- ಅಂಕಿ ಅಂಶದಲ್ಲಿ 40 ವರ್ಷ ಮೇಲ್ಪಟ್ಟವರು ಮಾದಕ ಮಾರಾಟಗಾರರು । ನಿರ್ಜನ ಪ್ರದೇಶಗಳೇ ಅಡ್ಡೆ
- ಅಪಾಯಕಾರಿ ಚಟುವಟಿಕೆಯಿಂದ ಜೀವನವನ್ನೇ ಕಳೆದುಕೊಳ್ಳುತ್ತಿರುವ ಜನ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
20 ರಿಂದ 30 ವಯೋಮಾನದವರು ಮಾದಕ ಪ್ರಿಯರು. 40 ವರ್ಷ ಮೇಲ್ಪಟ್ಟವರು ಮಾದಕ ದ್ರವ್ಯ ಮಾರಾಟ, ಸಾಗಾಟಗಾರರು. ಇದು ಜಿಲ್ಲೆಯಲ್ಲಿ ಮಾದಕ ದ್ರವ್ಯ ಸಂಬಂಧಿಸಿದ ಅಂಕಿ ಅಂಶಗಳು.
ಜೂ.26 ಮಾದಕ ದ್ರವ್ಯ ವಿರೋಧಿ ದಿನಾಚರಣೆಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಮಾದಕ ದ್ರವ್ಯ ಬಳಕೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಶಿಕ್ಷಣ ಕೇಂದ್ರಗಳು, ನಿರ್ಜನ ಪ್ರದೇಶಗಳು ಇಂತಹವರ ಅಡ್ಡೆಯಾಗುತ್ತಿದೆ. ಪಟ್ಟಣ, ಗ್ರಾಮ ಮಟ್ಟದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ, ಸಾಗಣೆ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಭವಿಷ್ಯ ಕಳೆದುಕೊಳ್ಳುವ ಪರಿಣಾಮ ಯುವ ಪೀಳಿಗೆ ಹೆಚ್ಚಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತು ಬಳಕೆ ಮಾಡುತ್ತಿರುವುದು ಅರಿವಾಗಿದೆ. ಸುಲಭವಾಗಿ ದೊರೆಯುವುದರಿಂದ ಇತ್ತ ವಾಲುತ್ತಿರುವುದು ಕಾಣುತ್ತಿದ್ದೇವೆ.
ಮದ್ಯ ಸೇವನೆಗಿಂತ ಮಾದಕ ವಸ್ತು ಬಳಕೆ ಸುಲಭ ಎಂಬ ಮನಸ್ಥಿತಿಯಲ್ಲಿರುವುದನ್ನು ಕಾಣುತ್ತಿದ್ದೇವೆ. ಕಡಿಮೆ ಬೆಲೆಯಲ್ಲಿ ಶೇಖರಿಸಿಕೊಳ್ಳಲು ಸುಲಭ ಎಂಬ ಅಭಿಪ್ರಾಯ ಕೂಡ ಮಾದಕ ಪ್ರಿಯರಲ್ಲಿದೆ. ಮದ್ಯ ಸೇವನೆಯಿಂದ ವಾಸನೆಯಿಂದ ನೇರವಾಗಿ ಜನರಿಗೆ ತಿಳಿಯುತ್ತದೆ ಎಂಬ ಮುಂಜಾಗ್ರತೆ ಕೂಡ ಇದೆ. ಹೆಚ್ಚು ಹೊತ್ತು ಬೇರೊಂದು ಲೋಕದಲ್ಲಿ ತೇಲಬಹುದು ಎಂಬ ನಿರ್ಧಾರಗಳು ಭವಿಷ್ಯಕ್ಕೂ ಕಂಠಕವಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಕಳೆದೆರಡು ವರ್ಷಗಳಿಂದ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ. ಬಳಕೆ ಮಾಡುವವರ ಬಂಧನದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಇದರಿಂದ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಪೊಲೀಸ್ ಭಯ ಯುವ ಪೀಳಿಗೆ ಭವಿಷ್ಯ ಕಾಪಾಡಬೇಕೆಂಬ ಚಿಂತನೆ ಅಡಗಿದೆ.
