ಆಲಂಬಾಡಿಯಲ್ಲಿ ರೈತನ ಪರದಾಟ । ಸಾಲದ ಸುಳಿಯಲ್ಲಿ ಸಿಲುಕುವ ಭಯ
ಪ್ರತಿನಿಧಿ ವರದಿ ಹನೂರು
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಆಲಂಬಾಡಿಯಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಹಾಕಿಕೊಂಡಿದ್ದ ಸೋಲಾರ್ ತಂತಿ ಬೇಲಿ ಹಾಗೂ ಕಲ್ಲಿನ ಕಂಬಗಳನ್ನು ಅರಣ್ಯ ಸಿಬ್ಬಂದಿ ಏಕಾಏಕಿ ಕಿತ್ತು ಹಾಕಿದ್ದಾರೆ.
ತಾಲೂಕಿನ ಆಲಂಬಾಡಿ ಗ್ರಾಮದ ಪರಮಶಿವ ಎಂಬುವರು ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಕಲ್ಲು ಕಂಬ ಹಾಕಿಕೊಂಡಿದ್ದರು. ಆದರೆ ಜಮೀನಿಗೆ ಅಕ್ರಮವಾಗಿ ಹಾಕಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಂಬಗಳನ್ನು ಕಿತ್ತುಹಾಕಿದ್ದಾರೆ. ಇದರಿಂದ ರೈತ ಆತಂಕಕ್ಕೀಡಾಗಿದ್ದು, ಬೆಳೆಗೆ ಸೂಕ್ತ ರಕ್ಷಣೆಯಿಲ್ಲದೆ ನಷ್ಟವುಂಟಾಗಿ ಸಾಲದ ಸುಳಿ ಸಿಲುಕು ಆತಂಕ ಎದುರಾಗಿದೆ.
ಅಧಿಕಾರಿಗಳ ದರ್ಪ: ರೈತರಿಗೆ ನೆರವಾಗಬೇಕಿದ್ದ ಅಧಿಕಾರಿಗಳು ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಅಲ್ಲದೆ ಆಲಂಬಾಡಿ ಗ್ರಾಮದಲ್ಲಿ ಕಾಡು ಪ್ರಾಣಿಗಳ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದ್ದರೂ, ಅಧಿಕಾರಿಗಳು ರೈತ ಹಾಕಿರುವ ಕಲ್ಲು ಕಂಬಗಳನ್ನು ಕಿತ್ತು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಘಟನೆ ನನ್ನ ಗಮನಕ್ಕೆ ಬಂದಿದ್ದು, ಇದೀಗ ನಮ್ಮ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡು ಏನಾಗಿದೆ ಎಂಬುದನ್ನು ಅರಿತು ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ನಾಗೇಂದ್ರ ಪ್ರಸಾದ್, ಎಸಿಎಫ್, ಕಾವೇರಿ ವನ್ಯ ಜೀವಿ ವಿಭಾಗ