– ಮುಡಾ ಹಗರಣ: ಬಿಜೆಪಿ ನಡೆ ಖಂಡಿಸಿ ಹೋರಾಟ
ಪ್ರತಿನಿಧಿ ವರದಿ ಮೈಸೂರು
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ 50:50 ಅನುಪಾತದ ನಿವೇಶನ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ನಾಯಕರು ಸುಪಾರಿ ನೀಡಿದ್ದು, ಇದನ್ನು ಖಂಡಿಸಿ ಜು.೨೯ರಂದು ಮುಡಾ ಕಚೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣಕ್ಕೂ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ ನಿವೇಶನಗಳಿಗೂ ಸಂಬಂಧವಿಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ಈ ನಡೆಯನ್ನು ಖಂಡಿಸಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಬಿಜೆಪಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಲ್ಲದೇ ಮುಡಾ ಹಗರಣ ನೆಪದಲ್ಲಿ ಬೆಂಗಳೂರಿನಿಂದ ಪಾದಯಾತ್ರೆ ಹೊರಟು ನಗರದ ಮುಡಾ ಕಚೇರಿ ಬಳಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಆದರೆ ಬಿ.ವೈ. ವಿಜಯೇಂದ್ರ ಭ್ರಷ್ಟಾಚಾರದ ಪಿತಾಮಹರಾಗಿದ್ದು, ಚೆಕ್ ಮೂಲಕ ಲಂಚ ಸ್ವೀಕರಿಸಿ, ತಂದೆಯನ್ನು ಜೈಲಿಗಟ್ಟಿದವರು ಇವರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ ಇವರು ಮುಡಾ ಆಯುಕ್ತ ನಟೇಶ್ ಅವರೊಡನೆ ಸೇರಿ ಒಂದೂವರೆಯಿಂದ ಎರಡು ಸಾವಿರ ಕೋಟಿ ಅವ್ಯವಹಾರ ನಡೆಸಿದ್ದಾರೆ. ಆ ಸಮಯದಲ್ಲೇ ಸಿಬಿಐ ತನಿಖೆ ನಡೆಸಲು ಒತ್ತಾಯಿಸಿ ತಮ್ಮ ವೇದಿಕೆ ಪ್ರತಿಭಟನೆ ನಡೆಸಿದ್ದರೂ, ಸುಮ್ಮನಿದ್ದವರು ಈಗ ಮುಡಾ ಹಗರಣದ ತನಿಖೆಗೆ ಒತ್ತಾಯಿಸುತ್ತಿರುವುದು ರಾಜಕೀಯ ಹುನ್ನಾರ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಮುಖಂಡರಾದ ಎಚ್.ಎಸ್.ಪ್ರಕಾಶ್, ರವಿನಂದನ್, ಯೋಗೇಶ್ ಉಪ್ಪಾರ್, ಶಿವಶಂಕರ ಮೂರ್ತಿ, ಲೋಕೇಶ್ಕುಮಾರ್ ಮಾದಾಪುರ, ರವಿ ನಜರ್ಬಾದ್ ಇದ್ದರು.
