ಕಾವೇರಿಕೊಳ್ಳದಲ್ಲಿ ಈ ಬಾರಿ ಉತ್ತಮ ಮಳೆ ಆಗಿದೆ. ವರುಣನ ಅಬ್ಬರಕ್ಕೆ ಕೆರೆಕಟ್ಟೆಗಳು ತುಂಬಿ ತುಳುಕುತ್ತಿದೆ. ಕನ್ನಡಿಗರ ಜೀವನಾಡಿ , ಕಾವೇರಿ ಮಾತೆ ಒಡಲು ಕೆಆರ್ ಎಸ್ ಡ್ಯಾಂ ಕೂಡ ಸಂಪೂರ್ಣ ಭರ್ತಿಯಾಗಿದೆ. ಕನ್ನಂಬಾಡಿ ತುಂಬಿರೋದು ಅನ್ನದಾತರ ಸಂತೋಷಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ರಣಮಳೆ ಆರ್ಭಟ ಜೋರಿದ್ದು, ಎರಡು ವರ್ಷಗಳ ನಂತರ KRS ಜಲಾಶಯ ಭರ್ತಿಯಾಗಿದೆ. ಬರಗಾಲದ ಆತಂಕದಲ್ಲಿದ್ದ ರೈತರಲ್ಲಿ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ 20 ದಿನದಿಂದ ಸುರಿಯುತ್ತಿರುವ ಮಳೆಗೆ ಕನ್ನಡಿಗರ ಜೀವನಾಡಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಜುಲೈ ತಿಂಗಳು ಮುಗಿಯುವ ಮುನ್ನವೇ ಕೆ ಆರ್ ಎಸ್ ಡ್ಯಾಂ ಭರ್ತಿಯಾಗಿದೆ. ಸದ್ಯ ಕೆಆರ್ಎಸ್ ಜಲಾಶಯವು ಗರಿಷ್ಠ ನೀರಿನ ಮಟ್ಟವನ್ನು ತಲುಪಿದೆ. ಜಲಾಶಯದಲ್ಲಿ 49 ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗಿದೆ.ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದ ಪರಿಣಾಮವಾಗಿ ಕಾವೇರಿ ಜಲಾನಯನ ಪ್ರದೇಶದ ಬಹುತೇಕ ಕಡೆ ತೀವ್ರ ಬರಗಾಲ ಉದ್ಭವಿಸಿತ್ತು. ಯಾವುದೇ ಜಲಾಶಯಗಳು ಭರ್ತಿಯಾಗಿರಲಿಲ್ಲ. ಈ ವರ್ಷ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆ ಆಗಿದ್ದು ಜುಲೈ ಮುಗಿಯುವ ಮುನ್ನವೇ ಕಾವೇರಿ ತುಂಬಿ ಹರಿದಿದ್ದಾಳೆ. KRS ಜಲಾಶಯದಲ್ಲಿ ಒಂದು ವಾರದಿಂದ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ಬುಧವಾರ ಸಂಜೆ ಹೊತ್ತಿಗೆ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದ್ದು, ಕ್ರಸ್ಟ್ ಗೇಟ್ ಮೂಲಕ ನೀರನ್ನ ಹರಿಬಿಡಲಾಗುತ್ತಿದೆ. ಈ ಬಾರಿ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗದ ಜನರು ಕಾವೇರಿ ನೀರಿಗೆ ಆತಂಕ ಪಡಬೇಕಿಲ್ಲ ಅಂತ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
KRS ಜಲಾಶಯದ ಇಂದಿನ ನೀರಿನಮಟ್ಟ..
ಗರಿಷ್ಠ ನೀರಿನ ಮಟ್ಟ- 124.80 ಅಡಿ.
ಇಂದಿನ ನೀರಿನ ಮಟ್ಟ 124.80 ಅಡಿ.
ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ನೀರು ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಬಳಕೆಗೆ ಯೋಗ್ಯವಾದ ನೀರು – 41.073 ಟಿಎಂಸಿ
ಒಳ ಹರಿವು – 41,099 ಕ್ಯೂಸೆಕ್
ಹೊರ ಹರಿವು – 41,099 ಕ್ಯೂಸೆಕ್
ಅಲ್ಲದೆ ಕಾವೇರಿ ಜಲಾಶಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಕೆ ಆರ್ ಎಸ್ ಡ್ಯಾಂನಿಂದ 50000 ದಿಂದ 80000 ಕ್ಯೂಸೆಕ್ಸ್ ನೀರನ್ನ ಹರಿಬಿಡಲಾಗಿದೆ. ಹಾಗೂ ಈ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದ್ದು ಕಾವೇರಿ ನದಿ ತಗ್ಗು ಪ್ರದೇಶದ ಮತ್ತು ಎರಡೂ ದಂಡೆಯಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸುವಂತೆ ರೆಡ್ ಅಲರ್ಟ್ ಸೂಚಿಸಲಾಗಿದೆ.