ಈ ಬಾರಿಯ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ ಮಾಲತಿಪ್ರಿಯಾ ಅವರ ಮಾರ್ಗದರ್ಶನದಲ್ಲಿ, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಬಿ ಎಂ ಶರಣಬಸಪ್ಪ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಈಗಾಗಲೇ ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ ಒಟ್ಟು 22 ಆನೆಗಳನ್ನು ಪರಿಶೀಲಿಸಿದೆ. ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಒಟ್ಟು 18 ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಹೀಗಾಗಿ ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಗಜಪಡೆಯ ಆಯ್ಕೆ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದೆ. ಈ ಬಾರಿ ಅಕ್ಟೋಬರ್ 12ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನೆರವೇರಲಿದೆ. ಹಾಗಾಗಿ ದಸರಾ ಮಹೋತ್ಸವಕ್ಕೆ 2 ತಿಂಗಳು ಮುಂಚಿತವಾಗಿಯೇ ಗಜಪಡೆಯನ್ನು ಮೈಸೂರಿಗೆ ಕರೆತರಲು ಸಿದ್ದತೆ ನಡೆದಿದೆ. ಇದೇ ಜುಲೈ ಅಂತ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯುವ ಸಾಧ್ಯತೆಯಿದ್ದು, ಅಂದೇ ಗಜಪಯಣ ಸಮಾರಂಭಕ್ಕೆ ದಿನಾಂಕ ನಿಗದಿಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಆಗಸ್ಟ್ 9 ಅಥವಾ 11ಕ್ಕೆ ಗಜಪಯಣ ಸಮಾರಂಭ ನಡೆಯುವ ಸಾಧ್ಯತೆಯಿದೆ.
ಡಿಸಿಎಫ್ ಬಿ ಎಂ ಶರಣಬಸಪ್ಪ ನೇತೃತ್ವದಲ್ಲಿ ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 18 ಆನೆಗಳನ್ನು ಗುರ್ತಿಸಿ ದಸರಾ ಮಹೋತ್ಸವಕ್ಕೆ ಕರೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಅರಣ್ಯ ಇಲಾಖೆ, ನಾಲ್ಕು ಹೆಚ್ಚುವರಿ ಆನೆಗಳನ್ನು ಸಹ ಗುರುತಿಸಿದೆ. ಈ ಬಾರಿಯೂ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೆ ವಹಿಸಲಾಗುತ್ತದೆ. 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಎರಡನೇ ಹಂತದಲ್ಲಿ 5 ಆನೆಗಳನ್ನು ಕರೆ ತರಲು ತಯಾರಿ ನಡೆದಿದೆ. ಮೊದಲ ಹಂತದಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಂಬಾರಿ ಆನೆ ಅಭಿಮನ್ಯು (58), ಭೀಮ (24), ಏಕಲವ್ಯ (39), ಭೀಮನಕಟ್ಟೆ ಶಿಬಿರದಿಂದ ವರಲಕ್ಷ್ಮಿ (68), ದುಬಾರೆ ಶಿಬಿರದಿಂದ ಧನಂಜಯ (41), ಗೋಪಿ (42), ಕಂಜನ್ (25), ರಾಮಾಪುರ ಶಿಬಿರದಿಂದ ರೋಹಿತ (22), ಲಕ್ಷ್ಮಿ (23) ಆನೆಗಳು ಅರಮನೆ ನಗರಿ ಮೈಸೂರಿಗೆ ಆಗಮಿಸಲಿವೆ. ಎರಡನೇ ಹಂತದಲ್ಲಿ ದುಬಾರೆ ಆನೆ ಶಿಬಿರದಿಂದ ಪ್ರಶಾಂತ (51), ಸುಗ್ರೀವ (42) , ಮತ್ತಿಗೋಡು ಶಿಬಿರದಿಂದ ಮಹೇಂದ್ರ (41), ದೊಡ್ಡಹರವೆ ಶಿಬಿರದಿಂದ ಲಕ್ಷ್ಮಿ (53), ರಾಂಪುರ ಶಿಬಿರದಿಂದ ಹಿರಣ್ಯ (37) ಆನೆಗಳು ಮೈಸೂರಿಗೆ ಆಗಮಿಸಲಿವೆ.
ಕಾಯ್ದಿರಿಸಿರುವ ಆನೆಗಳ ಪಟ್ಟಿ
ದುಬಾರೆ ಆನೆ ಶಿಬಿರದ ಪ್ರಶಾಂತ (49) , ಅಯ್ಯಪ್ಪ (13), ರಾಮಾಪುರ ಆನೆ ಶಿಬಿರದ ಪಾರ್ಥಸಾರಥಿ (19), ಮಾಲಾದೇವಿ (37) ಕಾಯ್ದಿರಿಸಿರುವ ಆನೆಗಳಾಗಿದ್ದು, ಅಗತ್ಯ ಬಿದ್ದರೆ ಮೈಸೂರಿಗೆ ಕರೆ ತರಲಾಗುತ್ತದೆ.
ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ಕುರಿತು ಡಿಸಿಎಫ್ ಬಿ ಎಂ ಶರಣಬಸಪ್ಪ ಪ್ರತಿನಿಧಿ ನ್ಯೂಸ್ ಜೊತೆ ಮಾತನಾಡಿ ಮಾಹಿತಿ ನೀಡಿದರು. ಸಾಕಾನೆಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬಳಿಕವಷ್ಟೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕರೆ ತರಲಾಗುತ್ತದೆ. ಆನೆಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಲಾಗಿದೆ ಎಂದು ಡಿಸಿಎಫ್ ಬಿ ಎಂ ಶರಣಬಸಪ್ಪ ತಿಳಿಸಿದರು. ಒಟ್ಟಾರೆಯಾಗಿ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವುದರ ನಡುವೆಯೇ, ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಅಭಿಮನ್ಯು ನೇತೃತ್ವದ ಗಜಪಡೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ಕರೆತರಲು ಅಣಿಗೊಳಿಸುತ್ತಿದೆ.