ಜಪದಕಟ್ಟೆ ಏತನೀರಾವರಿ ಯೋಜನೆ ಲೋಕಾರ್ಪಣೆ * ೫೭ ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣ
ಕರ್ಪೂರವಳ್ಳಿ ಮಹದೇವ್ ಸಾಲಿಗ್ರಾಮ
ಸಾಲಿಗ್ರಾಮ ತಾಲೂಕಿನ ರೈತರ ಬಹುದಿನದ ಕನಸು ನನಸಾಗಿದ್ದು, ಮಹತ್ವಾಕಾಂಕ್ಷೆಯ ಜಪದಕಟ್ಟೆ ಏತನೀರಾವರಿ ಯೋಜನೆ ಲೋಕಾರ್ಪಣೆ ಸನ್ನಿಹಿತವಾಗಿದೆ.
೫೭ ಕೋಟಿ ರೂ. ಅಂದಾಜು ವೆಚ್ಚದ ಜಪದಕಟ್ಟೆ ಏತನೀರಾವರಿ ಯೋಜನಾ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಉದ್ಘಾಟನೆಯೊಂದೆ ಬಾಕಿ. ಜನವರಿ ೦೬,೨೦೨೨ ರಂದು ಆರಂಭಗೊಂಡ ಈ ಏತನೀರಾವರಿ ಯೋಜನೆ ನಿಗದಿತ ಕಾಲಾವಧಿಗಿಂತ ಕೊಂಚ ಹೆಚ್ಚು ಸಮಯ ತೆಗೆದುಕೊಂಡರೂ ಗುಣಮಟ್ಟದಿಂದ ಹಾಗೂ ಅಚ್ಚುಕಟ್ಟಾಗಿ ಕಾಮಗಾರಿ ಪೂರ್ಣಗೊಂಡಿದೆ.
೮೭ ಕೆರೆ-ಕಟ್ಟೆಗಳಿಗೆ ನೀರು: ಜಪದಕಟ್ಟೆ ಏತನೀರಾವರಿ ಯೋಜನೆಯಡಿ ಹೆಬ್ಸೂರು ಬಳಿ ಕಾವೇರಿ ನದಿಗೆ ಜಾಕ್ವೆಲ್ ಹಾಗೂ ಚುಂಚನಕಟ್ಟೆ ಅತ್ತಿಕಟ್ಟೆ ಅಣೆಕಟ್ಟೆ ಬಳಿ ಮತ್ತೊಂದು ಜಾಕ್ವೆಲ್ ನಿರ್ಮಾಣ ಮಾಡಲಾಗಿದೆ. ಹೆಬ್ಸೂರು ಬಳಿಯ ಜಾಕ್ವೆಲ್ಗೆ ತಲಾ ೬೫೦ ಎಚ್.ಪಿ.ಯ ಒಟ್ಟು ೪ ಪಂಪ್ಸೆಟ್, ಚುಂಚನಕಟ್ಟೆ ಜಾಕ್ವೆಲ್ನಲ್ಲಿ ತಲಾ ೫೦೦ ಎಚ್.ಪಿ.ಯ ಮೂರು ಮೋಟಾರ್ಗಳನ್ನು ಅಳವಡಿಸಲಾಗಿದೆ. ಈ ಎರಡು ಜಾಕ್ವೆಲ್ಗಳಿಂದ ಏಕಕಾಲಕ್ಕೆ ೫೨ ಕ್ಯೂಸೆಕ್ ಲಭ್ಯವಾಗಲಿದ್ದು, ೮೭ ಕೆರೆ-ಕಟ್ಟೆಗಳಿಗೆ ನೀರು ಹರಿಯಲಿದೆ.
