– ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮ
ಪ್ರತಿನಿಧಿ ವರದಿ ಮೈಸೂರು
ನಗರದ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸೋಮವಾರ ಎಲ್ಲೆಲ್ಲೂ ಮಕ್ಕಳ ಕಲರವ ಮನೆಮಾಡಿತ್ತು. ವಿಶೇಷಚೇತನ ಮಕ್ಕಳು ಹಾಡು, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು.
ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ 21ನೇ ಚಾತುರ್ಮಾಸ್ಯ ವ್ರತದೀಕ್ಷೆ ಪ್ರಯುಕ್ತ ಸೋಮವಾರ ಆಶ್ರಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ವಿಶೇಷಚೇತನ ಮಕ್ಕಳಿಂದ ಅನಘಾ ವ್ರತ ಮಾಡಿಸಲಾಯಿತು. ಈ ವೇಳೆ ಮೇಟಗಳ್ಳಿಯಲ್ಲಿರುವ ರಂಗರಾವ್ ಮೆಮೋರಿಯಲ್ ಶಾಲೆಯ ವಿಶೇಷಚೇತನ ಮಕ್ಕಳು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ರಚಿಸಿರುವ ಹಲವು ಭಜನೆಗಳನ್ನು ಹಾಡುವ ಮೂಲಕ ಎಲ್ಲರ ಮನತಣಿಸಿದರು. ಬಳಿಕ ಮಾತೃಮಂಡಳಿ ಶಾಲೆಯ ಮಕ್ಕಳು ನೃತ್ಯ ಮಾಡಿ ಆಕರ್ಷಿಸಿದರು.
ಉಳಿದಂತೆ ನೃತ್ಯ ನಿರಂತರ ಟ್ರಸ್ಟ್ನ ಮಕ್ಕಳು ಶಿವ ತಾಂಡವ ನೃತ್ಯರೂಪಕ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿರಂತನ್, ಭಗವದ್ಗೀತೆ ಶ್ಲೋಕ ಹಾಗೂ ಕ್ಯಾಸಿನೊ ನುಡಿಸಿ ಮನಸೆಳೆದರೆ. ಪುಟ್ಟವೀರಮ್ಮ ಶ್ರವಣ ದೋಷವುಳ್ಳ ಹೆಣ್ಣು ಮಕ್ಕಳ ಶಾಲೆ ಮಕ್ಕಳು ಕಟೀಲು ದುರ್ಗಾಪರಮೇಶ್ವರಿ ನೃತ್ಯ ರೂಪಕ ಮಾಡಿ ಎಲ್ಲರ ಮೆಚ್ಚುಗೆ ಪಡೆದರು. ಉಳಿದಂತೆ ಉಚಿತ ವಸತಿ ಶಾಲೆ ಮಕ್ಕಳು, ಶ್ರೀ ಸಾಯಿ ಸಂಸ್ಥೆಯ ಮಕ್ಕಳು, ಎಸ್ ಜಿಎಸ್ ಶಾಲೆ ಮಕ್ಕಳು ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರೆ. ಕೆ.ಚಿದಾನಂದ ಎಂಬ ಬಾಲಕ ಸನ್ನೆ ಮೂಲಕ ಅನಘಾ ವ್ರತ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದು ಎಲ್ಲರನ್ನೂ ಮಂತ್ರಮುಗ್ದವಾಗಿಸಿತು.
ಇದೇ ವೇಳೆ ಮಾತನಾಡಿದ ದತ್ತ ವಿಜಯಾನಂದ ಸ್ವಾಮೀಜಿ, ವಿಶೇಷ ಮಕ್ಕಳೆಲ್ಲರೂ ಬಹಳ ಚೇತನ ವುಳ್ಳವರು. ಅವರಲ್ಲಿರುವ ಚೇತನ ಸಾಮಾನ್ಯ ಜನರಲ್ಲೂ ಇಲ್ಲ. ಈ ಮಕ್ಕಳಿಂದ ಅನಘಾಷ್ಟಮಿ ವ್ರತ ಮಾಡಿಸಿದ್ದು ಸಂತೋಷ ಉಂಟುಮಾಡಿದೆ, ಈ ಮಕ್ಕಳ ಜೀವನ ಸುಗಮವಾಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ, ಭಗವಂತನ ಆಶೀರ್ವಾದ, ಗುರು ಕೃಪೆ ಇರಲಿ ಎಂದು ಹಾರೈಸಿದರು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳಿಗೆ, ಶ್ರೀಗಳು ಬ್ಯಾಗ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸಿದರು.