ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಡಿ.ಸಿ.ಮೋಹನ್ಕುಮಾರ್ ಅಭಿಪ್ರಾಯ
ಬಿಜಿಎಸ್ ಶಾಲೆಯಲ್ಲಿ ಇಂಟರ್ ಹೌಸ್ ಕ್ರೀಡಾಕೂಟ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಸೀಮಿತವಾಗದೇ ಆಟೋಟಗಳಲ್ಲಿ ಭಾಗವಹಿಸುವ ಮೂಲಕ ಜವಾಬ್ಧಾರಿಯನ್ನು ಅರಿತು ನಾಯಕತ್ವ ಗುಣ ಬೆಳಸಿಕೊಳ್ಳಬೇಕೆಂದು ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಡಿ.ಸಿ.ಮೋಹನ್ಕುಮಾರ್ ಹೇಳಿದರು.
ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ದೀಕ್ಷಾ ಕಾರ್ಯಕ್ರಮ ಮತ್ತು ಇಂಟರ್ ಹೌಸ್ ಕ್ರೀಡಾಕೂಟದಲ್ಲಿ ಮಾತನಾಡಿ, ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ. ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಸಧೃಡವಾಗಲು ಸಹಕಾರಿಯಾಗುತ್ತವೆ. ಸೋಲು, ಗೆಲುವು ಸಾಮಾನ್ಯ. ಸೋಲಿಗೆ ಕುಗ್ಗದೇ ಸತತ ಪ್ರಯತ್ನ ಮಾಡುವ ಮೂಲಕ ಗೆಲುವಿಗಾಗಿ ಪ್ರಯತ್ನಿಸಬೇಕೆಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಕೆ.ಆಶಾ ಮಾತನಾಡಿ, ಗುರುಗಳು ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುವ ಮನೋಭಾವ ಹೊಂದಿರಬೇಕು. ಪ್ರತಿಯೊಬ್ಬರು ಶಿಸ್ತು, ಸಂಯಮ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಸತ್ಯಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನೆಬಲೆ ಶ್ರೀನಿವಾಸ್ ಮಾತನಾಡಿ, ಕ್ರೀಡೆಗಳಿಗೂ ಸಮಾನ ಅವಕಾಶ ನೀಡಿದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕ್ರೀಡಾಕೂಟದಲ್ಲಿ ಗುಂಡು ಎಸೆತ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಮತ್ತು ವಿವಿಧ ರೀತಿಯ ಆಟಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು. ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು.