- ಐವಿಎಫ್ ಆಕ್ಸೆಸ್ ಫರ್ಟಿಲಿಟಿ ಬಂಜೆತನದ ತಜ್ಞೆ ಡಾ.ಕೆ.ವಿ.ಕಾವ್ಯ ಅಭಿಪ್ರಾಯ
ಪ್ರತಿನಿಧಿ ವರದಿ ಬೇಲೂರು
ಬದಲಾದ ಅಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯಿಂದ ಇತ್ತೀಚೆಗೆ ಅನೇಕರಲ್ಲಿ ಬಂಜೆತನ ಕಾಡುತ್ತಿದೆ. ಮೂಢನಂಬಿಕೆಯಿಂದ ಬಂಜೆತನ ಪರಿಹರಿಸಲು ಸಾಧ್ಯವಿಲ್ಲ. ಬದಲಾಗಿ ವೈಜ್ಞಾನಿಕ ಚಿಕಿತ್ಸೆ ಅವಶ್ಯವಾಗಿದೆ ಎಂದು ಬೆಂಗಳೂರು ಐವಿಎಫ್ ಆಕ್ಸೆಸ್ ಫರ್ಟಿಲಿಟಿ ಬಂಜೆತನದ ತಜ್ಞೆ ಡಾ.ಕೆ.ವಿ.ಕಾವ್ಯ ಅಭಿಪ್ರಾಯಪಟ್ಟರು.
ಪಟ್ಟಣದ ದೇಗುಲ ರಸ್ತೆಯಲ್ಲಿನ ಕಾವೇರಿ ಕ್ಲಿನಿಕ್ ಅವರಣದಲ್ಲಿ ಲಯನ್ಸ್ ಕ್ಲಬ್ ಹಾಗೂ ಕಾವೇರಿ ಕ್ಲಿನಿಕ್ ಇವರ ಸಂಯುಕ್ತಾಶ್ರಯದಲ್ಲಿ ಐವಿಎಫ್ ಆಕ್ಸೆಸ್ ಉಚಿತ ಬಂಜೆತನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲವರು ಮಕ್ಕಳಿಲ್ಲ ಎಂಬ ಕಾರಣಕ್ಕೆ ದಂಪತಿಗಳು ಅಮಾವಾಸ್ಯೆ ದಿನ ಪೂಜೆ ನಡೆಸುವುದು, ಹರಕೆ ಕಟ್ಟುವುದಿಂದ ಕಾಲಹರಣ ಮಾಡುವ ಬದಲು ಲಗ್ನವಾದ ಮೂರು ವರ್ಷದ ಬಳಿಕ ಮಕ್ಕಳ ಆಗಲಿಲ್ಲ ಎಂದರೆ ಶೀಘ್ರವೇ ನುರಿತ ಬಂಜೆತನ ತಜ್ಞರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬೇಕಿದೆ ಎಂದರು.
ಊಟದ ಶೈಲಿಯಲ್ಲಿ ಬದಲಾವಣೆ ಆಗಿರುವುದರಿಂದ ಇಂದಿನ ಪೀಳಿಗೆಯಲ್ಲಿ ಹೆಚ್ಚು ತೂಕವಂತರಾಗಿ ಗರ್ಭಕೋಶದ ಸೋಂಕಿನಿಂದ ಋತುಚಕ್ರದಲ್ಲಿ ಬದಲಾವಣೆಯಿಂದ ಬಂಜೆತನ ಕಾಣಿಸಿಕೊಳ್ಳುವ ಅವಕಾಶ ಇರುತ್ತದೆ. ದಿನನಿತ್ಯ ಲಘು ವ್ಯಾಯಮ ಮತ್ತು ಪೌಷ್ಠಿಕ ಆಹಾರದ ಬಳಕೆಯಿಂದ ಸೂಕ್ತ ಬಂಜೆತನ ಬಗ್ಗೆ ತಜ್ಞರಿಂದ ಸಲಹೆ-ಸೂಚನೆ ಪಡೆದರೆ ಖಂಡಿತ ಅದನ್ನು ತಡೆಗಟ್ಟಬಹುದು, ಲಯನ್ಸ್ ಕ್ಲಬ್ ಮತ್ತು ಕಾವೇರಿ ಕ್ಲಿನಿಕ್ ವೈದ್ಯ ಡಾ.ಚಂದ್ರಮೌಳಿ ಅವರ ಸಾರಥ್ಯದಲ್ಲಿ ಇಂತಹ ಅರ್ಥಪೂರ್ಣ ಶಿಬಿರ ನಡೆಸಿದ್ದು ನಿಜಕ್ಕೂ ಉತ್ತಮವಾಗಿದೆ ಎಂದರು.
ಕಾವೇರಿ ಕ್ಲಿನಿಕ್ ಸೀನಿಯರ್ ಫ್ಯಾಮಿಲಿ ಫಿಸಿಷಿಯನ್ ಮತ್ತು ಬೇಲೂರು ಲಯನ್ಸ್ ಕ್ಲಬ್ ನಿಯೋಜಿತ್ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಬೇಲೂರು ಲಯನ್ಸ್ ಕ್ಲಬ್ ಕಳೆದ ಎರಡು ದಶಕದಿಂದ ಆರೋಗ್ಯ, ಪರಿಸರ, ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸೇವಾಕಾರ್ಯವನ್ನು ನಡೆಸುತ್ತಾ ಅರ್ಥಪೂರ್ಣ ಕಾರ್ಯಕ್ಕೆ ಒತ್ತು ನೀಡುತ್ತಾ ಬಂದಿದೆ. ನಾಗರಿಕತೆ ನಾಗಲೋಟದಲ್ಲಿ ಮಾನವ ಒತ್ತಡದ ಬದುಕಿನ ನಡುವೆಯಲ್ಲಿನ ಜೀವನ ಹತ್ತಾರು ಕಾಯಿಲೆಗಳಿಗೆ ಪೂರಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ಉಚಿತ ಬಂಜೆತನ ತಪಾಸಣೆ ಶಿಬಿರದಲ್ಲಿ ಸುಮಾರು ೧೧೫ ಕ್ಕೂ ಹೆಚ್ಚಿನ ದಂಪತಿ ಭಾಗವಹಿಸಿ ನುರಿತ ವೈದ್ಯರಿಂದ ಸಲಹೆ ಸೂಚನೆ ಪಡೆದಿದ್ದಾರೆ.
ವಿಶ್ವದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶದಲ್ಲಿ ಮೂಢನಂಬಿಕೆ ಹೆಚ್ಚು ಹಿಡಿತ ಸಾಧಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಕಾಣುತ್ತಿದೆ. ಮುಂದಿನ ದಿನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೂಡ ಶಿಬಿರ ನಡೆಸುವ ಬಗ್ಗೆ ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸುರೇಶಗೌಡ, ಕಾರ್ಯದರ್ಶಿ ಬಿ.ಟಿ.ರವಿಕುಮಾರ್, ಖಜಾಂಚಿ ಪ್ರಶಾಂತ್, ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಮಾಜಿ ಅಧ್ಯಕ್ಷ ಅಬ್ದುಲ್ ಲತೀಪ್ ಹಾಗೂ ಅದರ್ಶ, ಸಂತೋಷ್, ತಾರಾಮಣಿ, ನೌಷದ್ ಪಾಷ, ರುಬೀನಾ, ಗುರುಪಾದಸ್ವಾಮಿ, ಅಲಿಂ ಮತ್ತು ಚೇತನ್ ಕುಮಾರ್ ಹಾಜರಿದ್ದರು.