ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ । ಅಭಿನಂದನಾ, ಕೃತಜ್ಞಥಾ ಸಮಾರಂಭ
ಪ್ರತಿನಿಧಿ ವರದಿ ಕೆ.ಆರ್.ಪೇಟೆ
8 ಸಾವಿರ ಕ್ಯೂಸೆಕ್ ನೀರು ಹರಿಸಿ ಆನಂತರ ಸರ್ವ ಪಕ್ಷ ಸಭೆ ಕರೆದಿದ್ದರು. ನೀರು ಬಿಟ್ಟಮೇಲೆ ನಮ್ಮ ಸಲಹೆ ಪಡೆಯುವುದು ಏನಿದೆ. ಕಾಟಾಚಾರಕ್ಕೆ ಸಭೆ ನಡೆಸಿ ಸರ್ವ ಪಕ್ಷ ಸಭೆಗೆ ಹೋಗಲಿಲ್ಲ ಎಂದು ಟೀಕೆ ಮಾಡಿದರೆಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದರು.
ಪಟ್ಟಣದಲ್ಲಿ ಆಯೋಜಿಸಿದ್ದ ಎಚ್ಡಿಕೆ ಅಭಿನಂದನಾ ಹಾಗೂ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಡೂಟಕ್ಕೆ ಬಂದವರು, ಸಭೆಗೆ ಬರಲಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಆರೋಗ್ಯ ದೃಷ್ಟಿಯಿಂದ 4-5 ವರ್ಷಗಳ ಹಿಂದೆಯೆ ಮಾಂಸಾಹಾರ ತ್ಯಜಿಸಿದ್ದೇನೆ. ಮತ್ತ್ಯಾವ ಬಾಡು ಸೇವಿಸಬೇಕು ಎಂದು ಪ್ರಶ್ನೆ ಮಾಡಿದರು.
ಲಘುವಾದ ಮಾತುಗಳನ್ನು ನಿಲ್ಲಿಸಿ: ಸಿಡಬ್ಲ್ಯೂಎಮ್ಎ, ಸಿಡಬ್ಲ್ಯೂಎಮ್ಸಿ ರದ್ದು ಮಾಡಿಸಿದ್ದರೆ ನನ್ನ ಸೇವಕ ಆಗುತ್ತೇನೆ ಎಂದು ಸವಾಲು ಹಾಕಿರುವ ಸಚಿವರು, ನಿಮ್ಮಿಂದ ಸೇವೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸಚಿವರದವರು ಲಘುವಾದ ಮಾತುಗಳನ್ನು ನಿಲ್ಲಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಮಂಡ್ಯ ಜನರ ಆಶೀರ್ವಾದ ನನಗೆ ಈ ಸ್ಥಾನ ಸಿಗಲು ಕಾರಣ. ಈ ಭಾಗದ ಜನತೆಗೆ ಗೌರವ ಕೊಡಲು ನನಗೆ ಎರಡು ಖಾತೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಪ್ರಮುಖ ತೀರ್ಮಾನ ಮಾಡುವ ನೀತಿ ಆಯೋಗದಲ್ಲಿ ನನಗೆ ಸ್ಥಾನ ನೀಡಲಾಗಿದೆ. ಆರ್ಥಿಕ ಕಾರ್ಯಕ್ರಮ ಅನುಷ್ಠಾನ ಸಮಿತಿ ಸದಸ್ಯನ್ನಾಗಿ ನೇಮಿಸಿದ್ದಾರೆ. ನಿಮ್ಮ ನಿರೀಕ್ಷೆ ನಾನು ಹುಸಿಗೊಳಿಸುವುದಿಲ್ಲ ಎಂದರು.
