ಆಡಳಿತದಲ್ಲಿ ಸುಧಾರಣೆ ಆಗಬೇಕು
ಅಧಿಕಾರಿಗಳು, ಜನ ಪ್ರತಿನಿಧಿಗಳಿಂದ ಸಲಹೆಗಳ ಆಲಿಕೆ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಆಡಳಿತದಲ್ಲಿ ಸುಧಾರಣೆ ಆಗಬೇಕು. ತೆರಿಗೆ, ಕರ ವಸೂಲಿ ಸಮರ್ಪಕವಾಗಿ ಆಗುವ ಜತೆ ಜತೆಗೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಮತ್ತು ಯೋಜನೆಗಳು ತಲುಪಬೇಕು ಎನ್ನುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ ಅವರ ನೇತೃತ್ವದ ತಂಡ ಸಭೆ ನಡೆಯಿತು.
ಗುರುವಾರ ನಗರದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಪಂಚಾಯಿತಿ ವ್ಯವಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಂದ ಸಲಹೆಗಳನ್ನು ಆಲಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಪಂ, ಜಿಪಂ, ತಾಪಂ, ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಳ್ಳಬೇಕಿದೆ. ಆದ್ದರಿಂದ ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಉತ್ತಮ ಸಲಹೆಗಳನ್ನು ನೀಡಿದಲ್ಲಿ ಅದನ್ನು ಸರ್ಕಾರದ ಅನುಮೋದನೆ ಪಡೆದು ಮುಂದಿನ ದಿನಗಳಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಕೊಸಿಕೊಂಡು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಪರಿಣಾಮಕಾರಿ ಹಾಗೂ ಸುಸ್ಥಿರವಾಗಿ ಜಾರಿಗೊಳಿಸಬಹುದು. ಈಗಿರುವ ವ್ಯವಸ್ಥೆಯಲ್ಲಿ ಕುಂದು ಕೊರತೆಗಳು, ಲೋಪದೋಷಗಳು ಇದ್ದಲ್ಲಿ ಗಮನ ಸೆಳೆಯಲು ಆಯೋಗದ ಅಧ್ಯಕ್ಷರು, ಮೂರು ಜಿಲ್ಲೆಗಳ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಆಹ್ವಾನ ನೀಡಿದರು.
ಪ್ರತಿಕ್ರಿಯಿಸಿದ ಜನಪ್ರತಿನಿಧಿಗಳು ಗ್ರಾಪಂಗಳೇ ಸ್ಥಳೀಯ ಸರ್ಕಾರಗಳು, ಆಡಳಿತ, ಗ್ರಾಪಂಗಳ ಕಡೆ ವಿಕೇಂದ್ರೀಕರಣ ಆಗುತ್ತಿದೆ. ಆದರೆ ಹಣಕಾಸಿನ ಅನುದಾನದ ಕೊರತೆ ಇದೆ. 15ನೇ ಹಣಕಾಸು ಯೋಜನೆಯಡಿ ಒಂದು ಗ್ರಾಪಂಗೆ 41 ಲಕ್ಷ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಈ ಹಣ ಸಾಕಾಗುತ್ತಿಲ್ಲ. ಕನಿಷ್ಠ 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕು.
ಆಶ್ರಯ ಯೋಜನೆಯಡಿ ಮಂಜೂರಾಗುವ ಮನೆಗಳ ನಿರ್ಮಾಣಕ್ಕೆ ಸರ್ಕಾರ ಸಾಮಾನ್ಯ ವರ್ಗದವರಿಗೆ 1.2 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ರೂ. ಹಣ ಮಂಜೂರು ಮಾಡುತ್ತದೆ. ಈ ಯೋಜನೆಗಳಡಿ ಸೂರು ಕಲ್ಪಿಸುವುದು ತುಂಬಾ ಅವೈಜ್ಞಾನಿಕ ಲೆಕ್ಕಾಚಾರವಾಗಿದೆ. ಈ ಅನುದಾನದಲ್ಲಿ ಈಗಿರುವ ಬೆಲೆಗಳಲ್ಲಿ ಮನೆ ನಿರ್ಮಾಣ ಅಸಾಧ್ಯವಾದ ಮಾತಾಗಿದೆ. ಕನಿಷ್ಠ ಪಕ್ಷ ಆಶ್ರಯ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನಿಗದಿ ಮಾಡಬೇಕು. ಪ್ರಸ್ತುತ ಗ್ರಾಪಂಗಳಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ಗಳನ್ನು ಒಂದು ಬಾರಿಗೆ ಮನ್ನ ಮಾಡಬೇಕು. ಮುಂದಿನ ದಿನಗಳಲ್ಲಿ ರೈತರ ಕೃಷಿಗಾಗಿ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಸುವಂತೆ ಗ್ರಾಪಂಗಳ ನೀರು ಪೂರೈಸುವ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜನ ಪ್ರತಿನಿಧಿಗಳು ಹಣಕಾಸು ಆಯೋಗದ ಮುಂದೆ ಬೇಡಿಕೆಗಳು ಹಾಗೂ ವಿವಿಧ ಮನವಿಗಳನ್ನು ಸಲ್ಲಿಸಿದರು.
