ಕ್ರಮಕ್ಕೆ ಮುಂದಾಗದ ನಗರಸಭಾ ಅಧಿಕಾರಿಗಳು
ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ
ಚಿಕ್ಕಮಾಳಿಗೆ ಕೊಳ್ಳೇಗಾಲ
ಪಟ್ಟಣದ ಬಸ್ತೀಪುರ ಮುಖ್ಯ ರಸ್ತೆ ಬದಿಯ ಸರ್ಕಾರಿ ಜಾಗವನ್ನು ನಿವಾಸಿಯೊಬ್ಬರು ರಾಜಾರೋಷವಾಗಿ ಅತಿಕ್ರಮಿಸಿಕೊಂಡು ಕಬ್ಬಿಣದ ಬೇಲಿ ಕೊಂಡಿದ್ದಾರೆ.
ಬಸ್ತೀಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಸವೇಶ್ವರ ನಗರದ 3ನೇ ಅಡ್ಡ ರಸ್ತೆಯಿಂದ 4ನೇ ಅಡ್ಡ ರಸ್ತೆಯವರೆಗೆ ಅಕ್ಕಿ ಗೋವಿಂದಪ್ಪ ಎಂಬುವರ ಮನೆ ಇದೆ. ಈ ಮನೆಗೆ ಹೊಂದಿಕೊಂಡಿರುವ ಬಸ್ತೀಪುರ ರಸ್ತೆಯ ಬದಿಯ ಸರ್ಕಾರಿ ಸ್ಥಳ ಅತಿಕ್ರಮವಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿ, ತೆರವಿಗೆ ಸ್ಥಳಿಯ ನಗರಸಭಾ ಅಧಿಕಾರಿಗಳು ಕ್ರಮವಹಿಸದಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಸುಮಾರು 40 ಅಡಿ ಅಗಲದ ರಸ್ತೆ ಇದಾಗಿದ್ದು, 30 ಅಡಿಗೆ ಡಾಂಬರು ಇದೆ. ಉಳಿದಂತೆ ರಸ್ತೆಯ 2 ಬದಿಯಲ್ಲಿ ಪಾದಚಾರಿಗಳಿಗೆ ಸ್ಥಳವಿದ್ದು, ಈ ನಡುವೆ ರಸ್ತೆ ಬದಿಯ ನಿವಾಸಿ, ನಗರಸಭಾ ಆಡಳಿತ ಹಿಂದೆ ಅಳವಡಿಸಿದ್ದ ಇಂಟರ್ಲಾಕ್ ಟೈಲ್ಸ್ ಸಮೇತ ಸ್ಥಳವನ್ನು ಕಬ್ಬಿಣದ ಸರಳಿನಿಂದ ತಮ್ಮದೇ ಜಾಗವೆಂಬಂತೆ ಆಕ್ರಮಿಸಿಕೊಂಡಿದ್ದು, ಇನ್ನಾದರೂ ನಗರಸಭಾ ಅಧಿಕಾರಿಗಳು ತಮ್ಮ ಜಾಣ ಮೌನದಿಂದ ಎಚ್ಚರಗೊಂಡು ರಸ್ತೆ ಸ್ಥಳವನ್ನು ಉಳಿಸಿಕೊಳ್ಳುವರೆ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ಕೋಟ್:
ನಗರಸಭೆಯ 18ನೇ ವಾರ್ಡಿಗೆ ಸೇರಿದ ಪಟ್ಟಣದ ಬಸವೇಶ್ವರ ನಗರದಲ್ಲಿ ನಿವಾಸಿಯೊಬ್ಬರು ರಸ್ತೆ ಜಾಗವನ್ನು ಆಕ್ರಮಿಸಿಕೊಂಡು ಕಬ್ಬಿಣದ ಬೇಲಿ ಹಾಕಿರುವ ಬಗ್ಗೆ ಶುಕ್ರವಾರ ನಗರಸಭೆಯ ರಾಜಸ್ವ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುತ್ತೇನೆ. ನಂತರದಲ್ಲಿ ಅವರ ವರದಿ ಆಧರಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ.- ಎ.ರಮೇಶ್, ನಗರಸಭಾ ಪೌರಾಯುಕ್ತ, ಕೊಳ್ಳೇಗಾಲ.
4ಕೆಜಿಎಲ್-4
ಫೋಟೋ ಶೀರ್ಷಿಕೆ: ಕೊಳ್ಳೇಗಾಲದ ಬಸವೇಶ್ವರನಗರದಲ್ಲಿ ನಿವಾಸಿಯೊಬ್ಬರು ಬಸ್ತೀಪುರ ಮುಖ್ಯ ರಸ್ತೆ ಜಾಗವನ್ನು ಅತಿಕ್ರಮಿಸಿಕೊಂಡು ಕಬ್ಬಿಣದ ಸರಳಿನಿಂದ ಬೇಲಿ ಹಾಕಿರುವುದು.