ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಭಿಪ್ರಾಯ । ಜೆಡಿಎಸ್ ಪಕ್ಷದಲ್ಲೂ ಗೌರವ ಇಲ್ಲ । ಮೊದಲು ಕಲ್ಲು ಕ್ವಾರೆ ಗಣಿಗಾರಿಕೆಗೆ ಹಣ ಕಟ್ಟಲ್ಲಿ
ಪ್ರತಿನಿಧಿ ವರದಿ ಪಾಂಡವಪುರ
ಮಾಜಿ ಸಂಸದ ಪುಟ್ಟರಾಜುಗೆ ಜೆಡಿಎಸ್ ಪಕ್ಷದಲ್ಲೂ ಗೌರವ ಇಲ್ಲದಂತಾಗಿದೆ. ಚಲುವರಾಯಸ್ವಾಮಿ ಬಗ್ಗೆ ಟೀಕೆ ಮಾಡಿದರೆ ನೀವು ದೇವೇಗೌಡರ ಕುಟುಂಬಕ್ಕೆ ಹತ್ತಿರ ಆಗುತ್ತೀರಾ ಎಂದು ಭಾವಿಸಿದ್ದರೆ ನಿಮ್ಮ ಭ್ರಮೆ. ನಿಮ್ಮ ಕಪಟ ನಾಟಕ ನಮಗೂ ಗೊತ್ತಿದೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸವಾಲ್ ತಿಳಿಸಿದ್ದಾರೆ.
ಪಟ್ಟಣದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುಟ್ಟರಾಜು ನಡೆಸುತ್ತಿದ್ದ ಕಲ್ಲು ಕ್ವಾರೆ ಗಣಿಗಾರಿಕೆಯ ರಾಜಧನ ಕೋಟಿಗಟ್ಟಲೆ ಹಣ ಕಟ್ಟಿಲ್ಲ. ಇದರ ಬಗ್ಗೆ ಮೊದಲು ಮಾತನಾಡಿ, ರಾಜಧನ ಕಟ್ಟದೇ ಮೋಸ ಮಾಡಿರುವ ಬಗ್ಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಶೀಘ್ರದಲ್ಲಿ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರಿ ಭೂಮಿ ಕಬಳಿಕೆ: ಪುಟ್ಟರಾಜು ಕುಟುಂಬದ ಒಡೆತನದಲ್ಲಿ ನಡೆಸುತ್ತಿರುವ ಚಿನಕುರಳಿ ಗ್ರಾಮದ ಎಸ್ ಟಿಜಿ ಶಿಕ್ಷಣ ಸಂಸ್ಥೆಗೆ ಸರ್ಕಾರಿ ಜಾಗ ಎಷ್ಟೆಷ್ಟು ಒತ್ತುವರಿ ಮಾಡಿಕೊಂಡಿದ್ದೀರಾ ಬಹಿರಂಗಪಡಿಸಿ, ಜೊತೆಗೆ ಸರ್ಕಾರಿ ಅನುದಾನವನ್ನು ನಿಮ್ಮ ಎಸ್ ಟಿಜಿ ಶಾಲೆಗೆ ಬಳಸಿಕೊಂಡು ರಸ್ತೆ ನಿರ್ಮಿಸಿ, ಸರ್ಕಾರಿ ಅನುದಾನವನ್ನು ಸ್ವಂತಕ್ಕೆ ಬಳಸಿಕೊಂಡು ಕಾನೂನು ಬಾಹೀರ ಕೆಲಸ ಮಾಡಿದ್ದೀರಾ. ಮೊದಲು ಈ ಬಗ್ಗೆ ದಾಖಲೆ ಸಹಿತ ಜನತೆಗೆ ಬಹಿರಂಗವಾಗಿ ಉತ್ತರಿಸಬೇಕು ಎಂದು ಆರೋಪಿಸಿದರು.
