ಪ್ರತಿನಿಧಿ ವರದಿ ತಲಕಾಡು
ತಲಕಾಡು ನದಿಯಾಚೆದಡದ ತಡಿಮಾಲಂಗಿ ಗ್ರಾಮದ ಮಾಜಿ ಸಚಿವ ದಿ. ಎಂ.ಎಸ್.ರಾಜಶೇಖರಮೂರ್ತಿ ಅವರ ಕುಟುಂಬದ ಶೀಲಾ ದೀಕ್ಷಿತ್ ಹಾಗು ಪವಿತ್ರ ಹಳಕಟ್ಟಿ ಮುನ್ನಡೆಸುತ್ತಿರುವ ಡಾ.ಫ.ಗು.ಹಳಕಟ್ಟಿ ಫೌಂಡೇಷನ್ ವತಿಯಿಂದ ವಚನ ಸಾಹಿತ್ಯದ ಸಂಪಾದಕ ಡಾ.ಫ.ಗು.ಹಳಕಟ್ಟಿ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದಾರೆ.
ಬೆಂಗಳೂರು ಗಾಂಧಿಭವನ ಕುಮಾರ ಕೃಪ ರಸ್ತೆ, ಕುಮಾರ ಪಾರ್ಕ್ ನಲ್ಲಿ ಜು.2ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಾನೂನು ಸಂಸದೀಯ ಹಾಗು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಹಿಸುವರು. ರಾಜ್ಯ ಕನ್ನಡ ಸಂಸ್ಕತಿ ಹಾಗು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪ್ರದಾನ ಇಲ್ಲಿ ನೆರವೇರಿಸಲಿದ್ದು, ಆಶಯ ನುಡಿ ನಾಡೋಜ ಡಾ.ಮನು ಬಳಿಗಾರ್ ನೆರವೇರಿಸುವರು.
ಪ್ರಶಸ್ತಿಗೆ ಭಾಜನರು:
ಸಾಹಿತ್ಯ ಕ್ಷೇತ್ರದ ಸಾಧನೆಗೆ ಸಾಣೇಹಳ್ಳಿ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣ ಕ್ಷೇತ್ರದ ಸಾಧನೆಗೆ ಡಾ.ಪ್ರಭಾಕರ ಕೋರೆ, ಸಮಾಜ ಸೇವಾ ಕ್ಷೇತ್ರದಿಂದ ಡಾ.ತೇಜಸ್ವಿನಿ ಅನಂತಕುಮಾರ್ ಅವರನ್ನು ಇಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗು ತಲಾ 1 ಲಕ್ಷ ರೂ. ನಗದು ಮೊತ್ತ ನೀಡಿ ಗೌರವಿಸಲಾಗುತ್ತದೆ ಎಂದು ಕಾರ್ಯನಿರ್ವಾಹಕ ಟ್ರಸ್ಟಿ ಪವಿತ್ರ ಹಳಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಫ.ಗು.ಹಳಕಟ್ಟಿ ಸಾಧನೆ ಸ್ಮರಣೆ:
ಶತಮಾನಗಳ ಕಾಲಗರ್ಭದಲ್ಲಿ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಸಂಶೋಧಿಸಿ ಸಂಪಾದಿಸಿ ಪರೀಷ್ಕರಿಸಿ ಲೋಕಕ್ಕೆ ವಚನ ಸಾಹಿತ್ಯದ ಸಂಚಯಗಳ ಪರಿಚಯದ ಜತೆ ಶ್ರೀಮಂತಗೊಳಿಸಿದ ಡಾ.ಫ.ಗು.ಹಳಕಟ್ಟಿ ಸಾಧನೆ ಅವಿಸ್ಮರಣೀಯ ಹಾಗು ಅನನ್ಯ ಹೀಗಾಗಿ ನಾಡಿನ ಜನತೆ ಅಭಿಮಾನದಿಂದ ಇವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಅಭಿಮಾನದಿಂದ ಕರೆದು ಗೌರವಿಸಿದ್ದಾರೆ. ಇದಲ್ಲದೆ ರಾವ್ ಬಹದ್ದೂರ್ ಹಳಕಟ್ಟಿ ಅವರು, ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು, ಸಹಕಾರ, ಕೃಷಿ, ಸಣ್ಣಕೈಗಾರಿಕೆ, ಸಿದ್ದೇಶ್ವರ ಬ್ಯಾಂಕ್, ವಾಣಿಜ್ಯ, ಪತ್ರಿಕಾರಂಗ, ಬಿಜಾಪುರದ ಬಿಎಲ್ ಡಿಇ ಸಂಸ್ಥೆ ಸೇರಿದಂತೆ ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸೇವೆ ಸಲ್ಲಿಸಿದ್ದು, ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ.
ಮಹಾಪುರುಷರ ಸ್ಮರಣೆಯಲ್ಲಿ ಕುಟುಂಬದ ಕುಡಿಗಳಾದ ಶೀಲಾ ಹಳಕಟ್ಟಿ, ಪವಿತ್ರ ಹಳಕಟ್ಟಿ , ಡಾ.ಫ.ಗು.ಹಳಕಟ್ಟಿ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಪ್ರತಿವರ್ಷ ನಾನಾ ಸೇವಾ ಕೈಂಕರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
.