======================
ಕೇಂದ್ರ ಬಜೆಟ್ನಲ್ಲಿ ಮಿತ್ರ ಪಕ್ಷಗಳ ಓಲೈಕೆಗೆ ಆದ್ಯತೆ
– ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕೆ
ಪ್ರತಿನಿಧಿ ವರದಿ ಮೈಸೂರು
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ನಲ್ಲಿ ಮಿತ್ರ ಪಕ್ಷಗಳ ಓಲೈಕೆಗೆ ಆದ್ಯತೆ ನೀಡಿದೆ, ಇದರಲ್ಲಿ ದೂರದೃಷ್ಟಿಯ ಕಲ್ಪನೆಗಳು ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟಲು ಯಾವುದೇ ಕಾರ್ಯಕ್ರಮಗಳು ಇಲ್ಲ. ಅಲ್ಲದೆ, ೨೦೨೧ರ ಡಿಸೆಂಬರ್ನಲ್ಲಿ ಸಂಯುಕ್ತ ಕಿಸಾನ್ ಮೊರ್ಚಾ ಮುಖಂಡರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಪ್ರಸ್ತಾವವನ್ನೇ ಮಾಡದೇ ಮತ್ತೆ ಮೋದಿ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಕೃಷಿಕರೇ ಹೆಚ್ಚಿರುವ ದೇಶದಲ್ಲಿ ಕೃಷಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಕೃಷಿಯನ್ನು ಸೆಕೆಂಡರಿ ಕ್ಷೇತ್ರವಾಗಿ ಪರಿಗಣಿಸುವುದು ಎದ್ದು ಕಾಣುತ್ತದೆ ಎಂದು ದೂರಿದರು.
ನೀತಿ ಆಯೋಗ ಕೃಷಿ ಕ್ಷೇತ್ರದ ಸಂಕಷ್ಟಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಅಂಶದ ಬಗ್ಗೆ ನರೇಂದ್ರ ಮೋದಿ ಸರ್ಕಾರ ತಲೆ ಕೆಡಿಸಿಕೊಳ್ಳದೇ ಇರುವುದು ರೈತ ವರ್ಗದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈಗಾಗಲೇ ಆಡಳಿತ ನಡೆಸಿರುವ ಹಾಗೂ ಈಗ ಆಡಳಿತ ನಡೆಸುತ್ತಿರುವ ಪಕ್ಷಗಳು ರೈತ ಕುಲವನ್ನೇ ನಿರ್ಲಕ್ಷ್ಯ ಮಾಡಿ ನೀತಿಗಳನ್ನು ರೂಪಿಸಿವೆ. ರೈತ ಪರ ನೀತಿಗಾಗಿ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿ, ಜನಾಂದೋಲನ ಕಟ್ಟಲು ರಾಜ್ಯದ ಮೂಲೆ ಮೂಲೆಗೂ ಚಳವಳಿಯನ್ನು ವಿಸ್ತರಿಸುವ ದೃಷ್ಟಿಯಿಂದ ಕುಟುಂಬಕ್ಕೊಬ್ಬ ಸದಸ್ಯ-ಊರಿಗೊಬ್ಬ ಕಾರ್ಯಕರ್ತ ಎಂಬ ಗುರಿಯೊಡನೆ ಪ್ರತಿ ಗ್ರಾಮದಲ್ಲೂ ಚಳವಳಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.
ಕೆಆರ್ಎಸ್ ಸುತ್ತ ವಿಶ್ವದರ್ಜೆ ಉದ್ಯಾನವನ ಸ್ಥಾಪಿಸಲು ರೈತ ಸಂಘದ ವಿರೋಧವಿದೆ. ಈ ಹಿಂದೆ ಡಿಸ್ನಿಲ್ಯಾಂಡ್ ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕ ವಿರೋಧದ ಕಾರಣ ಕೈಬಿಡಲಾಗಿದ್ದ ಯೋಜನೆಯನ್ನು ಬೇರೆ ಹೆಸರಿನಲ್ಲಿ ಮತ್ತೆ ಚಾಲನೆಗೆ ತರಲು ಮುಂದಾಗಿದ್ದು, ಈ ಯೋಜನೆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯಬೇಕು ಎಂದು ಸಂಘ ಸರ್ಕಾರವನ್ನು ಒತ್ತಾಯಿಸುತ್ತದೆ. ಈ ಸಂಬಂಧ ಬಾಗಿನ ಅರ್ಪಿಸಲು ಕೆಆರ್ಎಸ್ಗೆ ಬರುತ್ತಿರುವ ಸಿಎಂ ಹಾಗೂ ಡಿಸಿಎಂ ಅವರಿಗೆ ಒತ್ತಾಯ ಪತ್ರವನ್ನು ಸಂಘ ಸಲ್ಲಿಸಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರವಿಕಿರಣ್ ಪೂಣಚ್ಚ, ನೇತ್ರಾವತಿ, ಹೊಸೂರು ಕುಮಾರ್, ಮಂಡಕಳ್ಳಿ ಮಹೇಶ್ ಹಾಗೂ ಪಿ. ಮರಂಕಯ್ಯ ಹಾಜರಿದ್ದರು.
=====================
ನಾಳೆ ಡ್ರಮ್ಸ್ ವಿಭಾಗದ ಪರೀಕ್ಷೆಗಳು
ಪ್ರತಿನಿಧಿ ವರದಿ ಮೈಸೂರು
ನಗರದ ಪ್ರಸಾದ್ ಸ್ಕೂಲ್ ಆಫ್ ರಿದಂಸ್ ತಾಳವಾದ್ಯ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಜು.೨೮ರ ಭಾನುವಾರ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ವಿದ್ಯಾ ಸಂಸ್ಥೆಯಲ್ಲಿ ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ಡ್ರಮ್ಸ್ ವತಿಯಿಂದ ಡ್ರಮ್ಸ್ ವಿಭಾಗದ ಪರೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ ಸುಮಾರು ೨೪ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಸಿ.ಆರ್.ರಾಘವೇಂದ್ರ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೧೦ಕ್ಕೆ ಆರಂಭಿಕ ಗ್ರೇಡ್ನಿಂದ 8ನೇ ಗ್ರೇಡ್ವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸುತ್ತಿದ್ದು, ಉತ್ತೀರ್ಣರಾದವರಿಗೆ ಲಂಡನ್ನಲ್ಲಿರುವ ಸಂಸ್ಥೆಯ ವತಿಯಿಂದಲೇ ಪ್ರಮಾಣಪತ್ರ ಬರಲಿವೆ. ಹೆಚ್ಚಿನ ಮಾಹಿತಿಗೆ ದೂ.೯೮೮೦೨ ೭೯೭೯೧ನ್ನು ಸಂಪರ್ಕಿಸುವಂತೆ ಕೋರಿದರು. ಗೋಷ್ಠಿಯಲ್ಲಿ ಅಜಯ್ಶಾಸ್ತ್ರಿ, ಸಂಜೀವ್, ಜಗದೀಶ್, ಕುಮಾರಸ್ವಾಮಿ ಇದ್ದರು.
==================
ಸಂಗೀತ ಸಂಜೆ ಕಾರ್ಯಕ್ರಮ ಇಂದು
ಮೈಸೂರು: ಸ್ಟ್ಯಾನ್ಲಿ ಪಾರ್ಕರ್ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ಜು.೨೭ರಂದು ಸಂಜೆ ೪ ಗಂಟೆಗೆ ನಗರದ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಬಹುಭಾಷಾ ಚಲನಚಿತ್ರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಪಾರ್ಕರ್ ತಿಳಿಸಿದರು.
ಇದು ಉಚಿತ ಪ್ರವೇಶದ ಕಾರ್ಯಕ್ರಮವಾಗಿದೆ. ಈ ವೇಳೆ ಕನ್ನಡ, ಹಿಂದಿ ಹಾಗೂ ತಮಿಳಿನ ಸುಮಾರು ೫೦ ರಿಂದ ೬೦ ಗೀತೆ ಹಾಡಲಾಗುವುದು. ಈ ತಿಂಗಳನ್ನು ವೈದ್ಯರ ದಿನಾಚರಣೆಯ ಮಾಸ ಎನ್ನಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಗಾಯಕ ವೈದ್ಯರನ್ನು ಸನ್ಮಾನಿಸಲಾಗುವುದು. ಕೆಲ ವೈದ್ಯರು ಸಹಾ ಹಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
======================