ಪುಟ್ಟರಾಜು ಪಿಎಚ್ಡಿ ಮಾಡಿಲ್ಲ..!: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ತೀನಿ, ರಾಜಕೀಯದಲ್ಲಿ ನಾನು ಪಿಎಚ್ ಡಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದ ಪುಟ್ಟರಾಜು ಅವರ ಅಹಂಕಾರಕ್ಕೆ ಮೇಲುಕೋಟೆ ಕ್ಷೇತ್ರದ ಜನತೆ ನ್ಯಾಯ ಕೊಟ್ಟು, ಸೋಲಿಸಿ, ಮನೆಯಲ್ಲಿ ಕೂರಿಸಿದ್ದಾರೆ. ಜನರೇ ತಿರಸ್ಕಾರ ಮಾಡಿರುವಾಗ ನಿಮ್ಮ ಉಡಾಫೆ ಹೇಳಿಕೆ ಏಕೆ ಕೊಡುತ್ತೀರಾ ಎಂದು ಟೀಕಿಸಿದರು
ಬಾಡೂಟ ಉಳಿದಿದ್ದು ಎಷ್ಟು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಾಂಡವಪುರದಲ್ಲಿ ಅಭಿನಂದನಾ ಸಮಾರಂಭಕ್ಕೆ 50 ಸಾವಿರ ಮಂದಿ ಜನತೆ ಆಗಮಿತ್ತಾರೆ ಎಂದು ಘೋಷಣೆ ಮಾಡುತ್ತೀರಾ, ಆದರೆ ಸಮಾರಂಭಕ್ಕೆ ಎಷ್ಟು ಜನರು ಬಂದರು ಎಂದು ನಿಮಗೆ ಗೊತ್ತಿಲ್ಲವೇ, ಸಾವಿರಾರು ಜನರು ಊಟ ಮಾಡುವಷ್ಟು ಭೋಜನ ಉಳಿದಿದ್ದು ಏಕೆ, ನಿಮ್ಮ ನಿರೀಕ್ಷೆ ಸುಳ್ಳಾಗಲಿಲ್ಲವೇ. ನಮ್ಮ ನಾಯಕರ ಬಗ್ಗೆ ಹಗುರವಾಗಿ ಹೇಳಿಕೆ ಕೊಟ್ಟರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಎಚ್ಡಿಕೆ ಸರ್ವಪಕ್ಷದ ಸಭೆಗೆ ಗೈರು ಏಕೆ: ಮಂಡ್ಯದಿಂದ ಗೆದ್ದು ಕೇಂದ್ರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಏಕೆ ಕಾವೇರಿ ಬಗ್ಗೆ ಸರ್ವಪಕ್ಷದ ಸಭೆಗೆ ಹಾಜರಾಗಿಲ್ಲ. ಕಾವೇರಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷದ ಸಭೆಗೆ ಅಧಿಕೃತವಾಗಿ ಆಹ್ವಾನಿಸಿದ್ದರೂ ಉದ್ದೇಶಪೂರ್ವಕವಾಗಿ ಭಾಗಿಯಾಗದೇ, ಪಾಂಡವಪುರದ ಅಭಿನಂದನಾ ಸಮಾರಂಭಕ್ಕೆ ಹಾಜರಾಗಿದ್ದೀರಾ, ನೀವು ಚುನಾವಣೆ ಸಂದರ್ಭದಲ್ಲಿ ಘೋಷಿಸಿರುವ ಕಾವೇರಿಗೆ ನ್ಯಾಯ ಕೊಡಿಸುತ್ತೇನೆ ಎಂಬ ಮಾತು ಉಳಿಸಿಕೊಳ್ಳಿ ಎಂದು ಒತ್ತಾಯಿಸಿದರು.
ಹೋರಾಟ ಮಾಡ್ತೇವೆ, ಎಚ್ಚರಿಕೆ: ಸಮಾಜ ಸೇವಕ ಬಿ.ರೇವಣ್ಣ ಮಾತನಾಡಿ, ನಮ್ಮ ನಾಯಕರಾದ ಸಚಿವ ಚಲುವರಾಯಸ್ವಾಮಿ ಅವರು ಮೂರು ಬಾರಿ ಸಚಿವರಾಗಿ ಅನುಭವ ಹೊಂದಿದ್ದು, ಹಿರಿಯ ರಾಜಕೀಯ ಧುರೀಣರಾಗಿದ್ದಾರೆ. ಇಂತಹ ನಾಯಕರ ಬಗ್ಗೆ ಸಿ.ಎಸ್.ಪುಟ್ಟರಾಜು ಅವರು ಗೌರವಯುತವಾಗಿ ಮಾತಾಡುವುದನ್ನು ಕಲಿತುಕೊಳ್ಳಬೇಕು, ಇಲ್ಲದಿದ್ದರೆ ಪುಟ್ಟರಾಜು ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಾಗೂ ಚಲುವರಾಯಸ್ವಾಮಿ ಅಭಿಮಾನಿಗಳು ಮಂಡ್ಯ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ಸಮಾಜ ಸೇವಕ ಬಿ.ರೇವಣ್ಣ, ಪಾಂಡವಪುರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕೃಷ್ಣೇಗೌಡ, ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೊತ್ತತ್ತಿ ರಾಜಣ್ಣ, ವಿಜೇಂದ್ರ ಮೂರ್ತಿ, ವಕ್ತಾರ ಸಿ.ಎಂ.ದ್ಯಾವಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕಾಡೆ ಶ್ರೀಕಾಂತ್, ಕಾಂಗ್ರೆಸ್ ಎಸ್ಸಿ ಎಸ್ಟಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಅಂತನಹಳ್ಳಿ ಬಸವರಾಜ್, ದೊಡ್ಡವೆಂಕಟಯ್ಯ, ಹಾರೋಹಳ್ಳಿ ಭರತ್, ಧರ್ಮರಾಜ್ ಉಪಸ್ಥಿತರಿದ್ದರು.
ಪೋಟೋ: ಪಾಂಡವಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು.