ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆಕ್ರೋಶ
ಪ್ರತಿನಿಧಿ ವರದಿ ಮಂಡ್ಯ
ಕಾವೇರಿ ಪ್ರಾಧಿಕಾರದ ತೀರ್ಪು ಕುರಿತು ಲೋಕಸಭಾ ಸದಸ್ಯರು ಮಧ್ಯಪ್ರವೇಶಿಸಬೇಕೆಂದು ಒತ್ತಾಯ ಮಾಡಿದ್ದು. ಈ ಬಗ್ಗೆ ಅವರು ಯಾವುದೇ ರೀತಿಯ ಗಮನ ಹರಿಸದಿರುವುದು ಕಾವೇರಿ ಕೊಳ್ಳದ ರೈತರಿಗೆ ನೋವುಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೈರಾಗುವುದರ ಮೂಲಕ ಕಾವೇರಿ ಕೊಳ್ಳದ ರೈತರ ಮತ್ತು ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ಅದೇ ದಿನ ಪಾಂಡವಪುರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಸಭೆಗಿಂತ ಈ ರೀತಿಯ ಸ್ವಯಂ ಅಭಿನಂದನೆಯೇ ಮುಖ್ಯ ಎಂದು ತೋರ್ಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇವೇಗೌಡರು ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಮತ್ತು ಜಿಲ್ಲೆಯ ಹಿತಕ್ಕೆ ಸಭೆ ಕರೆದಾಗ ಧಾವಿಸುತ್ತಿದ್ದರು. ಅಲ್ಲದೆ ಚುನಾವಣೆಗೆ ಮುಂಚೆ ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿ ಈಗ ಶತಮಾನದ ಈ ಸಮಸ್ಯೆಯನ್ನು ಬಗೆಹರಿಸುವುದು ನಿಧಾನವಾಗುತ್ತದೆ ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತೀರಿ. ಮುಂದಿನ ದಿನಗಳಲ್ಲಿ ಈ ರೀತಿಯ ಉಡಾಫೆ ಮತ್ತು ಉದಾಸೀನತೆಗೆ ಜನತೆ ತಕ್ಕ ಉತ್ತರವನ್ನು ನೀಡುತ್ತಾರೆ. ಜರೂರಾಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಈಗಾಗಲೇ ಪ್ರಾಧಿಕಾರ ನೀಡಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಬೇಕೆಂದು ಎಂದು ಆಗ್ರಹ ಪಡಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಕರ್ ಮಾತನಾಡಿ, ಸರ್ವ ಪಕ್ಷಗಳ ಸಭೆಗೆ ಕುಮಾರಸ್ವಾಮಿ ಗೈರಾಗಿದ್ದಾರೆ. ಪಾಂಡವಪುರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಎಲ್ಲರೂ ಕುಮಾರಸ್ವಾಮಿಗೆ ಕಾಯುತ್ತಿದ್ದರು. ಜಿಲ್ಲೆಯ ಜನ ಆಶೀರ್ವಾದ ಮಾಡಿದರೆ ಕಾವೇರಿ ಸಮಸ್ಯೆ ಬಗೆಹರಿಸುವ ಮಾತು ಕೊಟ್ಟಿದ್ದರು. ಅದನ್ನು ನಂಬಿ ಜಿಲ್ಲೆಯ ಜನ ಹೆಚ್ಡಿಕೆಯನ್ನ ಗೆಲ್ಲಿಸಿ ಕೊಟ್ಟಿದ್ದಾರೆ ಎಂದರು.
ನೀವು ಈ ರೀತಿಯ ನಡೆದುಕೊಳ್ಳುವುದು ಸರಿಯಲ್ಲ. ದೇವೇಗೌಡರ ಆರೋಗ್ಯ ಸರಿ ಇದ್ದರೆ ಸಭೆಯಲ್ಲಿ ಭಾಗಿಯಾಗಿ ಸಲಹೆ ಕೊಡುತಿದ್ದರು. ಪ್ರಧಾನಿಗೆ ತಮ್ಮ ಮಗನ ಮೂಲಕ ಕಾವೇರಿ ಸಮಸ್ಯೆಗೆ ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು , ರುದ್ರಪ್ಪ , ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೋದಿ ಕರ್ನಾಟಕಕ್ಕೆ ಬಂದಾಗ ಬಿಜೆಪಿ ನಾಯಕರನ್ನ ಮಾತನಾಡಿಸಿ, ತಂದೆ-ಮಗ ಸೇರಿ ಕಾವೇರಿ ಸಮಸ್ಯೆಗಳನ್ನು ಬಗೆಹರಿಸಿ. -ಕೆ.ಬಿ.ಚಂದ್ರಶೇಕರ್, ಮಾಜಿ ಶಾಸಕ