ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ ಒಂದೂವರೆ ತಿಂಗಳು ಕಳೆದಿದೆ. ದರ್ಶನ್ ಅವರನ್ನು ಹೊರತರಲು ಕಾನೂನು ಹೋರಾಟವನ್ನ ಸತತವಾಗಿ ಮುಂದುವರೆಸಿರುವ ಪತ್ನಿ ವಿಜಯಲಕ್ಷ್ಮಿಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನ ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದ ದರ್ಶನ್!
ಇನ್ನು ಪರಪ್ಪನ ಅಗ್ರಹಾರದಲ್ಲಿ ಇರುವ ನಟ ದರ್ಶನ್ಗೆ ಜೈಲು ವಾಸ ಕಷ್ಟವಾಗಿದೆ. ಮನೆ ಊಟಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕೂಡ ನಡೆದಿದ್ದು, ‘ಅನಾರೋಗ್ಯದಂತಹ ವಿಶೇಷ ಸಂದರ್ಭದಲ್ಲಿ ಮಾತ್ರ ವಿಶೇಷ ಆಹಾರ ನೀಡಲು ಅವಕಾಶ ಇದೆ. ದಿನವೂ ಬಿರಿಯಾನಿ ತಿನ್ನಲು ನಿಯಮದಲ್ಲಿ ಅವಕಾಶವಿಲ್ಲ’ ಎಂದು ಪೊಲೀಸರ ಪರ ವಕೀಲರು ವಾದಿಸಿದ್ದರು.
ನೆಲದ ಕಾನೂನಿಗೆ ಗೌರವ ನೀಡಬೇಕು ; ಡಿಕೆಶಿ
ಮಂಗಳವಾರವಷ್ಟೇ ರಾಮನಗರದ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ನಟ ದರ್ಶನ್ ಹೆಸರು ಪ್ರಸ್ತಾಪವಾದ ಹಿನ್ನೆಲೆ , ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲು ಪ್ರಯತ್ನ ಮಾಡುವೆ. ಆದರೆ, ನಾವು ಕಾನೂನಿಗೆ ಗೌರವ ಕೊಡಬೇಕು. ನಾವೆಲ್ಲ ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದಿದ್ದರು.
ಈ ಘಟನೆಯ ಬೆನ್ನಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ಇಂದು ಭೇಟಿ ನೀಡಿದ್ದಾರೆ. ಭೇಟಿ ನೀಡಿರುವ ಕಾರಣದ ಬಗೆಗೆ ಯಾವುದೇ ನಿಖರ ಮಾಹಿತಿ ತಿಳಿದು ಬಂದಿಲ್ಲವಾದ್ರೂ, ಇವರಿಬ್ಬರ ಭೇಟಿ ಹೆಚ್ಚು ಕುತೂಹಲ ಮೂಡಿಸಿದೆ.