ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಸೂಚನೆ । ನೀರಿನ ಪರೀಕ್ಷೆ ಕೈಗೊಳ್ಳುವ ಕಾರ್ಯಗಾರ
ಪ್ರತಿನಿಧಿ ವರದಿ ಚಾಮರಾಜನಗರ
ನೀರಿನ ಮೂಲಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷಿಸಿ, ಫಲಿತಾಂಶವನ್ನು ಪ್ರತ್ಯೇಕ ಪುಸ್ತಕದಲ್ಲಿ ಕ್ರಮಬದ್ಧವಾಗಿ ನಮೂದಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದಲ್ಲಿ ಫೀಲ್ಡ್ ಟೆಸ್ಟ್ ಕಿಟ್(ಎಫ್.ಟಿ.ಕೆ) ಮತ್ತು ಎಚ್2ಎಸ್ ವಾಯೀಲ್ಸ್ ಉಪಯೋಗಿಸಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು, ಜನರಿಗೆ ನೀರನ್ನು ಕುದಿಸಿ ಆರಿಸಿ ಕುಡಿಯುವ ಅಭ್ಯಾಸದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳ ಮೂಲಕ ಜನರಿಗೆ ಕುಡಿಯುವ ನೀರನ್ನು ಕುದಿಸಿ ಆರಿಸಿ ಶುದ್ಧವಾದ ನೀರನ್ನು ಕುಡಿಯುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು.
ಶುದ್ದ ಕುಡಿಯುವ ನೀರಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಿನ ಸ್ಥಾವರ, ತೊಂಬೆಗಳನ್ನು ಶುಚಿಗೊಳಿಸಬೇಕು. ನೀರಿನ ಮೂಲಗಳನ್ನು ಪರೀಕ್ಷಿಸಿ ಫಲಿತಾಂಶವನ್ನು ಪ್ರತ್ಯೇಕ ಪುಸ್ತಕದಲ್ಲಿ ಹಾಗೂ ನೀರನ್ನು ಪರೀಕ್ಷಿಸಿದ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರತಿಯೊಬ್ಬರು ಶೌಚಾಲಯವನ್ನು ಬಳಸುವಂತೆ ಪ್ರೇರೆಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಹನೂರು ಮತ್ತು ಯಳಂದರು ತಾಪಂ ಇಒ ಉಮೇಶ್ ಮಾತನಾಡಿ, ನೀರಿನ ಸ್ಥಾವರಗಳು ಹಾಗೂ ನೀರಿನ ಸರಬರಾಜು ಪೈಪ್ಲೈನ್ ಸೋರಿಕೆ ಆಗುವುದನ್ನು ತಡೆಗಟ್ಟಬೇಕು. ವಾರದಲ್ಲಿ ಒಂದು ದಿನ ನೀರುಘಂಟಿಗಳನ್ನ ಒಳಗೊಂಡ ಸಭೆ ನಡೆಸಿ ನೀರಿನ ಮೂಲಗಳ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ ಎಂದು ಹೇಳಿದರು.
ಕೊಳ್ಳೇಗಾಲ ತಾಪಂ ಇಒ ಶ್ರೀನಿವಾಸ ಮಾತನಾಡಿ, ಸ್ಥಾವರಗಳಲ್ಲಿ ಹೆಚ್ಚುವರಿ ನೀರು ತುಂಬಿದಾಗ ತಕ್ಷಣ ನಿಲ್ಲಿಸುವಂತಹ ನೂತನ ತಂತ್ರಜ್ಞಾನ ಈಗಾಗಲೇ ಜಾರಿಗೆ ಬಂದಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನೀರು ಅನಾವಶ್ಯಕವಾಗಿ ಪೋಲಾಗುವುದನ್ನು ತಡೆಗಟ್ಟಬಹುದು ಎಂದರು.
ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಇಲಾಖೆಯಿಂದ ವಿತರಿಸಿರುವ ಫೀಲ್ಡ್ ಟೆಸ್ಟ್ ಕಿಟ್ (ಎಫ್.ಟಿ.ಕೆ) ಬಳಕೆ ಮಾಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ನೀರಿನ ಮೂಲಗಳನ್ನು ಪರೀಕ್ಷಿಸಿ ವರದಿಯನ್ನು ಜಿಪಂ ಕಳುಹಿಸಿಕೊಡಬೇಕು ಎಂದು ತಿಳಿಸಿದರು.
ಜಲ ಜೀವನ್ ಮಿಷನ್ (ಜೆ.ಜೆ.ಎಂ) ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಆಶಾ ರಮೇಶ್ ಮಾತನಾಡಿ, ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ನೀಡಲಾಗಿದ್ದು, ಈ ಸಂಬಂಧ ಪಂಚಾಯಿತಿ ಹಂತದಲ್ಲಿ ತರಬೇತಿ ನೀಡಲಾಗಿದೆ. ಅಲ್ಲದೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲು ಪೋಸ್ಟರ್, ಹ್ಯಾಂಡ್ಬುಕ್ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕು. ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ ಪುನರ್ ರಚನೆ ಮಾಡಬೇಕು. ಕಾಲ-ಕಾಲಕ್ಕೆ ಫೀಲ್ಡ್ ಟೆಸ್ಟ್ ಕಿಟ್ ಬಳಸಿ ಎಲ್ಲಾ ನೀರಿನ ಮೂಲಗಳನ್ನು ಪರೀಕ್ಷೆ ಮಾಡಿ ದಾಖಲೆ ನಿರ್ವಹಿಸಬೇಕೆಂದು ತಿಳಿಸಿದರು.
ಚಾಮರಾಜನಗರ ತಾಲೂಕು ಪ್ರಯೋಗಾಲಯದ ಹಿರಿಯ ವಿಶ್ಲೇಷಕ ಕೌಶಿಕ್, ಕೊಳ್ಳೇಗಾಲ ತಾಲ್ಲೂಕು ಪ್ರಯೋಗಾಲಯದ ವಿಶ್ಲೇಷಕ ಅನಿಲ್ಕುಮಾರ್, ಕಿರಿಯ ವಿಶ್ಲೇಷಕ ರವಿಕುಮಾರ್ ಫೀಲ್ಡ್ ಟೆಸ್ಟ್ ಕಿಟ್ ಬಳಸಿ ನೀರಿನ ಪರೀಕ್ಷೆ ವಿಧಾನಗಳು ಹಾಗೂ ಪರೀಕ್ಷೆ ಬಳಿಕ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಎಲ್ಲ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತರಬೇತಿಯಲ್ಲಿ ಇದ್ದರು.
4ಸಿಎಚ್ಎನ್.1ಎ: ಚಾ.ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಜಿಪಂ ಡಿ.ಎಸ್.ಲಕ್ಷ್ಮೀ ಉದ್ಘಾಟಿಸಿದರು.
4ಸಿಎಚ್ಎನ್.1ಬಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಪ್ರಯೋಗಾಲಯದ ವಿಶ್ಲೇಷಕರು ನೀರಿನ ಪರೀಕ್ಷೆ ವಿಧಾನಗಳು ಹಾಗೂ ಪರೀಕ್ಷೆ ಬಳಿಕ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು.