ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದ್ದಾರೆ. ಹಾಗೂ ಇವರ ಮೇಲೆ ಚಾರ್ಜ್ ಶೀಟ್ ರೆಡಿಯಾಗುತ್ತಿರುವ ಬೆನ್ನಲ್ಲೆ ದರ್ಶನ್ರ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಸಹೋದರ ದಿನಕರ್ ಇಂದು ಡಿಸಿಎಮ್ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದರು. ಈ ಭೇಟಿ ಬೆಳಗ್ಗಿನಿಂದ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಸುಮಾರು 20 ನಿಮಿಷಗಳ ಕಾಲ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ ವಿಜಯಲಕ್ಷ್ಮಿ ಮತ್ತು ದಿನಕರ್, ಡಿಸಿಎಂ ನಿವಾಸದಿಂದ ತೆರಳಿದ್ದರು.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ವಿಜಯಲಕ್ಷ್ಮಿ ಅವರು ಆಗಮಿಸಿದ್ದ ಉದ್ದೇಶ ತಿಳಿಸಿದ್ದಾರೆ.
ಡಿ ಬಾಸ್ ದರ್ಶನ್ ಪುತ್ರ ವಿನೀಶ್ ಶಾಲೆಯ ವಿಚಾರವಾಗಿ ಎಂದು ತಿಳಿಸಿದ್ದಾರೆ. ಡಿಸಿಎಂ ಒಡೆತನದ ನ್ಯಾಷನಲ್ ಹಿಲ್ ವ್ಯೂ ಶಾಲೆಯಲ್ಲಿ ಈ ಹಿಂದೆ ವಿನೀಶ್ ವ್ಯಾಸಂಗ ಮಾಡುತ್ತಿದ್ದು, ಮಧ್ಯದಲ್ಲಿ ಬೇರೆ ಶಾಲೆಗೆ ಸೇರಿದ್ದರು. ಆದರೆ ಮತ್ತೆ ವಿನೀಶ್ ನ್ನು ನ್ಯಾಷನಲ್ ಹಿಲ್ ವ್ಯೂ ಶಾಲೆಗೆ ಸೇರಿಸಬೇಕೆಂಬ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ನನ್ನನ್ನು ಭೇಟಿ ಮಾಡಿದ್ದಾರೆ ಹಾಗೂ ಈ ವಿಚಾರವಾಗಿ ನಾನು ಸಂಪೂರ್ಣವಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಶಾಲೆಯ ಪ್ರಿನ್ಸಿಪಾಲರನ್ನು ಭೇಟಿ ಮಾಡುವಂತೆ ಸೂಚಿಸಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ದರ್ಶನ್ ಪತ್ನಿ ಮತ್ತು ಸಹೋದರ ದಿನಕರ್ ತೂಗುದೀಪ್ ಮತ್ತು ಡಿಕೆಶಿ ಭೇಟಿ ಭಾರಿ ಕುತೂಹಲವನ್ನ ಕೆರಳಿಸಿತ್ತು. ಅಲ್ಲದೆ ಡಿ ಬಾಸ್ ದರ್ಶನ್ ಅವರನ್ನು ಜೈಲಿನಿಂದ ಹೊರ ತರುವ ಕಾರಣಕ್ಕಾಗಿ ಈ ಭೇಟಿ ಎಂಬೆಲ್ಲಾ ಊಹಾಪೋಹಗಳು ಹರಿದಾಡುತ್ತಿತ್ತು.