ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್ ನೇತೃತ್ವದಲ್ಲಿ ತಹಸೀಲ್ದಾರ್ ಗೆ ಮನವಿ
ಪ್ರತಿನಿಧಿ ವರದಿ ಕೆ.ಆರ್.ನಗರ
ಮಾಜಿ ಸಚಿವ ಸಾ.ರಾ.ಮಹೇಶ್ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅವಧಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ತೆರವು ಮಾಡಲಾಗಿತ್ತು. ಅವರನ್ನು ಮತ್ತೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್ ನೇತೃತ್ವದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ, ೨೦೦೮ ರಿಂದ ೨೦೨೩ರವರೆಗೆ ೧೫ ವರ್ಷಗಳ ಅಧಿಕಾರದಲ್ಲಿದ್ದಾಗ ಸಾ.ರಾ.ಮಹೇಶ್ರವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕುರುಬ ಸಮುದಾಯ ಸೇರಿದಂತೆ ಇತರ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ತೆಗೆದು ಹಾಕಿ ಸ್ವಜಾತಿಯವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ದೂರಿದರು.
ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ವಜಾಗೊಳಿಸಿದ ಕಾರಣಕ್ಕಾಗಿ ಅವರ ಜೀವನ ಅತಂತ್ರವಾಗಿದೆ ಎಂದು ಆರೋಪಿಸಿದ ಆನಂದ್, ತಾವು ಅಧಿಕಾರ ದರ್ಪದಿಂದ ಮಾಡಿದ ಕೆಲಸವನ್ನು ಮರೆಮಾಚಿ ಈಗ ಪ್ರತಿಭಟನೆ ಮಾಡಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಸಚಿವರಾಗಿ ಕೆಲಸ ಮಾಡಿರುವ ನಿಮಗೆ ಸರ್ಕಾರಗಳು ಬದಲಾದಾಗ ವರ್ಗಾವಣೆ ಮಾಡುವುದು ಸಹಜ ಇದನ್ನು ಅರಿಯದೆ ವಿಧಾನಸಭೆ ಚುನಾವಣೆಯ ಸೋಲಿನ ಹತಾಷೆಯಿಂದ ಒಂದೇ ವರ್ಷಕ್ಕೆ ವಿಚಲಿತರಾಗಿ ಶಾಸಕ ಡಿ.ರವಿಶಂಕರ್ ವಿರುದ್ದ ಆರೋಪ ಮಾಡುತ್ತಿರುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಸರಿತಾ ಜವರಪ್ಪ, ಮುಖಂಡರಾದ ಕುಮಾರ್, ವಿಜಯಕುಮಾರ್, ರಾಮಚಾರಿ, ಚಿಕ್ಕೇಗೌಡ, ಜಗದೀಶ್, ಪ್ರಜ್ವಲ್, ಮೋಹನ್, ಗೋವರ್ಧನ್, ಐಶ್ವರ್ಯ, ಪುರುಷೋತ್ತಮ್, ಬಿ.ಡಿ.ಮಧು, ಪ್ರೀತಿ, ಅನುಪಮ ಮುಂತಾದವರು ಹಾಜರಿದ್ದರು.
೨೬ ಕೆಆರ್ಎನ್-೧೦:- ಕೆ.ಆರ್.ನಗರ ಪಟ್ಟಣದ ತಾಲೂಕು ಕಛೇರಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನೌಕರರನ್ನು ಪುನರ್ ಸೇರ್ಪಡೆ ಮಾಡಿಕೊಳ್ಳುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿಆನಂದ್ ನೇತೃತ್ವದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಅವರಿಗೆ ಮನವಿ ಸಲ್ಲಿಸಲಾಯಿತು.