ಯಾವ್ಯಾವ ಕೆರೆ-ಕಟ್ಟೆ?: ತಾಲೂಕಿನ ಮಾವನೂರು, ಗುಮ್ಮನಹಳ್ಳಿ, ಗಾಯನಹಳ್ಳಿ, ಲಕ್ಕಿಕುಪ್ಪೆ, ಮಳಲಿ, ಹೊನ್ನೇನಹಳ್ಳಿ, ಕೆಡಗ, ಬಳ್ಳೂರು, ಸಾಲಿಗ್ರಾಮ, ಎಲಾದಹಳ್ಳಿ, ಮಾದಾಪುರ, ರಾಂಪುರ, ಕುಂಬಾರಕಟ್ಟೆ, ಕಾಟ್ನಳು, ತಂದ್ರೆಕೊಪ್ಪಲು, ದೇವಿತಂದ್ರೆ, ಮೂಡಲಬೀಡು, ಕಳ್ಳಿಮುದ್ದನಹಳ್ಳಿ, ಅಂಕನಹಳ್ಳಿ, ಕುರುಬಹಳ್ಳಿ, ಮೇಲೂರು, ಚಿಕ್ಕನಾಯಕನಹಳ್ಳಿ, ಲಕ್ಷ್ಮೀಪುರ ಗ್ರಾಮಗಳ ಒಟ್ಟು ೮೭ ಕೆರೆಕಟ್ಟೆಗಳು ಈ ಯೋಜನೆ ವ್ಯಾಪ್ತಿಗೊಳಪಡಲಿವೆ.
ಆಗಸ್ಟ್ನಿಂದ ಜನವರಿವರೆಗೂ ಕಾವೇರಿ ನದಿಯಿಂದ ಈ ಎರಡು ಜಾಕ್ವೆಲ್ಗಳಿಂದ ನೀರು ಪಂಪ್ ಆಗಲಿದ್ದು, ಮಳೆಯಾಶ್ರಿತ ಪ್ರದೇಶಗಳ ಕೆರೆಕಟ್ಟೆಗಳು ಜೀವಕಳೆ ಪಡೆಯಲಿವೆ. ಕೆಲ ಕೆರೆಗಳಿಗೆ ಪೈಪ್ ಅಳವಡಿಸಲಾಗಿದ್ದರೆ, ಮತ್ತಷ್ಟು ಕೆರೆಗಳಿಗೆ ಮುಖ್ಯಪೈಪ್ನಿಂದ ಹಾರಂಗಿ ಎಡದಂಡೆ ನಾಲೆಗೆ ಹರಿಸಿ ನೀರು ಪೂರೈಕೆ ಮಾಡಲಾಗುವುದು.
————-
ಬಾಕ್ಸ್ ಐಟಂ
ಎರಡೂವರೆ ವರ್ಷದ ಹಿಂದೆ ೫೭ ಕೋಟಿ ರೂ. ಬಿಡುಗಡೆ
ಈ ಹಿಂದಿನ ಶಾಸಕ, ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಪರಿಶ್ರಮದ ಫಲವಾಗಿ ಎರಡೂವರೆ ವರ್ಷದ ಹಿಂದೆ ಜಪದಕಟ್ಟೆ ಏತನೀರಾವರಿ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ೫೭ ಕೋಟಿ ರೂ. ಬಿಡುಗಡೆ ಮಾಡಿತ್ತು. ಸಾ.ರಾ.ಮಹೇಶ್ ಅವರು ಬತ್ತದ ಕಣಜ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ಸಂಪೂರ್ಣ ನೀರಾವರಿ ಪ್ರದೇಶ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಗೆ ಹಣಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಈ ಯೋಜನೆ ಸಾಕಾರಗೊಂಡಿದ್ದು, ರೈತರಲ್ಲಿ ಹರ್ಷ ಮೂಡಿದೆ.
—–
ಕೋಟ್
ಜಪದಕಟ್ಟೆ ಏತನೀರಾವರಿ ಯೋಜನಾ ಕಾಮಗಾರಿ ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಉದ್ಘಾಟಿಸಲಾಗುವುದು. ಸದ್ಯದಲ್ಲೆ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಾಗುವುದು.
-ಡಿ.ರವಿಶಂಕರ್, ಶಾಸಕ
ಚಿತ್ರಶೀರ್ಷಿಕೆ:೧)ಸಾಲಿಗ್ರಾಮ ತಾಲೂಕಿನ ಹೆಬ್ಸೂರು ಬಳಿಯ ಜಪದಕಟ್ಟೆ ಏತನೀರಾವರಿ ಯೋಜನೆಯ ಜಾಕ್ವೆಲ್ ಉದ್ಘಾಟನೆಗೆ ಸಿದ್ಧಗೊಂಡಿದೆ.
೨)ಜಾಕ್ವೆಲ್ನಲ್ಲಿ ಅಳವಡಿಸಿರುವ ನೀರು ಪೂರೈಸುವ ಬೃಹತ್ ಪೈಪ್ಗಳು.