ಮೈಸೂರು:
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ದೇಶದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿ (ಆರ್ಮಿ ಏರ್ಡಿಫೆನ್ಸ್) ಮೈಸೂರಿನ ಸರ್ದಾರ್ ವಲ್ಲಭಬಾಯಿ ನಗರದ ನಿವಾಸಿ ಸಿ.ಟಿ.ಸುಪ್ರಿತಾ ಅವರು ಆಯ್ಕೆಯಾಗಿದ್ದಾರೆ.
ಸಿ.ಟಿ. ಸುಪ್ರಿತಾ ಅವರು ತಲಕಾಡು ಪೊಲೀಸ್ ಠಾಣೆ ಪಿಎಸ್ಐ ತಿರುಮಲ್ಲೇಶ್ ಹಾಗೂ ನಿರ್ಮಲ ದಂಪತಿ ಪುತ್ರಿಯಾಗಿದ್ದು, ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಹಾಗೂ ಎನ್ಸಿಸಿ “ಸಿ” ಸರ್ಟಿಫಿಕೇಟ್ ಪಡೆದಿದ್ದಾರೆ. ಸುಪ್ರೀತಾ ಅವರು 2021ರಲ್ಲಿ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಂತರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಆರ್ಮಿ ಏರ್ ಡಿಫೆನ್ಸ್ ಯೂನಿಟ್ನಲ್ಲಿ ಕರ್ತವ್ಯನಿರ್ವಹಿಸಿದರು.
ತಮ್ಮ ವ್ಯಾಸಂಗದ ಸಮಯದಲ್ಲೇ ಸುಪ್ರಿತಾ ಅವರು, ಎನ್ಸಿಸಿ ಏರ್ ವಿಂಗ್ ಸಿ ಪ್ರಮಾಣಪತ್ರ ಗಳಿಸಿದರು, ಅಖಿಲ ಭಾರತ ವಾಯು ಸೈನಿಕ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. 2016 ರಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಗಣರಾಜ್ಯೋತ್ಸವ ಪರೇಡ್ನಲ್ಲಿ ಮೆರವಣಿಗೆ ನಡೆಸಿದರು. ಸುಪ್ರೀತಾ 2024 ರಲ್ಲಿ ಕರ್ನಲ್ (ನಿವೃತ್ತ) ರಿಚರ್ಡ್ ಬ್ಲೇಜ್ ಮತ್ತು ಲೆಫ್ಟಿನೆಂಟ್ ಕರ್ನಲ್ ವಿಜಯಲಕ್ಷ್ಮಿ ಅವರ ಮಗ ಮೇಜರ್ ಜೆರ್ರಿ ಬ್ಲೇಜ್ ಅವರನ್ನು ವಿವಾಹವಾದರು. ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಲ್ಲಿ ಒಟ್ಟಿಗೆ ಭಾಗವಹಿಸಿದ ಮೊದಲ ಜೋಡಿಯಾಗಿ ಈ ದಂಪತಿ ಸುದ್ದಿ ಮಾಡಿದ್ದರು.
ಸುಪ್ರಿತಾ ಅವರು ಅನಂತನಾಗ್, ಜಬಲ್ಪುರ್ ಮತ್ತು ಲೇಹ್ನಲ್ಲಿ ಕರ್ತವ್ಯನಿರ್ವಹಿಸಿದ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಇದೀಗ ಸಿಯಾಚಿನ್ಗೆ ಆಯ್ಕೆಯಾಗಿದ್ದಾರೆ.