ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದೊಳಗೆ ರಸ್ತೆ ಸಾರಿಗೆ ಸಂಚರಿಸುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಗ್ರಾಮದ ವೃತ್ತದಲ್ಲಿ ರೈತ ಮುಖಂಡರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತ ರೈತರು ಕೆಲ ಕಾಲ ಕೊಳ್ಳೇಗಾಲದ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರ ವಿರುದ್ಧ ಘೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಕೊಳ್ಳೇಗಾಲ-ಮಹದೇಶ್ವರ ಬೆಟ್ಟಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ಮಾರ್ಗ ಮಧ್ಯೆ ಸಿಗುವ ದೊಡ್ಡಿಂದುವಾಡಿ ಗ್ರಾಮದೊಳಗೆ ಸಂಚರಿಸಬೇಕು ಎಂದು ಆಗ್ರಹಿಸಿ, ಈಗಾಗಲೇ 2 ಬಾರಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆಗಿದ್ದರೂ ಅಧಿಕಾರಿಗಳು ಕೊಟ್ಟ ಮಾತಿನಂತೆ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಮಾರ್ಗದಲ್ಲಿ ಹೆಚ್ಚುವರಿ ರಸ್ತೆ ಸಾರಿಗೆ ಸಂಚರಿಸುವಂತೆ ಕ್ರಮವಹಿಸಬೇಕು. ಮಹದೇಶ್ವರ ಬೆಟ್ಟದಿಂದ ದೊಡ್ಡಿಂಡಿವಾಡಿ ಗ್ರಾಮಕ್ಕೆ ಬರುವ ಪ್ರಯಾಣಿಕರನ್ನು ನಿರ್ವಹಕರು ಬಸ್ ಏರಲು ಬಿಡುತ್ತಿಲ್ಲ. ಆಗೊಮ್ಮೆ ಅವಕಾಶ ಕೊಟ್ಟರೂ ಗ್ರಾಮದಲ್ಲಿ ಇಳಿಸುತ್ತಿಲ್ಲ. ಈ ಉದ್ದಟತನವನ್ನು ನಿರ್ವಾಹಕರು ಬಿಡಬೇಕು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರನ್ನು ಭೇಟಿಯಾದ ಡಿಪೋ ವ್ಯವಸ್ಥಾಪಕ ಶಂಕರ್ ರೈತರ ಆಗ್ರಹಗಳಿಗೆ ಪ್ರತಿಕ್ರಿಯಿಸಿ, ಈಗಿನಿಂದಲೇ ದೊಡ್ಡಿಂದುವಾಡಿ ಗ್ರಾಮದೊಳಗೆ ಬಸ್ ಸಂಚರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇನ್ನೂ ಹೆಚ್ಚುವರಿ ಬಸ್ ಬಿಡುವ ವಿಚಾರ ಸರ್ಕಾರದ ಹಂತದಲ್ಲಿದ್ದು, ಮುಂದೆ ಈ ಬಗ್ಗೆಯೂ ಮೊದಲ ಆಧ್ಯತೆ ಮೇಲೆ ಬಸ್ ಬಿಡುವುದಾಗಿ ತಿಳಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಇದಕ್ಕೊಪ್ಪಿದ ಪ್ರತಿಭಟನಾ ನಿರತರು, ಈ ಬಗ್ಗೆ ಕೇವಲ ಭರವಸೆ ನೀಡುವುದಲ್ಲ, ಬದಲಾಗಿ ದೊಡ್ಡಿಂದುವಾಡಿ ಗ್ರಾಮಸ್ಥರಿಗೆ ನಿಜವಾಗಿ ಬಸ್ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಾಗಬೇಕು. ಇಲ್ಲದಿದ್ದರೇ, ಡಿಪೋಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಡಿ.ಶ್ರೀಕಂಠಸ್ವಾಮಿ, ತಾಲೂಕು ಅಧ್ಯಕ್ಷ ಉಗನೀಯ ಶಿವಮಲ್ಲು, ಪದಾಧಿಕಾರಿಗಳಾದ ರವಿನಾಯ್ಡು, ಮಧುವನಹಳ್ಳಿ ಬಸವರಾಜು, ಜಾನ್ ಕೆನಡಿ, ಪೆರಿಯ ನಾಯಗಂ, ವಸಂತ, ರವಿ, ಪ್ರಕಾಶ್, ಬಸವರಾಜು, ಚಾರ್ಲಿ, ಅಂಥೋಣಿಸ್ವಾಮಿ ಸೇರಿದಂತೆ ಇತರರು ಇದ್ದರು.
5ಕೆಜಿಎಲ್-5 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ವೃತ್ತದಲ್ಲಿ ಶುಕ್ರವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ರೈತ ಮುಖಂಡರು ಡೀಪೋ ಮ್ಯಾನೇಜರ್ ಶಂಕರ್ಗೆ ತರಾಟೆ ತೆಗೆದುಕೊಂಡರು.