- ಹದಗೆಟ್ಟ ಗ್ರಾಮೀಣ ರಸ್ತೆಗಳು
- ಬಿಳಿಗೇರಿ ಗ್ರಾಮದ ಬೆಳೆಗಾರರಿಂದ ತೀವ್ರ ಅಸಮಾಧಾನ
ಮಡಿಕೇರಿ : ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ ಇಂದಿಗೂ ಗ್ರಾಮೀಣ ರಸ್ತೆಗಳಲ್ಲಿ ಭಾರಿ ವಾಹನಗಳಲ್ಲಿ ಮರಗಳ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟು ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಳೆಗಾರ ಉಮೇಶ್ ಅಪ್ಪಣ್ಣ ಮಾತನಾಡಿ, ಮುಂಗಾರಿನ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ ಕುಂಬಳದಾಳು ಗ್ರಾಮ ವ್ಯಾಪ್ತಿಯ ಬಿಳಿಗೇರಿ ರಸ್ತೆಯಲ್ಲಿ ಟಿಪ್ಪರ್ಗಳ ಮೂಲಕ ಭಾರೀ ಪ್ರಮಾಣದ ಕಲ್ಲು, ಮಣ್ಣು, ಮರಳು ಸಾಗಾಟವಾಗುತ್ತಿದೆ.
ಮತ್ತೊಂದೆಡೆ ಭಾರಿ ವಾಹನಗಳಲ್ಲಿ ಸಿಲ್ವರ್ ಓಕ್ಸ್ ಮತ್ತು ಇತರೆ ಮರಗಳ ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿದರು. ಬಿಳಿಗೇರಿ ಗ್ರಾಮಕ್ಕೆ ತೆರಳಲು ಉತ್ತಮವಾಗಿದ್ದ ರಸ್ತೆ ಭಾರಿ ವಾಹನಗಳ ಸಂಚಾರದಿಂದ ಹದಗೆಡಲಾರಂಭಿಸಿದೆ. ಹಲವೆಡೆ ರಸ್ತೆ ಬದಿ ಹಾಳಾಗಿದ್ದರೆ, ವಿವಿಧೆಡೆ ಗುಂಡಿಗಳು ನಿರ್ಮಾಣವಾಗಿದೆ. ಕಡಿದ ಮರಗಳನ್ನು ಎಳೆಯಲು ಜೆಸಿಬಿ ಮತ್ತು ಕ್ರೇನ್ಗಳನ್ನು ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಮಾತಿಗೆ ಬೆಲೆ ಇಲ್ಲ: ಶಾಸಕ ಎ.ಎಸ್.ಪೊನ್ನಣ್ಣ ಅವರು ಜಿಲ್ಲಾಡಳಿತದ ಮೂಲಕ ಮುಂಗಾರಿನ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಆದರೆ, ಶಾಸಕರ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತನ್ನು ನೀಡದೆ ಭಾರಿ ವಾಹನಗಳ ಮೂಲಕ ಮರಗಳ ಸಾಗಾಟ, ಕಲ್ಲು, ಮಣ್ಣಿನ ಸಾಗಾಟ ನಡೆಯುತ್ತಿದೆ ಎಂದರು.
ಗ್ರಾಮೀಣ ರಸ್ತೆಯಲ್ಲೆ ಭಾರಿ ವಾಹನಗಳನ್ನು ನಿಲ್ಲಿಸಿಕೊಂಡು ಮರಗಳನ್ನು ತುಂಬುವ, ಸಾಗಾಟ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಪ್ರಶ್ನಿಸಲು ಸಾಧ್ಯವಾಗದ ಆತಂಕದ ವಾತಾವರಣವಿದೆ ಎಂದು ಉಮೇಶ್ ಅಪ್ಪಣ್ಣ ಕಳವಳ ವ್ಯಕ್ತಪಡಿಸಿದರು.
ಕಿರಿದಾದ ಗ್ರಾಮೀಣ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮರಗಳ ಸಾಗಾಟದಿಂದ ರಸ್ತೆಯಲ್ಲಿ ಏರ್ಪಟ್ಟ ಹೊಂಡ ಗುಂಡಿಗಳಿಂದ ದ್ವಿಚಕ್ರ ವಾಹನ ಚಾಲನೆ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ವಾಹನ ಸಂಚಾರ ನಿರ್ಬಂಧ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಮತ್ತು ಶೀಘ್ರ ಗಾಮೀಣ ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು.
ಬೆಳೆಗಾರರು ತೋಟದ ಮರಗಳನ್ನು ಸ್ವಂತ ಬಳಕೆಗೆ ಕಡಿಯಬೇಕಾದರೆ ಪರವಾನಗಿ ಪಡೆಯುವ ಸಂದರ್ಭ, ಮರಗಿಡಗಳನ್ನು ನೆಟ್ಟು ಬೆಳೆಸುವ ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ. ಆದರೆ, ಪ್ರಸ್ತುತ ಟಿಂಬರ್ ಲಾಬಿಗಳು ಮನಬಂದಂತೆ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದು, ಇವರಿಗೆ ಅಂತಹ ಮುಚ್ಚಳಿಕೆ ಇಲ್ಲವೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಳಿಗೇರಿ ಗ್ರಾಮದ ಬೆಳೆಗಾರರಾದ ತುಂತಜೆ ತಿಮ್ಮಯ್ಯ, ಪರ್ಲಕೋಟಿ ಮಾಚಯ್ಯ ಹಾಗೂ ಕೋಟೇರ ಶರಿ ಮುದ್ದಪ್ಪ ಉಪಸ್ಥಿತರಿದ್ದರು.