ಪ್ರತಿನಿಧಿ ವರದಿ ಮೈಸೂರು:
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧವಾದ ಕ್ರಾಫರ್ಡ್ ಭವನದ ಹಿಂಭಾಗದ ಪರೀಕ್ಷಾ ಭವನದಲ್ಲಿ ಸಿಂಡಿಕೇಟ್ ಸದಸ್ಯರ ಲಾಂಜ್ ಅನ್ನು ಸೋಮವಾರ ಉದ್ಘಾಟಿಸಲಾಯಿತು.
ಯಾವುದೇ ಪೂಜೆ ಪುನಸ್ಕಾರ ಇಲ್ಲದೇ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮಾನಸ ಗಂಗೋತ್ರಿ ಕಟ್ಟಿದ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜು ಜಟ್ಟಿಹುಂಡಿ ಮಾತನಾಡಿ, ಅಧ್ಯಾಪಕರು, ಅಧ್ಯಾಪಕೇತರು ಹಾಗೂ ವಿದ್ಯಾರ್ಥಿಗಳ ಅಹವಾಲುಗಳನ್ನು ಸ್ವೀಕರಿಸಿ, ಕುಲಪತಿ ಹಾಗೂ ಕುಲಸಚಿವರ ಗಮನಕ್ಕೆ ತಂದು ಪರಿಹರಿಸುವ ಉಧ್ದೇಶದಿಂದ ಈ ಕಚೇರಿ ಆರಂಭಿಸಲಾಗಿದೆ ಎಂದರು.
ಬೆಳಗ್ಗೆ 10.30 ರಿಂದ ಸಂಜೆ 5.30 ರವರೆಗೆ ಕಚೇರಿ ತೆರೆದಿರುತ್ತದೆ. ಸಮಯ ಇದ್ದರೆ ಸಿಂಡಿಕೇಟ್ ಸದಸ್ಯರು ಕಚೇರಿಗೆ ಭೇಟಿ ನೀಡುತ್ತಾರೆ. ಇಲ್ಲವೇ ಅಲ್ಲಿರುವ ಸಿಬ್ಬಂದಿ ಬಳಿ ಅಹವಾಲು ಸಲ್ಲಿಸಬಹುದು. ನಂತರ ನಾವೆಲ್ಲಾ ಸಿಂಡಿಕೇಟ್ ಸದಸ್ಯರು ಚರ್ಚಿಸಿ, ಸಂಬಂಧಿಸಿದವರ ಗಮನಕ್ಕೆ ಬಂದು ಪರಿಹರಿಸಲಾಗುವುದು ಎಂದರು.
ಸಿಂಡಿಕೇಟ್ ಸದಸ್ಯರಾದ ಡಾ.ಟಿ.ಆರ್. ಚಂದ್ರಶೇಖರ್ ಮಾತನಾಡಿ, ರಾಜ್ಯಪಾಲರು ಹಾಗೂ ಸರ್ಕಾರದಿಂದ ನಾಮಕರಣಗೊಂಡಿರುವ ನಾವು ವಿಶ್ವವಿದ್ಯಾನಿಲಯದ ಕಸ್ಟೋಡಿಯನ್ಗಳಾಗಿ ಕೆಲಸ ಮಾಡಬೇಕಾಗಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮಾನಸ ಗಂಗೋತ್ರಿಯನ್ನು ಕಟ್ಟಿದ ರಾಷ್ಟ್ರಕವಿ ಕುವೆಂಪು ಅವರ ಆಶಯಕ್ಕೆ ತಕ್ಕಂತೆ ನಾವು ಕೆಲಸ ಮಾಡಬೇಕಾಗಿದೆ. ಆ ಮೂಲಕ ವಿವಿಯ ಘನತೆ, ಗೌರವ ಉಳಿಸಿ, ಬೆಳೆಸಬೇಕಾಗಿದೆ ಎಂದರು.
ಕುಲಪತಿಗಳ ವಿಶೇಷಾಧಿಕಾರಿ ಕುಮಾರ್ ಮಾತನಾಡಿ, ಕಾನೂನು ವ್ಯಾಪ್ತಿಯಲ್ಲಿ ಆಗಬೇಕಾದ ಎಲ್ಲಾ ಕೆಲಸಗಳನ್ನು ಕುಲಪತಿ ಹಾಗೂ ಕುಲಸಚಿವರ ಮಾರ್ಗದರ್ಶನದಲ್ಲಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಈ ಕಚೇರಿಯು ವಿವಿ ಆಡಳಿತಕ್ಕೆ ಪೂರವಾಗಿರಲಿ. ಇಲ್ಲಿನ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರದ ಜೊತೆಗೆ ರಾಜ್ಯಪಾಲರು ಹಾಗೂ ಸರ್ಕಾರದಿಂದ ನಾಮ ನಿರ್ದೇಶನವಾಗಿರುವ ನೀವು ಸರ್ಕಾರದ ಮಟ್ಟದಲ್ಲಿ ವಿವಿಗೆ ಆಗಬೇಕಾದ ಕೆಲಸಗಳು, ಬರಬೇಕಾದ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಸಿಂಡಿಕೇಟ್ ಸದಸ್ಯರಾದ ಮಹದೇಶ್, ಗೋಕುಲ್ ಗೋವರ್ಧನ್, ಡಾ.ಜೆ. ಶಿಲ್ಪಾ, ನಟರಾಜ್ ಶಿವಣ್ಣ, ಪ್ರೊ.ಶಬ್ಬೀರ್ ಮಹಮದ್ ಮೊದಲಾದವರು ಇದ್ದರು.
======