ಗ್ರಾಮ ಮಟ್ಟದಲ್ಲಿ ಹೆಚ್ಚು ಬಳಕೆ: ಕೇವಲ ಪಟ್ಟಣ ಪ್ರದೇಶಕ್ಕೆ ಮೀಸಲಾಗಿದ್ದ ಮಾದಕ ವಸ್ತುಗಳ ಬಳಕೆ ಇತ್ತೀಚಿಗೆ ಗ್ರಾಮ ಮಟ್ಟದಲ್ಲೂ ದೊರೆಯುವಂತಾಗಿದೆ. ಮಾರಾಟ, ಸಾಗಾಟ ಮಾಡುವವರು ಗ್ರಾಮೀಣ ಪ್ರದೇಶ ಯುವ ಪೀಳಿಗೆಯನ್ನು ಕೇಂದ್ರೀಕರಿಸಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಸ್ಥಳಿಯವಾಗಿರುವ ವಿದ್ಯಾರ್ಥಿಗಳು, ಯುವ ಉದ್ಯಮಿಗಳು, ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಮುಂದುವರಿಯಲಾಗುತ್ತಿದೆ.
ನೋವು ಮರೆಯಲೂ ಮಾದಕ ಅವಲಂಬನೆ: ಮಾದಕ ವಸ್ತು ಬಳಸಿಕೊಂಡು ನೋವು ಮರೆಯಬೇಕು ಎಂದು ನಿರ್ಧರಿಸಿರುವವರು ಹೆಚ್ಚಿದ್ದಾರೆ. ಕಷ್ಟವನ್ನು ಮೆಟ್ಟಿನಿಲ್ಲಲಾಗದೆ, ಜಾರಿಕೊಳ್ಳಲು ಮಾದಕ ವಸ್ತು ಅವಲಂಬನೆ ಇದೆ. ಒತ್ತಡ ನಿಭಾಯಿಸಲಾಗದೆ, ಶಿಕ್ಷಣ ಕಲಿಯುವ ಮನಸ್ಸಿಲ್ಲದೆ ಭವಿಷ್ಯ ಕಳೆದುಕೊಂಡವರಿದ್ದಾರೆ. ತಾತ್ಕಾಲಿಕವಾಗಿ ದೊರೆಯುವ ಉತ್ಸಾಹ ಕಾಲ ಕಳೆದಂತೆ ನಿರುತ್ಸಾಹಕ್ಕೆ ಕಾರಣವಾಗಲಿದೆ.
ವ್ಯಸನದಿಂದ ಜೀವಕ್ಕೂ ಅಪಾಯ: ವೈದ್ಯರ ಅಭಿಪ್ರಾಯದಂತೆ ಸತತವಾಗಿ 10-20 ವರ್ಷಗಳ ಕಾಲ ಬಳಕೆ ಮಾಡುವವರು ಬದುಕುಳಿಯುವುದೇ ಇಲ್ಲ. ಪ್ರಾರಂಬಿಕ ಹಂತದಲ್ಲಿ ದೊರೆಯುವ ಉತ್ಸಾಹ ವ್ಯಸನಕ್ಕೆ ಕಾರಣವಾಗುತ್ತದೆ. ನಂತರ ಸೇವನೆ ಇಲ್ಲದೆ ಬದುಕು ಇಲ್ಲ ಎಂಬ ನಿರ್ಧಾರ ಅವರ ಜೀವನವನ್ನೇ ಕಸೆಯುತ್ತದೆ. ಪ್ರಾರಂಭಿಕ ಹಂತದಲ್ಲಿ ಅಪಾಯ ಅರಿತು ಹೊರ ಬಂದಾಗ ಸಾಮಾನ್ಯರಂತೆ ಬದುಕಬಹುದು. ವ್ಯಸನದಿಂದ ಮಾನಸಿಕ ಅಸ್ವಸ್ಥತೆ, ಆರ್ಥಿಕ ನಷ್ಟ, ದೈಹಿಕವಾಗಿ ಪರಿಣಾಮ ಹೆಚ್ಚಾಗುತ್ತದೆ. ಆತ್ಮಹತ್ಯೆಯಂತಹ ನಿರ್ಧಾರಗಳು ತೆಗೆಯುವ ಹಂತಕ್ಕೆ ಬರುತ್ತಾರೆ, ಇದು ಅಪಾಯಕಾರಿ. ಇಂತಹ ಸಾಕಷ್ಟು ಪ್ರಕರಣಗಳಲ್ಲಿ ನೀರಿಗೆ ಬಿದ್ದು ಜೀವ ಕಳೆದುಕೊಂಡವರು ಕೂಡ ಹೆಚ್ಚಾಗುತ್ತಿದೆ.
