ಪ್ರತಿನಿಧಿ ವರದಿ ಚಾಮರಾಜನಗರ
ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಪರಭಾರೆ ಹಾಗೂ ಆಡಳಿತ ಮಂಡಳಿಯ ವಿಚಾರವಾಗಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ತಾಲೂಕಿನ ಗಡಿ ಮನೆ, ಕಟ್ಟೆ ಮನೆ ಯಜಮಾನರುಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲು ಸೌಹಾರ್ದ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ತಾಲೂಕಿನ ಗಡಿಮನೆ, ಕಟ್ಟೆ ಮನೆ ಯಜಮಾನರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಹಾಗೂ ಯಜಮಾನರು ಮಾತನಾಡಿ, ಸಮಾಜದ ಆಸ್ತಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಆದಿ ಕರ್ನಾಟಕ ಅಭಿವೃದ್ದಿ ಸಂಘದ ಮತ್ತು ಆಸ್ತಿ ಸಂರಕ್ಷಣಾ ಸಮಿತಿಯ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ದಲಿತ ಸಮುದಾಯವೇ ತಲೆ ತಗ್ಗಿಸುವಂತಾಗಿದೆ. ಪ್ರತಿ ದಿನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಯು ನಡೆಯುತ್ತಿದೆ. ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಯನ್ನು ಪರಭಾರೆ ಮಾಡಿರುವವರಿಗೆ ಶಿಕ್ಷೆಯಾಗಲಿ. ಜತೆಗೆ ನ್ಯಾಯಾಲಯ ಇದರ ಬಗ್ಗೆ ಆದೇಶ ನೀಡುತ್ತದೆ. ಅದನ್ನು ನಾವೆಲ್ಲರು ಪಾಲಿಸೋಣ, ಗೌರವಿಸೋಣ. ಆದರೆ, ಆದಿ ಕರ್ನಾಟಕ ಅಭಿವೃದ್ದಿ ಸಂಘದ ವಿಚಾರದಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಮೇಲೆ ಗೊಬೆ ಕೂರಿಸುವ ಮತ್ತು ಅವರನ್ನು ಅಪರಾಧಿಗಳನ್ನಾಗಿ ಮಾಡುವ ಷಡ್ಯಂತರ ನಡೆಯುತ್ತಿದೆ. ಇದರಿಂದ ಬಹಳ ವರ್ಷಗಳಿಂದ ಅಧ್ಯಕ್ಷರಾಗಿ ಆಸ್ತಿಯನ್ನು ಸಂರಕ್ಷಣೆ ಮಾಡಿಕೊಳ್ಳುವ ಜತೆಗೆ ಸಂಘವನ್ನು ಯಶಸ್ವಿಯಾಗಿ ಮುನ್ನಡಿಸಿರುವ ಹಿರಿಯರಾದ ನಂಜುಂಡಸ್ವಾಮಿ ಅವರಿಗೆ ಅಗೌರವ ತರುವ, ವರ್ಚಸ್ಸಿಗೆ ಮತ್ತು ಘನತೆಗೆ ಚ್ಯುತಿ ತರುವಂತಹ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.
ಒಂದೇ ಸಮುದಾಯದ ನಾವುಗಳ ಕಿತ್ತಾಡಿಕೊಂಡು ದೂರವಿದ್ದರೆ ಯಾವುದೇ ಲಾಭ ವಿಲ್ಲ. ಇತರೇ ಮುಂದುವರಿದ ಸಮುದಾಯಗಳನ್ನು ನೋಡಿ ಬುದ್ದಿ ಕಲಿಯುವುದು ಬಹಳ ಇದೆ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೆ ಇತಿಶ್ರೀ ಹಾಡುವ ಉದ್ದೇಶದಿಂದ ತಾಲೂಕಿನ ಗಡಿ ಮನೆ, ಕಟ್ಟೆ ಮನೆಗಳ ಯಜಮಾನರುಗಳಿಗೆ ಸಂಪೂರ್ಣ ಜವಾಬ್ಧಾರಿಯನ್ನು ವಹಿಸಲು ಸಭೆಯಲ್ಲಿ ಒಕ್ಕೊರಲಿನಿಂದ ಚರ್ಚೆ ನಡೆದು, ಒಪ್ಪಿಗೆ ಸೂಚಿಸಲಾಯಿತು. ಇದನ್ನು ಚಾಲ್ತಿಗೆ ತರಲು ಚಾಮರಾಜನಗರ ಗಡಿ ಮನೆ ಯಜಮಾನರಿಗೆ ವಹಿಸಲು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು.
ಆದಿ ಕರ್ನಾಟಕ ಅಭಿವೃದ್ದಿ ಸಂಘದ ನಿರ್ದೇಶಕ ಜಿಪಂ ಮಾಜಿ ಸದಸ್ಯ ಎಸ್.ಮಹದೇವಯ್ಯ, ಮರಿಯಾಲಹುಂಡಿ ಯಜಮನರಾದ ಎಂ.ಎಸ್.ಮಾದಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಯಜಮಾನರಾದ ಹೊಂಗನೂರು ನಾಗಯ್ಯ, ನಲ್ಲೂರು ಪರಮೇಶ್ವರ್, ಉಡಿಗಾಲ ಕೊಂಗಳ್ಳಿ ಮಹದೇವ್, ಚಾ.ನಗರ ಮಾಧು, ನಾಗರಾಜು, ಚನ್ನಂಜಯ್ಯ, ಸೋಮವಾರಪೇಟೆ ಮಾಜಿ ನಗರಸಭಾ ಸದಸ್ಯ ಮಹದೇವಯ್ಯ, ಪುಟ್ಟಸ್ವಾಮಿ, ಬಸವರಾಜು, ಅಂಬೇಡ್ಕರ್ ಸೇನೆ ಅಧ್ಯಕ್ಷ ಗಣೇಶ್ ಪ್ರಸಾದ್, ಮೂಕಹಳ್ಳಿ ಜಯಶಂಕರ್, ಎಸ್.ಪಿ. ಮಹೇಶ್ ಹಾಗೂ ಸಮುದಾಯದ ಮುಖಂಡರು ಇದ್ದರು.
6ಸಿಎಚ್ಎನ್.2:ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ನಡೆದ ಗಡಿಮನೆ, ಕಟ್ಟೆ ಮನೆ ಯಜಮಾನರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿದರು.