ಪ್ರತಿನಿಧಿ ವರದಿ ಕೆ.ಆರ್.ನಗರ
ಪಟ್ಟಣದ ಶ್ರೀ ಆದಿಶಕ್ತಿ ಬಡಾವಣೆಯ ಶ್ರೀ ಆದಿಶಕ್ತಿ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರ ವಿಗ್ರಹ ಪ್ರತಿಷ್ಠಪನೆ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ಜರುಗಿತು.
ಜೂ.೨೭ರ ಗುರುವಾರ ಬೆಳಗ್ಗೆ ೫.೩೦ಕ್ಕೆ ಶ್ರೀ ಆದಿಶಕ್ತಿ ಮಹಾಳಮ್ಮನವರ ದೇವಸ್ಥಾನದಿಂದ ತಾಯಿಯ ಉತ್ಸವ ಮೂರ್ತಿ ಕಾವೇರಿ ನದಿಗೆ ಹೊರಟು ಬೆಳಗ್ಗೆ ೭.೩೦ಕ್ಕೆ ಪೂರ್ಣ ಕಳಸ, ಕುಂಭಗಳನ್ನು ಹೊತ್ತು ಬಡಾವಣೆಯ ಎಲ್ಲ ಬೀದಿಗಳಲ್ಲಿ ತಮಟೆ ಮೆರವಣಿಗೆಯೊಂದಿಗೆ ಶ್ರೀ ಆದಿಶಕ್ತಿ ಬಡಾವಣೆಯಲ್ಲಿರುವ ಶ್ರೀದೇವಿಯವರ ಸನ್ನಿದಿಗೆ ಸೇರಿ ಸಂಜೆ ೬ ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಕಲಶಸ್ಥಾಪನೆ, ವಾಸ್ತು-ರಜೋಕ್ಷ ಹವನ ಮತ್ತು ಬಲಿಹರಣ ರಾತ್ರಿ ೧೦ ಗಂಟೆವರೆಗೆ ಜರುಗಿತು.
ಶುಕ್ರವಾರ ಬೆಳಗ್ಗೆ ೬ಗಂಟೆಗೆ ದುರ್ಗಾ ಹವನ, ೯ ಗಂಟೆಗೆ ಪುರ್ಣಾಹುತಿ, ೧೦ ಗಂಟೆಗೆ ಪೂಜೆ ಮತ್ತು ೧೧ ಗಂಟೆಗೆ ಮಹಾಮಂಗಳಾರತಿ, ಮಂತ್ರಪುಣ್ಯ, ಅವಧಾನ ಸೇವೆ ಕರ್ಕಾಟಕ ಲಗ್ನದಲ್ಲಿ ದೇವಿಯ ಪ್ರತಿಷ್ಠಪನೆ ಕಾರ್ಯಕ್ರಮವನ್ನು ನೆರವೇರಿತು.
ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತಲ್ಲದೆ ಪಟ್ಟಣದ ವಿವಿಧ ಬಡಾವಣೆಯ ಭಕ್ತರ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಹಾಕಾಳಿ ತಾಯಿ ಭಕ್ತರು ವಿವಿಧ ರೀತಿಯಲ್ಲಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರುವಂತೆ ಪ್ರಾರ್ಥಿಸಿ ಕೃತಾರ್ತರಾದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಧಾರ್ಮಿಕ ಕೆಲಸ ಕಾರ್ಯಗಳಿಂದ ಸಮಾಜ ಒಗ್ಗಟ್ಟಿನಿಂದ ನಡೆಯುತ್ತದೆ. ಬಡಾವಣೆ ಮತ್ತು ಗ್ರಾಮಗಳ ಆದಿದೇವತೆಗಳ ಹಬ್ಬ ಹರಿದಿನಗಳನ್ನು ಮಾಡಿ ನಾಡು ಸುಬಿಕ್ಷವಾಗಲಿ ಎಂದು ಪ್ರಾರ್ಥಿಸುವುದು ಭಕ್ತರ ಕರ್ತವ್ಯವಾಗಿದ್ದು ಪಟ್ಟಣದಲ್ಲಿ ಇಂತಹ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ನಮ್ಮೆಲ್ಲರಿಗೂ ಸಂತಸ ತರಿಸಿದೆ ಎಂದು ನುಡಿದರು.
ಪುರಸಭಾ ಸದಸ್ಯ ಮಿಕ್ಸರ್ ಶಂಕರ್, ಮಾಜಿ ಸದಸ್ಯ ರಂಗಸ್ವಾಮಿ, ದೊಡ್ಡ ಯಜಮಾನ ಮಿಕ್ಸರ್ ರಾಜು, ಚಿಕ್ಕಯಜಮಾನ ಕೆ.ಮಾಗಾಳಿ, ಶ್ರೀ ಆದಿಶಕ್ತಿ ಮಹಾಕಾಳಿ ಅಮ್ಮನವರ ಟ್ರಸ್ಟ್ ಅಧ್ಯಕ್ಷ ಬಿ.ಮಂಜುನಾಥ, ಕಾರ್ಯದರ್ಶಿ ಕೆ.ಎಂ.ಶ್ರೀನಿವಾಸ್, ಖಜಾಂಚಿ ಕೆ.ಕೃಷ್ಣ, ಸಲಹಾ ಸಮಿತಿ ಅಧ್ಯಕ್ಷ ಉಮೇಶ್, ಮುಖಂಡರಾದ ಮಾಗಳಿ, ಮಹದೇವ್, ಮೋಹನ್, ವಿಗ್ರಹ ವಾಸ್ತು ಶಿಲ್ಪಿಗಳಾದ ಅಣ್ಣಾಮಲೈ, ಸುಭಾಷ್ ಇನ್ನಿತರರು ಹಾಜರಿದ್ದರು.
೨೮ ಕೆಆರ್ಎನ್-೧:- ಕೆ.ಆರ್.ನಗರ ಪಟ್ಟಣದ ಶ್ರೀ ಆದಿಶಕ್ತಿ ಬಡಾವಣೆಯ ಶ್ರೀ ಆದಿಶಕ್ತಿ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರ ವಿಗ್ರಹ ಪ್ರತಿಷ್ಠಪನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.