– ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಮತ
ಪ್ರತಿನಿಧಿ ವರದಿ ಮೈಸೂರು
ಕಾರ್ಗಿಲ್ ವಿಜಯ್ ದಿವಸ್ ತ್ಯಾಗ, ಐಕ್ಯತೆ, ದೇಶಭಕ್ತಿಯ ಸಂಕೇತವಾಗಿದ್ದು, ಈ ದಿನ ಭಾರತೀಯ ಸೇನೆಯಲ್ಲಿ ಮರೆಯಲಾಗದಂತಹ ಅವಿಸ್ಮರಣೀಯ ದಿನ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೈಸೂರು ಜಿಲ್ಲಾ ಘಟಕ ಹಾಗೂ ರೋಟರಿ ಕ್ಲಬ್ ಆಫ್ ಹೆರಿಟೇಜ್ ಸಹಯೋಗದಲ್ಲಿ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಯೋಧರಿಗೆ ನಮನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ದುಡಿದವರನ್ನು ಭಾರತೀಯರು ಸದಾ ಸ್ಮರಿಸಬೇಕು. ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ 500ಕ್ಕೂ ಹೆಚ್ಚು ಸೈನಿಕರು ಪ್ರಾಣತ್ಯಾಗ ಮಾಡಿದ್ದು, ತಮ್ಮ ಕುಟುಂಬ, ಮನೆ, ಮಕ್ಕಳು ಎಲ್ಲವನ್ನೂ ಬಿಟ್ಟು ದೇಶ ಸೇವೆಯೇ ಪರಮಶ್ರೇಷ್ಠ ಎಂದು ದುಡಿದು ನಮ್ಮೆಲ್ಲರಿಗೂ ರಕ್ಷಣೆ ನೀಡಿದ್ದಾರೆ ಎಂದರು.
ದೇಶಕ್ಕಾಗಿ ಹಗಲಿರುಳು, ಚಳಿ, ಗಾಳಿ, ಮಳೆ ಎನ್ನದೇ ದುಡಿಯುವ, ಪ್ರಾಣ ತೆತ್ತಿರುವ ಸೈನಿಕರನ್ನು ನಾವು ಸದಾ ಗೌರವಿಸಬೇಕು. ನಮ್ಮ ತಂದೆ ತಾಯಿ ಎಷ್ಟು ಮುಖ್ಯವೋ ಅಷ್ಟೇ ಭಾರತೀಯ ಸೇನೆ, ಸೈನಿಕರು ಸಹ ಮುಖ್ಯವಾಗಿದ್ದು, ಅವರ ಶ್ರಮ ತ್ಯಾಗದ ಫಲದಿಂದ ನಾವೆಲ್ಲರೂ ನೆಮ್ಮದಿಯ ಬದುಕು ಕಾಣುತ್ತಿದ್ದೇವೆ. ಯುವಕರು ಶಿಕ್ಷಣದ ಜೊತೆಗೆ ದೇಶಭಕ್ತಿ, ಸೇನೆಯ ಬಗ್ಗೆ ಗೌರವ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು. ಯಾವುದಾದರೂ ರೂಪದಲ್ಲಿ ಈ ದೇಶ ಸೇವೆ ಮಾಡುವ ಅವಕಾಶ ಲಭಿಸಿದರೂ, ಅದನ್ನು ಮಾಡುವ ಭಾವನೆ ,ಆಸಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಗರದ ಮೆಟ್ರೋಪೋಲ್ ವೃತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ ಮಾಜಿ ಯೋಧರು ನಗರದಲ್ಲಿ ಬೈಕ್ ರ್ಯಾಲಿ ಸಹ ನಡೆಸಿದರು. ಕಾರ್ಯಕ್ರಮದಲ್ಲಿ ಎಂಎಲ್ಸಿ ಸಿ.ಎನ್.ಮಂಜೇಗೌಡ, ಮುಡಾ ಮಾಜಿ ಅಧ್ಯಕ್ಷರಾದ ಎಚ್.ವಿ.ರಾಜೀವ್, ಯಶಸ್ವಿ ಸೋಮಶೇಖರ್, ಭಾರತೀಯ ವಾಯು ಪಡೆಯ ನಿವೃತ್ತ ಫ್ಲೈ ಟ್ ಲೆಫ್ಟಿನೆಂಟ್ ಫರೀಧಿ ಸಿಂಗ್, ಮೈಸೂರು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ.ದಿವಾಕರ್, ಕಾರ್ಯದರ್ಶಿ ನಂಜುಂಡಸ್ವಾಮಿ, ಖಜಾಂಚಿ ನಟರಾಜು, ಉಪಾಧ್ಯಕ್ಷರಾದ ಶಿವಕುಮಾರ್ ಇತರರಿದ್ದರು.
====================