ಪ್ರತಿನಿಧಿ ವರದಿ ಕೊಳ್ಳೇಗಾಲ
2023- 24ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವನ್ನು ಕೃಷಿ ಅಧಿಕಾರಿಗಳು ತಾಲೂಕಿನ ಅರ್ಹ ರೈತರ ಕೈ ಸೇರದಂತೆ ಮಾಡಿದ್ದಾರೆ ಎಂದು ಆರೋಪಿಸಿ ಜು.8ರಂದು ಬೆಳಗ್ಗೆ 11 ಗಂಟೆಗೆ ಉಪ ವಿಭಾಗಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೊಳ್ಳೇಗಾಲ ತಾಲೂಕಿನ ಬಹುತೇಕ ರೈತರು ಉದ್ದು, ಅರಿಶಿಣ, ರಾಗಿ, ಭತ್ತ, ಈರುಳ್ಳಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆದಿದ್ದಾರೆ. ಈ ಸಂಬಂಧ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ 2023- 24ನೇ ಸಾಲಿನಲ್ಲಿ ವಿಮೆ ಕಂಪನಿಗಳಿಗೆ ರೈತರು ಆಯಾ ಬೆಳೆಗಳ ಅನುಸಾರವಾಗಿ ಬೆಳೆ ವಿಮೆ ಕಂತುಗಳನ್ನು ಪಾವತಿಸಿದ್ದಾರೆ. ಆದರೆ, ಸದರಿ ಬೆಳೆಗಳನ್ನು ಕಟಾವು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದುವರೆಗೂ ನೊಂದ ರೈತರಿಗೆ ಯಾವುದೇ ರೀತಿಯ ಬೆಳೆ ವಿಮೆ ಹಣಗಳು ಸಂದಾಯವಾಗಿಲ್ಲ. ಬದಲಾಗಿ ರೈತರು ಬೆಳೆ ವಿಮೆ ಸಮೀಕ್ಷೆ ಸಂದರ್ಭದಲ್ಲಿ ಹೆಚ್ಚಿನ ಬೆಳೆ ಬೆಳೆದಿದ್ದಾರೆ ಎಂದು ಸರ್ಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಹೀಗಾಗಿ, ಬೆಳೆ ವಿಮೆ ಸಕಾಲದಲ್ಲಿ ದೊರೆಯುತ್ತಿಲ್ಲ. ಪ್ರತಿ ವರ್ಷ ಮೇ ತಿಂಗಳಲ್ಲಿ ರೈತರ ಖಾತೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಹಣ ಸಂದಾಯವಾಗುತ್ತಿತ್ತು. ಇದರಿಂದ ಮುಂದಿನ ಬೆಳೆಯ ವ್ಯವಸಾಯಕ್ಕೆ ಅನುಕೂಲವಾಗುತ್ತಿತ್ತು.
ಈ ನಡುವೆ ಹಿಂದಿನ ವರ್ಷದ ಬೆಳೆ ವಿಮೆ ಸಮೀಕ್ಷೆ ಮಾಡಿರುವ ಅಧಿಕಾರಿಗಳು ವಿಮೆ ಕಂಪನಿಗಳ ಜತೆ ಶಾಮೀಲಾಗಿ ರೈತರಿಗೆ ಮೋಸ ಮಾಡಿರುತ್ತಾರೆ. ಆದ್ದರಿಂದ ಕೂಡಲೇ ಅಧಿಕಾರಿಗಳನ್ನು ಕರೆಯಿಸಿ, ಸಮೀಕ್ಷೆ ಮಾಡಿರುವ ಜಮೀನುಗಳು ಹಾಗೂ ರೈತರ ಹೆಸರುಗಳ ಬಗ್ಗೆ ಸಮರ್ಪಕ ವರದಿ ತರಿಸಿಕೊಂಡು ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಿ, ರೈತರಿಗೆ ಬರಬೇಕಾಗಿದ ಮುಂಗಾರು ಮತ್ತು ಹಿಂಗಾರು ಬೆಳೆ ಬಾಬ್ತು ಹಣವನ್ನು ಸಂಬಂಧಿಸಿದ ಕಂಪನಿಗಳಿಂದ ಅಥವಾ ಸರ್ಕಾರದಿಂದ ಭರಿಸಿಕೊಡಬೇಕು ಎಂದು ಕಳೆದ ಜೂ.18ರಂದು ಧರಣಿ ನಡೆಸಿ ಆಗ್ರಹಿಸಲಾಗಿತ್ತು. ಆದರೆ, ಇದುವರೆಗೂ ಜಿಲ್ಲಾಧಿಕಾರಿ ಅಥವಾ ಕೃಷಿ ಅಧಿಕಾರಿಗಳಾಗಲೀ ರೈತರ ಸಮಸ್ಯೆ ಬಗೆಹರಿಸಲಿಲ್ಲ. ಆದ ಕಾರಣ ಜು.8ರಂದು ಬೆಳಗ್ಗೆ 11 ಗಂಟೆಗೆ ಧರಣಿ ಆರಂಭಿಸಿ ಅಹೋರಾತ್ರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5ಕೆಜಿಎಲ್-4
ಫೋಟೋ ಶೀರ್ಷಿಕೆ:
ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ಅವರ ಫೋಟೋ ಇದೆ.