ಶಾಸಕ ಕದಲೂರು ಉದಯ್ ಭರವಸೆ
ಪ್ರತಿನಿಧಿ ವರದಿ ಕೆ.ಎಂ.ದೊಡ್ಡಿ
ಗ್ರಾಮಗಳ ಸರ್ವಂಗೀಣ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಬೊಪ್ಪಸಮುದ್ರದಲ್ಲಿ ೨೫ ಲಕ್ಷ ರೂ. ವೆಚ್ಚದ ಗದ್ದೆಯಮ್ಮ ದೇವಸ್ಥಾನದ ಸುತ್ತಲು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.
ಸರ್ಕಾರದಿಂದ ಅನುದಾನ ತಂದು ಪ್ರತಿಯೊಂದು ಗ್ರಾಮಕ್ಕೂ ಬೇಕಾದ ಸೌಲಭ್ಯವನ್ನು ಹಂತ-ಹಂತವಾಗಿ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಕೀಡೆಯಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಧನ ಸಹಾಯ ನೀಡುವುದರ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲೂ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ತಿಟ್ಟಮಾರನಹಳ್ಳಿ ಏತನೀರಾವರಿ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಕಾಮಗಾರಿ ಅಂತಿಮಗೊಂಡು ಈ ಭಾಗದ ರೈತರಿಗೆ ನೀರಿನ ಅನುಕೂಲವಾಗಲಿದೆ. ಕೆಆರ್ಎಸ್ನಿಂದ ಕಾಲುವೆಗಳಿಗೆ ಬಿಟ್ಟಿರುವ ನೀರು ಕೊನೆಯ ಭಾಗಕ್ಕೂ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೊಪ್ಪಸಮುದ್ರ ಗ್ರಾಮದ ಮುಖಂಡರು ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಶಾಸಕರ ಅನುದಾನದಲ್ಲಿ ೨೫ ಲಕ್ಷ ರೂ. ಬಿಡುಗಡೆಗೊಳಿಸಲಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ರಾಜೀವ್, ಮುಖಂಡರಾದ ಮಡೇನಹಳ್ಳಿ ಪ್ರಸಾದ್, ಮಹೇಶ್ಪುಜಾರಿ, ಕುಂಟಯ್ಯ, ಗೆಂಡಗಯ್ಯ, ಸುಬ್ಬಿನಿಂಗಯ್ಯ, ಚಿಕ್ಕಲಿಂಗಯ್ಯ, ಲೋಕೇಶ್, ಪುಟ್ಟಸ್ವಾಮಿ ಸೇರಿದಂತೆ ಗದ್ದೆಯಮ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.
———–
೧೬ಏಒಆ-೧: ಬೊಪ್ಪಸಮುದ್ರದಲ್ಲಿ ೨೫ ಲಕ್ಷ ರೂ. ವೆಚ್ಚದ ಗದ್ದೆಯಮ್ಮ ದೇವಸ್ಥಾನದ ಸುತ್ತಲು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಕದಲೂರು ಉದಯ್ ನೆರೆವೇರಿಸಿದರು.
—————–