ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಉತ್ಪಾದಕರಿಗೆ ನೀಡುವ ಹಾಲಿನ ದರದಲ್ಲಿ ಪ್ರತಿ ಲೀ.೨ ರೂ ಕಡಿತದ ಆದೇಶ ಹಿಂಪಡೆದು, ಡಾ.ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಪ್ರತಿ ಲೀ.ಹಾಲಿಗೆ ೫೦ ರೂ ನಿಗದಿ ಸೇರಿ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಲಾಯಿತು.
ಡಿಎಫ್ಎಫ್ಐನ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ರಾಜ್ಯದ ರೈತರ ಪಾಲಿಗೆ ಹೈನುಗಾರಿಕೆಯು ವರದಾನವಾಗಿ ಮಾರ್ಪಟ್ಟಿದೆ. ಆದರೆ ಉತ್ಪಾದಕರಿಗೆ ನೀಡುವ ಹಾಲಿನ ದರದ ಕಡಿತ, ಪಶುಆಹಾರದ ಬೆಲೆ ಏರಿಕೆ, ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾರಕ ಕಾಯಿಲೆ ಸೇರಿದಂತೆ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದ ಹೈನುಗಾರಿಕೆ ನೇಪತ್ಯಕ್ಕೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತದ ದಿನಗಳ ಬೆಲೆ ಏರಿಕೆಯಿಂದ ಲೀ. ಹಾಲು ಉತ್ಪಾದನೆಗೆ ೪೫ ರೂ ವ್ಯಯವಾಗುತ್ತಿದೆ. ಇದರ ನಡುವೆ ಒಕ್ಕೂಟದಿಂದ ನೀಡುತ್ತಿರುವ ಕಡಿಮೆ ದರದಲ್ಲಿಯೂ ಕಡಿತ ಮಾಡುತ್ತಿರುವುದು ಹಾಲು ಉತ್ಪಾದಕರು ಹೈನುಗಾರಿಕೆಯಿಂದ ವಿಮುಖರಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಲೀ.೨ ರೂ ಕಡಿತದ ಆದೇಶ ಹಿಂಪಡೆದು, ಡಾ.ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಪ್ರತಿ ಲೀ. ಹಾಲಿಗೆ ೫೦ ರೂಗಳ ನಿಗಧಿಗೊಳಿಸಬೇಕೆಂದು ಒತ್ತಾಯಿಸಿದರು.
ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಬಳಿಕ ಶಿಬಿರ ಕಚೇರಿ ಉಪವ್ಯವಸ್ಥಾಪಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜಯರಾಮರೆಡ್ಡಿ, ಕರವೇ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಆದಿನಾರಾಯಣ, ಉದಯ್ಶಂಕರ್, ನರಸಿಂಹಗೌಡ, ಎಂ.ಶ್ರೀನಿವಾಸ್, ದೇವರಾಜಕುಮಾರ್, ಬೈರಪ್ಪ, ಎಂ.ಮುನಿವೆಂಕಟಪ್ಪ ಇದ್ದರು.