ಪಿ.ನೇರಲೆಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್ ಮಾಹಿತಿ
ಪ್ರತಿನಿಧಿ ವರದಿ ನಾಗಮಂಗಲ
ಚುನಾವಣೆಗಳು ಪ್ರಜಾಸತ್ತಾತ್ಮಕ ಸಮಾಜಗಳ ಮೂಲಭೂತ ಅಂಶವಾಗಿದ್ದು, ಆಡಳಿತದಲ್ಲಿ ಬಳಸಬಹುದಾದ ರಚನಾತ್ಮಕ ಪ್ರಕ್ರಿಯೆಯನ್ನು ಜಾರಿಗೆ ತರಲು ಪೂರಕವಾಗಿದೆ ಎಂದು ಪಿ.ನೇರಲೆಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್ ಹೇಳಿದರು.
ತಾಲೂಕಿನ ಪಿ.ನೇರಲೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಸಂಸತ್ತಿನ ಆಯ್ಕೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿ ಮಾತನಾಡಿದರು.
ಮತದಾನವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಸಲುವಾಗಿ ಈ ಶಾಲೆಯಲ್ಲಿ ಚುನಾವಣಾ ಕಾರ್ಯಕ್ರಮವನ್ನು ಏರ್ಪಡಿಸಿರುವುದು ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗಿದೆ ಎಂದರು.
ವಿಶೇಷವಾಗಿ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ, ಆರೋಗ್ಯ, ನೈರ್ಮಲ್ಯ, ಕ್ರೀಡಾ ಹಾಗೂ ಶಿಸ್ತು ಸಮಿತಿ ಇತ್ಯಾದಿ ಖಾತೆಗಳಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 18 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಆಯ್ಕೆಯಾದರು. ನಂತರ 8 ನೇ ತರಗತಿಯ ವಿದ್ಯಾರ್ಥಿ ಬಾಲಾಜಿ ಪ್ರಧಾನ ಮಂತ್ರಿಯಾಗಿ ಮತ್ತು 10 ನೇ ತರಗತಿಯ ಉಮೇಶ್ವರಿ ಉಪಪ್ರಧಾನಿಯಾಗಿ ಆಯ್ಕೆಯಾದರು. ನೂತನ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.
ಶಿಕ್ಷಕರಾದ ಶ್ರೀನಿವಾಸಯ್ಯ, ಶಹಬುದ್ದೀನ್ ಡಿ.ಬಣಕಾರ್, ವೆಂಕಟೇಶರಾವ್, ರಮೇಶ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಇದ್ದರು. ನಾಗಮಂಗಲ ತಾಲ್ಲೂಕಿನ ಪಿ.ನೇರಲೆಕೆರೆ ಸರ್ಕಾರಿ ಪ್ರೌಢಾವಸ್ಥೆಯಲ್ಲಿ ಮಂಗಳವಾರ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಹೆಚ್ಚು ಮತ ಪಡೆದು ಪ್ರಧಾನಮಂತ್ರಿಯಾಗಿ ಆಯ್ಕೆಯಾದ 8 ನೇ ತರಗತಿ ವಿದ್ಯಾರ್ಥಿ ಬಾಲಾಜಿ ಅವರನ್ನು ಮುಖ್ಯ ಶಿಕ್ಷಕರು ಅಭಿನಂದಿಸಿದರು.