ಖುಷಿಯೋ ಅಥವಾ ದುಖಃವೋ ತಿಳಿಯಾದ ಪರಿಸ್ಥಿಯಲ್ಲಿ ರೈತರು
ಮಳೆಯಿಂದ ಅಪಾರ ನಷ್ಟದ ಅಂದಾಜು
ಶೇಖರ್ ಕಿರುಗುಂದ ಮೈಸೂರು
ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಎರಡು ವರ್ಷಗಳಿಂದ ಸಮರ್ಪಕವಾಗಿ ಮಳೆ ಬೀಳದ ಕಾರಣ ಕೃಷಿ ಚಟುವಟಿಕೆ ಕುಂಠಿತವಾಗಿತ್ತು. ಇದರಿಂದ ಕಂಗಲಾಗಿದ್ದ ರೈತರು ದುಡಿಮೆ ಇಲ್ಲದ ಕಾರಣ ಜೀವನ ನಿರ್ವಹಣೆಗೆ ಬಹಳ ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭತ್ತ, ಕಬ್ಬಿನಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದಿದ್ದರೂ ರಾಗಿ, ಜೋಳ, ಅಲಸಂದೆ, ಉದ್ದು , ಮುಸುಕಿನ ಜೋಳದಂತಹ ಬೆಳೆಗಳನ್ನಾದರೂ ಬೆಳೆಯಬಹುದು ವರುಣದೇವ ನಮಗೆ ಅವಕಾಶ ಮಾಡಿಕೊಟ್ಟರೆ ಸಾಕು ಎಂದು ರೈತರು ಆಕಾಶದತ್ತ ಮುಖ ಮಾಡಿದ್ದರು.
ರೈತರ ಮೊರೆಯನ್ನು ಆಲಿಸಿದ ವರುಣ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 94.7 ಮಿ.ಮೀಗಿಂತ 107.1 ಮಿ. ಮೀ. ಮಳೆ ಸುರಿಸುವ ಮೂಲಕ ರೈತರ ಕೋರಿಕೆಯನ್ನು ಈಡೇರಿಸಿದ. ಅದರಂತೆ ಮುಸುಕಿನಜೋಳ, ಅಲಸಂದೆ, ಜೋಳ, ಉದ್ದು, ಸಿರಿಧಾನ್ಯಗಳು ಸೇರಿದಂತೆ ಇತರೆ ಬೆಳೆಗಳನ್ನು 65, 426 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.
ಮಳೆ ಇಲ್ಲದೆ ಬತ್ತಿ ಹೋಗಿದ್ದ ಜಲಾಶಯಗಳು, ಕಳೆದ 10 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಜಲಾಶಯಗಳೆಲ್ಲ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಜಮೀನುಗಳಿಗೆ ನೀರು ನುಗ್ಗಿ ನೂರಾರು ಹೆಕ್ಟೆರ್ ಪ್ರದೇಶದ ಬೆಳೆಗಳು ನಾಶವಾಗಿದೆ.
ಎರಡು ದಿನಗಳಿಂದ ಮಳೆಯು ಸ್ವಲ್ಪ ಇಳಿಮುಖವಾಗಿರುವುದರಿಂದ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆನಾಶ ಸರ್ವೇಯನ್ನು ಕೈಗೆತ್ತಿಕೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ ಸದ್ಯಕ್ಕೆ 104.75 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಕಳೆದ ಕೆಲವು ದಿನಗಳಿಂದ ಕೇರಳದ ವಯನಾಡಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯ ಪ್ರಭಾವದಿಂದ ಮೈಸೂರು ಭಾಗದಲ್ಲೂ ವರುಣನ ಆರ್ಭಟ ಜಾಸ್ತಿಯಾಗಿದೆ. ಜುಲೈ 1ರಿಂದ 19ರವರೆಗೆ ವಾಡಿಕೆ ಮಳೆ 76.1 ಮಿ.ಮೀಟರ್ 142.1 ಮಿ.ಮೀಟರ್ ಮಳೆಯಾಗಿದೆ. ಕಳೆದ 7 ದಿನಗಳಿಂದ ವರಣನ ರೌದ್ರವತಾರದಿಂದ ವಾಡಿಕೆ ಮಳೆ 26.5 ಮಿ.ಮೀಗಿಂತ 110.8 ಮಿ.ಮೀ ಮಳೆಯಾಗಿರುವುದರಿಂದ ಅಪಾರ ನಷ್ಟ ಉಂಟಾಗಿದೆ.
ಇದೇ ರೀತಿ ವರುಣನ ಆರ್ಭಟ ಮುಂದುವರಿದರೆ ಮತ್ತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರು ಬಿಡುವ ಸಾಧ್ಯತೆ ಇರುವುದರಿಂದ ಬಾರಿ ಪ್ರಮಾಣದಲ್ಲಿ ಬೆಳೆಗಳು ನಾಶವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ತಾಲೂಕುವಾರು ಬೆಳೆ ನಾಶ: ಜಿಲ್ಲೆಯಲ್ಲಿ 65. 426 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಈ ಪೈಕಿ ಹುಣಸೂರು ತಾಲೂಕಿನಲ್ಲಿ 10 ಹೆಕ್ಟೇರ್ , ಪಿರಿಯಾಪಟ್ಟಣ 57 ಹೆಕ್ಟೇರ್, ನಂಜನಗೂಡು 29.17 1 ಹೆಕ್ಟೇರ್, ಕೆ.ಆರ್.ನಗರ 5.50 ಹೆಕ್ಟೇರ್ ಹಾಗೂ ತಿ. ನರಸೀಪುರ 3.08 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಜಿಲ್ಲೆಯಲ್ಲಿ ಜು.1 ರಿಂದ 19ರವರೆಗೆ ಆಗಿರುವ ಮಳೆ
ತಾಲೂಕು ವಾಡಿಕೆ ಮಳೆ… ಬಿದ್ದಿರುವ ಮಳೆ… ಶೇ. ವಾರು ಮಳೆ
ಎಚ್.ಡಿ.ಕೋಟೆ 93.6. 219.5. 135
ಹುಣಸೂರು 67.9. 143.2. 111
ಕೆ.ಆರ್.ನಗರ. 47.0. 98.9. 110
ಮೈಸೂರು 48.1. 94.1. 96
ನಂಜನಗೂಡು 46.3. 94.9. 105
ಪಿರಿಯಾಪಟ್ಟಣ. . 88.0. 192.6. 119
ತಿ. ನರಸೀಪುರ. 37.7. 68.7. 82
ಸರಗೂರು 88.4. 193.1. 118
ಸಾಲಿಗ್ರಾಮ 39.2 116.5. 197
ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಜಲಾಶಯಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಜಮೀನುಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿರಬಹುದು ಎಂದು ಅದಾಜಿಸಲಾದೆ. ಇದು ಕಡಿಮೆ ಆದ ನಂತರ ಪಕ್ಕ ಮಾಹಿತಿ ದೊರೆಯಲಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು.
-ಡಾ.ಬಿ.ಎನ್.ಚಂದ್ರಶೇಖರ್, ಜಂಟಿ ಕೃಷಿ ನಿರ್ದೇಶಕರು ಮೈಸೂರು.