ಲ, ರಾತ್ರಿ ಸಮಯದಲ್ಲಿ ಸೊಳ್ಳೆಗಳು ಮನೆ ಒಳಗೆ ಬರುತ್ತವೆ. ಮಳೆ ಬಂತೆಂದರೆ ವಾಸನೆ ಇನ್ನಷ್ಟು ಹೆಚ್ಚಾಗುತ್ತದೆ.
ಶಕುಂತಲಾ, ಸ್ಥಳೀಯ ನಿವಾಸಿ
ಕಸದ ರಾಶಿಯಿಂದ ಬರುವ ಕೆಟ್ಟ ವಾಸನೆಯಿಂದ ಹೋಟೆಲ್ಗೆ ಬರುವ ಗಿರಾಕಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಕಸದ ರಾಶಿಯಲ್ಲಿ ಹಾಕಿರುವ ಪ್ಲಾಸ್ಟಿಕ್ ಅನ್ನು ತಿಂದು ನಮ್ಮ ಮನೆಯ ಹಸು ಕೂಡ ಸಾವನ್ನಪ್ಪಿದೆ. ಅಧಿಕಾರಿಗಳು ಈಗಲಾದರೂ ಕಸವನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕಾಗಲಿ ಅಥವಾ ದುರ್ವಾಸನೆ ಬರದಂತೆ ಔಷಧ ಸಿಂಪಡಿಸುವುದಕ್ಕಾದರೂ ಮುಂದಾಗಬೇಕು.
ರಮೇಶ್, ಹೋಟೆಲ್ ಉದ್ಯಮಿ
ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈವರೆಗೆ ಇದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಈಗ ಕಸದರಾಶಿ ಹೆಚ್ಚಾಗಿದ್ದು, ಕೆಟ್ಟ ವಾಸನೆ ಬರುತ್ತಿದೆ. ಪುರಸಭೆ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ.
ವಿನೋದ್, ಉದ್ಯಮಿ, ನ್ಯೂ ಗಣೇಶ್ ಕ್ಯಾಂಟೀನ್
ಈ ಕಸದ ಸಮಸ್ಯೆಯ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಗಮನಕ್ಕೆ ತಂದಿದ್ದೇವೆ. ಮಳೆಗಾಲದಲ್ಲಿ ಇದರ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದ್ದೆ. ಪ್ರತಿದಿನ ರಾತ್ರಿ ಎರಡು ಗಂಟೆಗಳ ಕಾಲ ಜೆಸಿಬಿ ಯಂತ್ರದ ಮೂಲಕ ಕಸವನ್ನು ಅಕ್ಕ ಪಕ್ಕಕ್ಕೆ ಸರಿಸುವುದರಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತಿದೆ. ಯಾವುದೇ ರೀತಿಯ ಬ್ಲೀಚಿಂಗ್ ಪೌಡರ್ ಹಾಕುತ್ತಿಲ್ಲ. ಇದರಿಂದ ವಾಸನೆಯ ಜತೆಗೆ ಸೊಳ್ಳೆಗಳು ವಿಪರೀತವಾಗುತ್ತಿವೆ.
ಚಿದು ಮಾಲೀಕ, ಶ್ರೀ ಮಂಜುನಾಥ ಆಟೋ ವರ್ಕ್ಸ್
ಸಮಸ್ಯೆ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ರೀತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಈಗ ಈ ಸಮಸ್ಯೆ ಉಲ್ಬಣವಾಗಿದ್ದು, ಪಟ್ಟಣದ ಜನರಿಗೆ ದುರ್ವಾಸನೆ ಹಾಗೂ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಟ್ಟಿದೆ. ಈಗಲಾದರೂ ಕೂಡಲೇ ಪುರಸಭೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಕಸದ ರಾಶಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಬೇಕು.
ರಮೇಶ್ ಪೂಜಾರಿ, ಅಧ್ಯಕ್ಷರು, ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ.)
——————-
ಶಕುಂತಲಾ