ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಭರವಸೆ । ಹನೂರಿನಲ್ಲಿ ಜನ ಸಂಪರ್ಕ ಸಭೆ
ಪ್ರತಿನಿಧಿ ವರದಿ ಹನೂರು
ವಿದ್ಯುತ್ ಇಲಾಖೆಯಿಂದ ರೈತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಮ್ ಸುಮ್ ಅಫ್ಸಬಾನು ತಿಳಿಸಿದರು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ರೈತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ಹಂತದಲ್ಲಿ ಆಗುವಂತಹ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು. ಸರ್ಕಾರ ಹಂತದಲ್ಲಿ ಆಗಬೇಕಾದ ಕಾರ್ಯಗಳಿಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪ್ರಸ್ತಾವನೆ ಸಲ್ಲಿಸಿ ಹಂತ-ಹಂತವಾಗಿ ಸಮಸ್ಯೆಗಳನ್ನ ಬಗೆಹರಿಸಲು ಶ್ರಮಿಸಿಲಾಗುವುದು ಎಂದರು.
ರೈತ ಮುಖಂಡರು ಹಾಗೂ ಗ್ರಾಹಕರು ಮಾತನಾಡಿ, ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಕಚೇರಿಗಳಿಗೆ ಅಳೆಯುವುದು ಮಾತ್ರ ತಪ್ಪಿಲ್ಲ. ಸಕಾಲದಲ್ಲಿ ಕೆಲಸ ಆಗುತ್ತಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.
ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇಲ್ಲ. ರಾತ್ರಿ ವೇಳೆ ವಿದ್ಯುತ್ ವ್ಯತ್ಯಾಯವಾಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಮಾಡಬೇಕು. ವಿದ್ಯುತ್ ಪರಿವರ್ತಕಗಳಿಗೆ ಅರ್ಜಿ ನೀಡಿದ್ದರು ವಿಳಂಬವಾಗುತ್ತಿದೆ. ಸಕಾಲಕ್ಕೆ ಟಿಸಿ ಅಳವಡಿಕೆ ಕಾರ್ಯವಾಗಬೇಕು. ವಿದ್ಯುತ್ ಕಂಬಗಳಲ್ಲಿ ಹಂಬುಗಳು ಬೆಳೆದಿದೆ ಇದನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿವಿಧ ಹಳ್ಳಿಗಳಿಂದ ಬಂದಿದ್ದ ಜನರು ನಾನಾ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ 15 ದೂರುಗಳು ಸಲ್ಲಿಸಿದರು. ಸೆಸ್ಕಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಂಕರ್, ಎಇ ರಂಗಸ್ವಾಮಿ, ಲೆಕ್ಕಾಧಿಕಾರಿ ವಿನೋದ್, ಆನಂದ್ ಕುಮಾರ್, ಜೆಇ ನವೀನ್, ಮಹೇಶ್, ರೈತ ಮುಖಂಡ ಚಂಗಡಿ ಕರಿಯಪ್ಪ, ಶಾಂತಕುಮಾರ್, ಮಾದಪ್ಪ, ಶಿವಮಲ್ಲಪ್ಪ, ಎಚ್. ಶಿವಪ್ಪ ಸೇರಿದಂತೆ ಸಾರ್ವಜನಿಕರು, ರೈತರು ಮತ್ತಿತರರು ಇದ್ದರು.