ಒಂದೇ ರಾತ್ರಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ನನಗೆ ಸ್ವಲ್ಪ ಸಮಯಾವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ತನಿಖೆ ಸರಿಯಾಗಿ ನಡೆಯಲ್ಲ. ಈ ಸರ್ಕಾರ ನನಗೆ ಬೆಂಬಲ ಕೊಡುವ ಬಗ್ಗೆ ನಿರೀಕ್ಷೆ ಇಲ್ಲ. ಜನರ ಋಣ ತೀರಿಸುವ ಪ್ರಮಾಣಿಕ ಕೆಲಸ ಮಾಡುತ್ತೇನೆ. ನೀವು ಕೊಟ್ಟ ಶಕ್ತಿ ದುರುಪಯೋಗ ಆಗಲ್ಲ. ಅಭಿವೃದ್ಧಿ ಮುಖಾಂತರ ಋಣ ತೀರಿಸುವ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಪಂಚಾಯತಿ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಿಂತನೆ ಇದೆ. ಬಜೆಟ್ ಬಳಿಕ ಯಾವ್ಯಾವ ಇಲಾಖೆಗೆ ಎಷ್ಟು ಹಣ ಎಂದು ನಿಗದಿ ಆಗಲಿದೆ. ರಸ್ತೆ, ರೆಲ್ವೇ ಯೋಜನೆಗಳ ಬಗ್ಗೆ ಮನವಿ ಬಂದಿದೆ. ಈಗಾಗಲೇ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಜನರ ನೆಮ್ಮದಿ ಹಾಳು ಮಾಡಿದ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಫ್ರೀ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ರಾಜ್ಯದ ಜನ ಹೈರಾಣಗಿದ್ದಾರೆ. ಇತ್ತ ಫ್ರೀ ಯೋಜನೆಗಳು ಸರಿಯಾಗಿ ಸಿಗದೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಬೇರೆ ರಾಜ್ಯಗಳ ಚುನಾವಣೆಗೆ ಹಗರಣಕ್ಕೆ ಮುಂದಾದ ಸರ್ಕಾರ: ಕಾಂಗ್ರೆಸ್ ಸರ್ಕಾರದಲ್ಲಿ ಹಗರಣದಲ್ಲಿ ಮುಳುಗಿದೆ. ಬೇರೆ ರಾಜ್ಯಗಳ ಚುನಾವಣೆಗೆ ಹಣ ಕೊಡಲು ಹಗರಣಗಳನ್ನು ಮಾಡುತ್ತಿದೆ. ಬಡವರ ರಕ್ತ ಹೀರಿ ಚುನಾವಣೆ ನಡೆಸುತ್ತಿದ್ದೀರಿ. ನಿಮ್ಮ ಕೈಯಲ್ಲಿ ಸರ್ಕಾರ ನಡೆಸಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ದೂರಿದರು.
ಸರ್ಕಾರ ನಡೆಸಲ್ಲೂ ಆಗಲ್ಲ ಎಂದರೆ ವಿರೋಧ ಪಕ್ಷದಲ್ಲಿ ಕೂರಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ ಎಂದು ಕಾಂಗ್ರೆಸ್ಗೆ ಭಯ ಶುರುವಾಗಿದೆ. ಅಭಿವೃದ್ಧಿ ಮಾಡಲಾಗದಿದ್ದರೆ. ಸರ್ಕಾರ ಬಿಟ್ಟು, ವಿರೋಧ ಪಕ್ಷದಲ್ಲಿ ಕೂರಿ. ಬಿಜೆಪಿ-ಜೆಡಿಎಸ್ ಕ್ಕೆ ಅಧಿಕಾರ ಬಿಟ್ಟುಕೊಡಿ, ಉತ್ತಮ ಸರ್ಕಾರ ಕೊಡುತ್ತೇವೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಲೇವಡಿ ಮಾಡಿದರು.
