ಒಂದೇ ದಿನದಲ್ಲಿ 4 ಅಪಘಾತ । ಮಲೆ ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಹೆಚ್ಚಾದ ಪ್ರಕರಣ । ಡಿಕ್ಕಿ ಹೊಡೆದು ಅಪರಿಚಿತ ಕಾರು ಪರಾರಿ
ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯ ವಿವಿಧೆಡೆ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಗಂಭಿರವಾಗಿ ಗಾಯಗೊಂಡರೆ, ಇಬ್ಬರು ಮೃತಪಟ್ಟಿದ್ದಾರೆ.
ತಾಲೂಕಿನ ಬಸವಟ್ಟಿ ಗೇಟ್ ಸಮೀಪ ಬುಧವಾರ ರಾತ್ರಿ ಸ್ಕೂಟರ್ ಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿಯಾಗಿ, ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಮರವಾಡಿ ಗ್ರಾಮದ ಕಿಶೋರ್(48) ಹಾಗೂ ಮಹೇಶ್(46) ಮೃತರು.
ಇವರು ಬೈಕ್ ನಲ್ಲಿ ಸಂತೆಮರಹಳ್ಳಿಯಿಂದ ಕಮರವಾಡಿಗೆ ಹೋಗುತ್ತಿದ್ದ ವೇಳೆ ಮೈಸೂರು ಕಡೆಯಿಂದ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಂತೆಮರಹಳ್ಳಿ ಠಾಣೆಯ ಪೊಲೀಸರು ಆಗಮಿಸಿ, ನಿಗಮದ ಬಸ್ ವಶಕ್ಕೆ ಪಡೆದು ಮೃತ ದೇಹಗಳನ್ನು ಸಂತೆಮರಹಳ್ಳಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಈ ಸಂಬಂಧ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರು ತಾಲೂಕಿನ ಹೊಲಸು ಗುಡ್ಡೆ ಬೋರೆ ಸಮೀಪ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆರ್.ಎಸ್.ದೊಡ್ಡಿ ಗ್ರಾಮದ ಗುಜರಿ ವ್ಯಾಪಾರಿ ಗೋವಿಂದ ಗಾಯಗೊಂಡ ವ್ಯಕ್ತಿ. ಇವರು ಗುಜರಿ ವ್ಯಾಪಾರ ಮಾಡಿಕೊಂಡು ಮಂಗಳ ಗ್ರಾಮದಿಂದ ಹನ್ನೂರು ಪಟ್ಟಣದತ್ತ ಆಗಮಿಸುತ್ತಿದ್ದ ವೇಳೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಪರಿಣಾಮ ಗೋವಿಂದ ಅವರ ಎರಡು ಕೈ ಮುರಿದಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.
ಬೈಕ್ ಗೆ ಡಿಕ್ಕಿಹೊಡೆದ ಅಪರಿಚಿತ ವಾಹನ ಸ್ಥಳದಲ್ಲಿ ವಾಹನ ನಿಲ್ಲದೆ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ತುರ್ತುವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಪತ್ತೆಗೆ ಹನೂರು ಪೊಲೀಸರು ಬಲೆ ಬೀಸಿದ್ದಾರೆ. ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರಿಗೆ ಬರುತ್ತಿದ್ದ ಬೈಕ್ ಮತ್ತು ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಕಡೆಗೆ ಆಗಮಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದ್ದು, ತಾಲೂಕಿನ ಬೈರನತ್ತ ಗ್ರಾಮದ ನಿವಾಸಿ ಮಹದೇವಪ್ಪ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ.
ಕಾರ್ಯನಿಮಿತ್ತ ಕೊಳ್ಳೇಗಾಲ ಪಟ್ಟಣಕ್ಕೆ ತೆರಳಿ ವಾಪಸ್ ಬೈರನತ್ತ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಲೆಮಾದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಮಹದೇವಪ್ಪ ಅವರಿಗೆ ಬಲ ಕಾಲು ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣ ಸ್ಥಳೀಯರು ಆಂಬುಲೆನ್ಸ್ ಮೂಲಕ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ . ಪಿಎಸ್ಐ ಬಸವಣ್ಣ ಹಾಗೂ ಮುಖ್ಯಪೇದೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್-ಕಾರ್ ನಡುವೆ ಡಿಕ್ಕಿ:
ಚಾ.ನಗರದ ಸಂತೆಮರಳ್ಳಿ ಸಮೀಪದ ಕಮರವಾಡಿ ಬಳಿ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂತೆಮರಳ್ಳಿ ಕಡೆಯಿಂದ ತೆರಳುತ್ತಿದ್ದ ಬೈಕ್ ಗೆ ಮೈಸೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂಬಂಧ ಸಂತೆಮರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಸಂತೆಮರಹಳ್ಳಿ-ಚಾ.ನಗರ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ಬಳಿ 2 ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡಿದ್ದಾರೆ.
ಚಿತ್ರ: ಬೈಕ್ ಮತ್ತು ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಕಡೆಗೆ ಆಗಮಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದರೆ.
ಚಿತ್ರ: ಡಿಕ್ಕಿ ಹೊಡೆದ ಪರಿಣಾಮ ಕಾರ್ ಪ್ಲಟಿಯಾಗಿರುವುದು.
ಚಿತ್ರ: ಹುಲಸುಗುಡ್ಡೆ ಬೋರೆ ಸಮೀಪ ಅಪರಿಚಿತ ವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ನಿಲ್ಲದೆ ಪರಾರಿಯಾಗಿದೆ.