ಗ್ರಾಪಂಗಳ ಮಟ್ಟದಲ್ಲಿ ಕರ ವಸೂಲಿ ಮಾಡುವ ವ್ಯವಸ್ಥೆ ಸುಧಾರಿಸಬೇಕಿದೆ. ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಯುಪಿಐ ವ್ಯವಸ್ಥೆಯಡಿ ಕರ ಸಂಗ್ರಹಿಸುವ ವ್ಯವಸ್ಥೆ ಬರಬೇಕು. ಸಾರ್ವಜನಿಕರು ಆ ಕ್ಯೂಆರ್ ಕೋಡ್ ಮೂಲಕ ಸ್ವಯಂ ಪ್ರೇರಿತವಾಗಿ ಕರ ಕಟ್ಟುವಂತಹ ವಾತಾವರಣ ನಿರ್ಮಾಣ ಆಗಬೇಕು. ಯುಪಿಐ ವ್ಯವಸ್ಥೆಯಡಿ ಕರ ಸಲ್ಲಿಸದಿರುವಂತಹ ಸಾರ್ಜನಿಕರು ಗ್ರಾಪಂ ಸಿಬ್ಬಂದಿಗಳ ಮೂಲಕ ಕರ ಸಂಗ್ರಹಿಸುವ ವ್ಯವಸ್ಥೆ ಮುಂದುವರೆಯುವ ಜತೆಗೆ ಯುಪಿಐ ವ್ಯವಸ್ಥೆಯಡಿ ಕರ ಸಂಗ್ರಹಿಸುವ ವ್ಯವಸ್ಥೆ ಬರಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆಯು ಆಡಳಿತ ವ್ಯವಸ್ಥೆಯ ವಿಳಂಬಕ್ಕೆ ಕಾರಣವಾಗುತ್ತಿದೆ. ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಒತ್ತು ನೀಡಬೇಕು. ಒಂದು ಕೋಟಿಗಿಂತ ಅಧಿಕ ತೆರಿಗೆ ಸಂಗ್ರಹ ಮಾಡುವ ಗ್ರಾಪಂಗಳ ಲೆಕ್ಕ ಪತ್ರ ನಿರ್ವಹಣೆ, ಮೇಲ್ವಿಚಾರಣೆಯನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ನಿರ್ವಹಿಸುವ ಜತೆಗೆ ಹೆಚ್ಚಿನ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಬೇಕು. ಎಲ್ಲ ಗ್ರಾಪಂಗಳಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ಸೃಜಿಸಬೇಕು ಎಂದು ಅಧಿಕಾರಿಗಳು 5ನೇ ಹಣಕಾಸು ಆಯೋಗದ ಗಮನಕ್ಕೆ ತಂದರು.
5ನೇ ಹಣಕಾಸು ಆಯೋಗದ ಸದಸ್ಯರಾದ ಮಹಮದ್ ಸನಾವುಲ್ಲಾ, ಆರ್.ಎಸ್.ಪೊಂಡೆ, ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಬೆಂಗಳೂರು ಗ್ರಾಮಾಂತರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್.ಅನುರಾಧ, ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಂತಪ್ಪ, ಕೋಲಾರ ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಮೂರು ಜಿಲ್ಲೆಗಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.