ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾಹಿತಿ
ಪ್ರತಿನಿಧಿ ವರದಿ ಬಾಗೇಪಲ್ಲಿ
ಜನರ ಸಮಸ್ಯೆಗಳ ಬಗೆಹರಿಸುವುದೇ ಜನತಾ ದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಜನತಾದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿ ಅಹವಾಲು ಸ್ವೀಕರಿಸಿ, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದರು. ಸಾರ್ವಜನಿಕರಿಂದ 100 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಸಹಿ ಹಾಕಿ ಮಂಜೂರು ಮಾಡುವಂತೆ ಸೂಚಿಸಿದ್ದಾರೆ.
ವಿವಿಧ ಶಾಲಾ-ಕಾಲೇಜುಗಳಲ್ಲಿ ಸೀಟುಗಳಿಗಾಗಿ ಪೋಷಕರು ತಂದ ಅರ್ಜಿಗಳು, ಕೊಳವೆ ಬಾವಿ ಅರ್ಜಿಗಳು, ಸಹಾಯ ಧನದ ಅರ್ಜಿಗಳು ಸೇರಿದಂತೆ ಅನಾರೋಗ್ಯಕ್ಕೆ ತುತ್ತಗಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಏರ್ಪಾಟು ಮಾಡಿದರು. ಉಚಿತ ನಿವೇಶನ ಮತ್ತು ಮನೆಗಳಿಗಾಗಿ ಬಂದ ಅರ್ಜಿಗಳನ್ನು ಪಡೆದು, ತಮ್ಮ ಆಪ್ತ ಕಾರ್ಯದರ್ಶಿಗೆ ಈ ಅರ್ಜಿಗಳನ್ನು ನೀಡಿ ಕೆಲಸ ಮಾಡುವಂತೆ ಆದೇಶ ನೀಡಿದರು. ಖಾಲಿ ನಿವೇಶನಗಳಿಗೆ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವಂತೆ ಆದೇಶ ನೀಡಿದರು.
ಜು.12 ರಂದು ಗೂಳೂರು ಹೋಬಳಿ ಗೋರ್ತಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ತಾಲೂಕು ಆಡಳಿತ ವತಿಯಿಂದ ತಾಲೂಕು ಮಟ್ಟದ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವ ಹಾಗೆ ಜನ ಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ತಪ್ಪದೆ ಸದುಪಯೋಗ ಪಡೆದುಕೊಳ್ಳಬೇಕು ತಿಳಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ತಾಪಂ ಕಾರ್ಯನಿರ್ವಾಣಾಧಿಕಾರಿ ಜಿ.ವಿ.ರಮೇಶ್, ಲೋಕೋಪಯೋಗಿ ಇಲಾಖೆ ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ನಾಗರಾಜು, ಆರ್.ಐ.ವೇಣು ಗೋಪಾಲ್, ಗುಂಟಿ ಗಾನಪಲ್ಲಿ ಮಂಜುನಾಥರೆಡ್ಡಿ, ಬುರಗಮಡಗು ನರಸಿಂಹಪ್ಪ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ ಸೇರಿದಂತೆ ಇತರೆ ಮುಖಂಡರು,ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
——
ಕೋಟ್
ಗ್ರಾಮೀಣ ಪ್ರದೇಶಗಳಿಂದ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಲವು ವರ್ಷಗಳಿಂದ ಜನತಾದರ್ಶನ ಎಂಬ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಸಮಸ್ಯೆಗಳನ್ನು ಅಲಿಸಿ ಅಹವಾಲು ಸ್ವೀಕರಿಸಿ, ತಕ್ಷಣ ಪರಿಹಾರಕ್ಕೆ ಮುಂದಾಗುತ್ತೆವೆ. ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬುವುದೇ ಜನತಾದರ್ಶನದ ಮುಖ್ಯ ಉದ್ದೇಶವಾಗಿದೆ.
– ಎಸ್. ಎನ್. ಸುಬ್ಬಾರೆಡ್ಡಿ, ಶಾಸಕ.