ಕೇಂದ್ರ ಸರ್ಕಾರ 2024- 25 ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ಸಂಸತ್ ಅಧಿವೇಶನ ಇಂದು ಶುರುವಾಗಿದೆ.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 , ಮಂಗಳವಾರ 2024-25ರ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲಿದ್ದು, ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಆಗಿದೆ. ಈ ಬಾರಿ ಬಜೆಟ್ ಗೆ ಬಹು ನಿರೀಕ್ಷೆ ಇದ್ದು, ಸಾಮಾನ್ಯ ತೆರಿಗೆದಾರರು, ಹೂಡಿಕೆದಾರರು, ಕೈಗಾರಿಕೆಗಳು, ರೈತರು, ಮಹಿಳೆಯರು ಮತ್ತು ಪ್ರಮುಖ ಉದ್ಯಮಗಳು ಸೇರಿದಂತೆ ವಿವಿಧ ಶ್ರೇಣಿಯ ಮಧ್ಯಸ್ಥಗಾರರ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ.
2024- 25 ನೇ ಸಾಲಿನ ಆರ್ಥಿಕ ಸಮೀಕ್ಷೆ ದೇಶದ ಅರ್ಥ ವ್ಯವಸ್ಥೆಯ ಒಳನೋಟ ಮತ್ತು ಭವಿಷ್ಯದ ಮುನ್ನೋಟ ನೀಡುವಂತಹ ಪ್ರಮುಖ ದಾಖಲೆ ಎಂದೇ ಹೇಳಬಹುದು. ಅಲ್ಲದೆ ಈ ಬಾರಿಯ ಬಜೆಟ್ ಭಾರತ್ 2047 ವಿಷನ್ಗೆ ಅನುಗುಣವಾಗಿ ಆರ್ಥಿಕತೆಯ ವಿವಿಧ ವಿಭಾಗಗಳಿಗೆ ಉಪಕ್ರಮಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಬಜೆಟ್ ಮಂಡನೆಯಲ್ಲಿ ರಾಜ್ಯದ ನಿರೀಕ್ಷೆ ಏನೇನು?
ಸತತ 3 ನೇ ಬಾರಿಗೆ ಗದ್ದುಗೆ ಏರಿದೆ ಮೋದಿ ಸರ್ಕಾರ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಸದರನ್ನ ಗೆಲ್ಲಿಸಿಕೊಟ್ಟಿರುವ ಕರ್ನಾಟಕಕ್ಕೆ ಕೇಂದ್ರದಿಂದ ನಿರೀಕ್ಷೆಗಳು ಹಲವಾರು..
ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಸಿಗಲಿದ್ಯಾ ಅನುದಾನ ಮತ್ತು ಅನುಮತಿ?
ರಾಜ್ಯದ ಪ್ರಮುಖ ನಗರಗಳಲ್ಲಿ ಸಿಗಲಿದ್ಯಾ ನೂತನ ರೈಲ್ವೇ ಯೋಜನೆಗಳ ಬಂಪರ್ ಹ್ಯಾಂಪರ್?
ರಾಜ್ಯದ 39 ರಸ್ತೆಗಳಲ್ಲಿ ಒಟ್ಟು 5,225 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರಕಾರ ಹೊಂದಿದ್ದು, ಭಡ್ತಿ ಈಡೇರುತ್ತಾ?
ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು,ಮೆಟ್ರೋ ಹಂತ-3ರ ಯೋಜನೆಗೆ 15 ಸಾವಿರ ಕೋಟಿ ರೂ. ಪ್ರಸ್ತಾವದ ನಿರೀಕ್ಷೆಯಿದೆ.
ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಅತೀಹೆಚ್ಚು ಸಿರಿಧಾನ್ಯ ಬಳಕೆ ಮತ್ತು ಉತ್ಪಾದನೆ ಮುಂಚೂಣಿಯಲ್ಲಿದೆ. ರಫ್ತು ಸೇರಿದಂತೆ ಬಳಕೆಯ ಯೋಜನೆಗಳಿಗೆ ಬೇಕಿದೆ ಅನುದಾನ .
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಏಮ್ಸ್) ರಾಯಚೂರಿಗೆ ಮಂಜೂರು ಮಾಡಬೇಕು ಎಂಬುದು ಆ ಭಾಗದ ದಶಕಗಳ ಬೇಡಿಕೆ ಈಗಲಾದರೂ ಈಡೇರಲಿದ್ಯಾ?
ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆ, ಎತ್ತಿನಹೊಳೆ ಯೋಜನೆ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೇರ ಅಥವಾ ಪರೋಕ್ಷವಾಗಿ ಸಹಾಯ ಮಾಡಬಲ್ಲ ನಿಲುವುಗಳನ್ನು ಬಜೆಟ್ನಲ್ಲಿ ಪ್ರಸ್ತಾವಿಸಬಹುದೇ ಎಂಬ ನಿರೀಕ್ಷೆಯಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ 5,300 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದರೂ ಹಣ ಬಿಡುಗಡೆ ಆಗಿಲ್ಲ. ಈ ಬಾರಿ ಬಿಡುಗಡೆಯ ನಿರೀಕ್ಷೆ ಇದೆ.
ದಾಖಲೆ ಮುರಿಯಲು ಸಜ್ಜಾದ ಕೇಂದ್ರ ವಿತ್ತ ಸಚಿವೆ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7 ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದು ,ಐದು ಪೂರ್ಣ ಬಜೆಟ್ ಮಂಡಿಸಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸೀತಾರಾಮನ್ ಅವರು ನಾಳೆ ಮಾಡಲಿರುವ ಬಜೆಟ್ ಭಾಷಣವು ಅವರ ಸತತ ಏಳನೆಯ ಬಜೆಟ್ ಭಾಷಣವಾಗಿದೆ. ಆದರೆ 10 ಬಾರಿ ಬಜೆಟ್ ಮಂಡನೆ ಮಾಡಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರದ್ದೇ ಆಗಿರುತ್ತದೆ.
ನಿರ್ಮಲಾ ಸೀತಾರಾಮನ್ ಅವರು ಈ ಹಿಂದೇಯೇ ತಲಾ ಐದು ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ದಾಖಲೆಗಳನ್ನು ಮುರಿದಿದ್ದಾರೆ. ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ ಅನ್ನು ಕೇವಲ 56 ನಿಮಿಷಗಳಲ್ಲಿ ಮಂಡಿಸಿದ್ದರು ಹಾಗೂ ಇದು ಈವರೆಗಿನ ಕನಿಷ್ಠ ಸಮಯದ ಬಜೆಟ್ ಭಾಷಣವಾಗಿತ್ತು. ಇದಲ್ಲದೆ
2019 ರಲ್ಲಿ, ಸಾಂಪ್ರದಾಯಿಕ ಬಜೆಟ್ ಬ್ರೀಫ್ಕೇಸ್ ಬಿಟ್ಟು ಡಿಜಿಟಲ್ ಬಜೆಟ್ ಪ್ರತಿ ಮತ್ತು ಇತರ ದಾಖಲೆಗಳನ್ನು ಸಾಗಿಸಲು ರಾಷ್ಟ್ರೀಯ ಲಾಂಛನ ಇರುವ ‘ಬಹಿ-ಖಾತಾ’ವನ್ನು ಲೋಕಸಭೆಗೆ ತರುವ ಮೂಲಕ ಹೊಸ ಸಂಪ್ರದಾಯವನ್ನ ಸೀತಾರಾಮನ್ ಅವರು ಶುರುಮಾಡಿದ್ದರು.