ಒಂದುವರೆ ವರ್ಷಗಳಲ್ಲಿ 132 ಪ್ರಕರಣಗಳು: ಎನ್ಡಿಪಿಎಸ್ ಆಕ್ಟ್ ಪ್ರಕಾರ 2023ರಲ್ಲಿ 101 ಪ್ರಕರಣ ದಾಖಲಾಗಿದೆ. 234 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. 89.217 ಕೆ.ಜಿ. ಗಾಂಜಾ, 154.26 ಗ್ರಾಂ. ಟ್ಯಾಬ್ಲೆಟ್, ಎಲ್ಎಸ್ಡಿ 9 ಬ್ಲಾಕ್ಸ್, 3.4 ಗ್ರಾಂ. ಕೊಕೆನ್ ವಶಕ್ಕೆ ಪಡೆಯಲಾಗಿದೆ. 2024 ರಲ್ಲಿ 31 ಪ್ರಕರಣ ದಾಖಲಾಗಿದ್ದು, 55 ಆರೋಪಿಗಳ ವಶವಾಗಿದೆ. 8.249 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ವರ್ಷದಲ್ಲಿ ಜಾಗೃತಿ: ಪೊಲೀಸ್ ಇಲಾಕೆ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. 2022 ರಲ್ಲಿ 51 ಜಾಗೃತಿ ಕಾರ್ಯಕ್ರಮ, 2023 ರಲ್ಲಿ 58, 2024 ರಲ್ಲಿ 25 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮದ ಬಗ್ಗೆ ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣ, ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ವಿಶೇಷ ರೀತಿಯಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಮಾದಕ ವಸ್ತು ಸೇವನೆ ಬಿಟ್ಟು ಬನ್ನಿ ಉತ್ತಮ ಜೀವನ ಸಾಗಿಸಿ ಎಂಬ ಅರಿವು ಹೆಚ್ಚಾಗಬೇಕಿದೆ.
———————-
ಅಕ್ರಮವಾಗಿ ಮಾದಕ ವಸ್ತು ಬಳಕೆ, ಸೇವನೆ, ಸಾಗಾಟದ ವಿರುದ್ದ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತಿದೆ. ಇಂತಹ ಚಟುವಟಿಕೆ ಕಂಡು ಬಂದಲ್ಲಿ ಸಾರ್ವಜನಿಕರು ಭಯ ಬಿಟ್ಟು ಪೊಲೀಸ್ ಇಲಾಕೆಗೆ ಮಾಹಿತಿ ನೀಡಬಹುದು. ಇದರಿಂದ ಯುವ ಪೀಳಿಗೆಗಳ ಭವಿಷ್ಯ ಕಾಪಾಡಬಹುದು.
– ಕೆ.ರಾಮರಾಜನ್, ಪೊಲೀಸ್ ವರಿಷ್ಠಾಧಿಕಾರಿ, ಕೊಡಗು.
ಪ್ರಾರಂಭದ ದಿನಗಳಲ್ಲಿ ಸೇವನೆ ಮಾಡಿದಾಗ ಉತ್ಸಾಹ ಹೆಚ್ಚಿರುತ್ತದೆ. ಸೆಂಟರ್ ನರ್ವ್ ಸಿಸ್ಟಮ್ ಮೂಲಕ ಉತ್ಸಾಹ ಹೆಚ್ಚಿಸುತ್ತದೆ. ನಂತರದ ವರ್ಷಗಳಲ್ಲಿ ಸೇವನೆಯಿಂದ ಹೊರ ಬರುವುದೇ ಸೂಕ್ತ. ಮಾನಸಿಕ, ದೈಹಿಕ ಸಾಮರ್ಥ್ಯ ಕಳೆದುಕೊಂಡು ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
– ಡಾ.ಯತಿರಾಜ್, ತಾಲೂಕು ಆರೋಗ್ಯ ಅಧಿಕಾರಿ, ಪೊನ್ನಂಪೇಟೆ.
ಫೋಟೋ 25 ಎಂಡಿಕೆ 03 ; ಮಾದಕ ವಸ್ತು ಬಳಕೆ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮಗಳು
04 ; ಕೆ. ರಾಮರಾಜನ್,
05 ; ಡಾ. ಯತಿರಾಜ್,