ಕುಮಾರಸ್ವಾಮಿ ರಾಜ್ಯ, ದೇಶ ಸುತ್ತುತ್ತಿರುವುದನ್ನ ಕಾಂಗ್ರೆಸ್ಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಜನರು ಕಾಂಗ್ರೆಸ್ನ ಬುಡಕಿತ್ತು ಹೊಗೆಯುತ್ತಾರೆ ಎಂಬ ಆತಂಕ ಅವರಲ್ಲಿದೆ ಎಂದು ಚಿವುಟಿದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಕೀರ್ತಿಯನ್ನು ದೇಶದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನರೇಂದ್ರ ಮೋದಿ ಅವರಿಗೂ ಗೊತ್ತು ರಾಜ್ಯದ ಗೌಡರ ಗತ್ತು ಎಂದು ಗರ್ವದಿಂದ ನುಡಿದರು.
ಪ್ರಧಾನಿ ಮೋದಿ ಅವರಿಗೆ ದೇವೇಗೌಡರ ಶಕ್ತಿ ಗೊತ್ತಿದೆ. ಕುಮಾರಸ್ವಾಮಿ ಅವರನ್ನ ಸೋಲಿಸಲು ಸಾಕಷ್ಟು ರಣತಂತ್ರ ಮಾಡಿದರು. ರಾಜಕೀಯ ಶಕ್ತಿ ಎಲ್ಲವನ್ನು ಕೂಡ ಬಳಸಿದರು. ಆದರೆ ಜಿಲ್ಲೆಯ ಜನ ಆಶಿರ್ವಾದ ಮಾಡಿ, ಇದು ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ ಎಂದು ಬೀಗಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳ ಮೇಲೆ ಹಗರಣ ಮಾಡುತ್ತಿದೆ. ಅಸೆಂಬ್ಲಿ ನಡೆಸಲು ಕಾಂಗ್ರೆಸ್ ನವರ ಕೈಯಲ್ಲಿ ಆಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರನ್ನ ಯಮಾರಿಸಿ ಮತ ಪಡೆದರು. ಈ ಸರ್ಕಾರಕ್ಕೆ ಜನರ ಕಷ್ಟ ಬೇಕಿಲ್ಲ ಎಂದು ಕಿಡಿ ಕಾರಿದ್ದರು.
ಜಿಲ್ಲಾಮಂತ್ರಿ ಪುಟ್ಟರಾಜಣ್ಣ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಅವರ ಕೃಪಾಕಟಕ್ಷ ಹಾಗೂ ಸ್ನೇಹ ನಿಮ್ಮನ್ನ ಮಂತ್ರಿ ಮಾಡಿದ್ದು. ಅವರನ್ನ ಬಿಟ್ಟು ಹೋಗಿದ್ದಕ್ಕೆ ಕಾಂಗ್ರೆಸ್ ನಿಮ್ಮನ್ನ ಹತ್ತಿರ ಕೂರಿಸಿಕೊಳ್ಳುತ್ತಿದ್ದಾರೆ ಎಂದು ಚೇಡಿಸಿದರು.
ನಿಮ್ಮ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರಿಗೆ 50 ಸಾವಿರ ಮತ ಕೊಟ್ಟಿದ್ದಾರೆ. ನೀವು ಯಾವ ನಾಯಕತ್ವದ ಬಗ್ಗೆ ಮಾತನಾಡುತ್ತಿರಾ. ನೀವು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಷ್ಟು ಬೆಳೆದಿಲ್ಲ. ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯ ಸರ್ಕಾರ ಜನರನ್ನ ಸುಲಿಯುತ್ತಿದೆ. ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಕಂಡು ಭಯ ಬಂದಿದೆ. ಕುಮಾರಸ್ವಾಮಿ ಅತೀ ಶೀಘ್ರವೇ ರಾಜ್ಯದ ನಾಯಕತ್ವ ಪಡೆಯುತ್ತಾರೆ ಎಂದು ಪರೋಕ್ಷವಾಗಿ ಹೆಚ್ಡಿಕೆ ಮತ್ತೆ ಸಿಎಂ ಆಗ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.