ಹೊಸ ಆಪ್ ಜಾಗೃತಿ ಮುಡಿಸಿ
ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾಹಿತಿ
ಪ್ರತಿನಿಧಿ ವರದಿ ನಾಗಮಂಗಲ
ಸರ್ಕಾರವು ಬಗರ್ ಹುಕುಂ ಯೋಜನೆಯಾಗಿ ಹೊಸ ಆಪ್ ಅನ್ನು ಬಿಡಗಡೆ ಮಾಡಿದ್ದು, ಸರ್ವೇ ಮಾಡುವಂತಿಲ್ಲ, ಸ್ಕೆಚ್ ಮಾಡುವಂತಿಲ್ಲ, ಗ್ರಾಮಲೆಕ್ಕಿಗರ ಲಾಗಿನ್ ಗೆ ಅರ್ಜಿ ಹೋಗುತ್ತದೆ. ಅವರು ಆ ಜಮೀನಿನಲ್ಲಿ ಪರಿಶೀಲನೆ ನಡೆಸಿದರೆ ಅದು ತಾನಾಗಿಯೇ ಸ್ಕೆಚ್ ಆಗುವಂತೆ ವ್ಯವಸ್ಥೆಯನ್ನು ಅದರಲ್ಲಿ ಮಾಡಲಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾಹಿತಿ ನೀಡಿದರು.
ಪಟ್ಟಣದ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ವಿಶೇಷವೆಂದರೆ ನಾವು ಸಮಿತಿಯಲ್ಲಿ ಅನುಮೋದನೆ ಮಾಡಿದರೆ ಅಲ್ಲೆ ಪೋಡಿಯೂ ಆಗಿ, ಆರ್.ಟಿ.ಸಿಯೂ ಬಂದು ಅರ್ಜಿದಾರರಿಗೆ ಜಮೀನು ದುರಸ್ತಾಗುವ ವ್ಯವಸ್ಥೆಯನ್ನು ಹೊಸದಾಗಿ ಮಾಡಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರವು ಯಾವುದೇ ಸಮಸ್ಯೆಯಾಗದಂತೆ ಹೊಸದಾಗಿ ತಾಂತ್ರಿಕ ಬದಲಾವಣೆಯನ್ನು ಮಾಡುವ ಮೂಲಕ ಕಾನೂನುಬದ್ಧವಾಗಿ ಒಬ್ಬರಿಗೆ ಮಂಜೂರು ಮಾಡಿದ ಎರಡು ಮೂರು ತಿಂಗಳೊಳಗೆ ಅವರಿಗೆ ಹಕ್ಕು ದೊರೆಯುತ್ತದೆ ಎಂದರು.
ಅಲ್ಲದೇ ತಾಲೂಕಿನಲ್ಲಿ ಬಗರ್ ಹುಕುಂನ ಅರ್ಜಿ 53 ಅಡಿಯಲ್ಲಿ 2230 ಅರ್ಜಿಗಳು, ಜತೆಗೆ 57 ಅಡಿಯಲ್ಲಿ 14439 ಅರ್ಜಿಗಳು ಬಂದಿವೆ. 53 ಅರ್ಜಿಗಳನ್ನು ಮೊದಲು ತೆಗೆದುಕೊಳ್ಳಲಾಗುವುದು. ಈ ವಿಚಾರವಾಗಿ ಗ್ರಾಮಲೆಕ್ಕಿಗರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆದು ಅಗತ್ಯ ನಿರ್ದೇಶನವನ್ನು ನೀಡಲಾಗಿದೆ ಎಂದು ತಿಳಿಸಿದರು.
ನಿಯಮ ಮೀರಿ ಮಂಜೂರು: ಈ ಹಿಂದೆ ಎರಡೂವರೆ ವರ್ಷ ನಡೆದಿರುವ ಬಗರ್ ಹುಕುಂ ಸಮಿತಿಯ ಭೂ ಮಂಜೂರಾತಿಯ ಕುರಿತು ಇಡೀ ರಾಜ್ಯದಲ್ಲೇ ತನಿಖೆಯಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಮಳವಳ್ಳಿ ತಾಲೂಕಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನಿಯಮ ಮೀರಿ ಮಂಜೂರು ಮಾಡಿರುವುದು ಕಂಡು ಬಂದಿದ್ದು, ತನಿಖೆ ನಡೆಯುತ್ತಿದ್ದು, ಆ ವಿಚಾರವಾಗಿ ಎರಡುಮೂರು ಜನರು ಈಗಾಗಲೇ ಅಮಾನತ್ತಾಗಿದ್ದಾರೆ. ಆ ನಿಟ್ಟಿನಲ್ಲಿ ವರದಿ ಬಂದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ.
ತಹಸೀಲ್ದಾರ್ ನಯೀಂ ಉನ್ನೀಸಾ, ಆರ್.ಐ ಮಲ್ಲಿಕಾರ್ಜುನ್, ಬಗರ್ ಹುಕುಂ ಸಮಿತಿಯ ಸದಸ್ಯರಾದ ಕೃಷ್ಣೇಗೌಡ, ಮಧುಶ್ರೀ, ನಾಗರಾಜು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.