– ಅಧಿದೇವತೆಗೆ ಭಕ್ತಿಭಾವದಿಂದ ನಮಿಸಿದ ಭಕ್ತವೃಂದ
ಪ್ರತಿನಿಧಿ ವರದಿ ಮೈಸೂರು:
ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಶನಿವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿದ್ಯುಕ್ತ ಚಾಲನೆ ನೀಡಿದರು. ವರ್ಧಂತಿ ಹಿನ್ನೆಲೆಯಲ್ಲಿ ನಡೆಸಲಾದ ಚಿನ್ನದ ಪಲ್ಲಕ್ಕಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ವಿರಾಜಮಾನವಾಗಿ ಕಂಗೊಳಿಸಿದರೆ. ಅಪಾರ ಸಂಖ್ಯೆಯ ಭಕ್ತಾಧಿಗಳು ಚಿನ್ನದ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ಮುಂಜಾನೆಯಿಂದಲೇ ಪೂಜೆ:
ವರ್ಧಂತಿ ಅಂಗವಾಗಿ ಚಾಮುಂಡೇಶ್ವರಿ ಅಮ್ಮನವರಿಗೆ ಶನಿವಾರ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇಗುಲದ ಗರ್ಭಗುಡಿಯಲ್ಲಿರುವ ಮೂಲ ದೇವರ ವಿಗ್ರಹಕ್ಕೆ ಬೆಳಗಿನ ಜಾವ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 8ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮೈಸೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ 10ಗಂಟೆವರೆಗೂ ದೇವರ ದರ್ಶನ ಪಡೆದರು.
ವರ್ಧಂತಿಯಲ್ಲಿ ಗಣ್ಯರು ಭಾಗಿ:
ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಪ್ರಮುಖವಾಗಿ ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್, ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇನ್ನಿತರ ಗಣ್ಯರು ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹರಿದು ಬಂದ ಭಕ್ತಸಾಗರ:
ಚಾಮುಂಡಿಬೆಟ್ಟದಲ್ಲಿ ನಡೆದ ವರ್ಧಂತಿ ಮಹೋತ್ಸವದ ಅಂಗವಾಗಿ ಶನಿವಾರ ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು. ರಾಜ್ಯದ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ದೇವಿಯ ವರ್ಧಂತಿಯಲ್ಲಿ ಭಾಗವಹಿಸಿದರು. ಹೀಗಾಗಿ ಚಾಮುಂಡಿಬೆಟ್ಟದಲ್ಲಿ ಎಲ್ಲಿ ನೋಡಿದರೂ ಭಕ್ತರ ದಂಡು ಕಂಡು ಬಂದಿತು. ವರ್ಧಂತಿ ಅಂಗವಾಗಿ ನಡೆದ ಚಾಮುಂಡಿ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ಕಣ್ತುಂಬಿಕೊಂಡ ಭಕ್ತರು, ತಾಯಿ ಚಾಮುಂಡಿಯ ಜಯಘೋಷ ಕೂಗುತ್ತಾ ಭಕ್ತಿಭಾವ ಮೆರೆದರು.
================
ಬಾಕ್ಸ್
ದೇವಿಯ ವರ್ಧಂತಿ ಹಿನ್ನೆಲೆ
ನಾಡಿನ ಪ್ರಮುಖ ದೇವತೆ ಚಾಮುಂಡೇಶ್ವರಿಗೆ ಮೈಸೂರು ಅರಸರ ಕಾಲದಿಂದಲೂ ಚಾಮುಂಡಿ ಬೆಟ್ಟದಲ್ಲಿ ವರ್ಧಂತಿ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ನಡೆಯುವ ದೇವಿಯ ವರ್ಧಂತಿ ಮಹೋತ್ಸವದಲ್ಲಿ ರಾಜಮನೆತನದವರು ಪಾಲ್ಗೊಳ್ಳಲಿದ್ದು, ಈ ಬಾರಿ ಕೂಡ ರಾಜವಂಸ್ಥರಾದ ಡಾ. ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡಿದ್ದರು. ವರ್ಧಂತಿ ಅಂಗವಾಗಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಪೊಲೀಸ್ ಬ್ಯಾಂಡ್ ಹಿಮ್ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಯದುವೀರ್ ಒಡೆಯರ್ ಅವರು ಚಿನ್ನದ ಪಲ್ಲಕಿಯನ್ನು ಎಳೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ದೇವಿಯ ವರ್ಧಂತಿ ಉತ್ಸವದ ಅಂಗವಾಗಿ ದಿನವಿಡೀ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಿತು, ಬೆಳಗ್ಗೆ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ನಡೆದರೆ, ರಾತ್ರಿ ದರ್ಬಾರ್ ಉತ್ಸವ ಜರುಗಿತು.
==================
ಕೋಟ್
ಪರಂಪರೆಯಿಂದ ನಡೆದುಕೊಂಡು ಬರುತ್ತಿರುವ ಆಚರಣೆ ಮುಂದುರೆಯುತ್ತಿದೆ. ಯದುವೀರ್ ಅವರು ದೇವರ ಮುಂದೆ ಸಂಸದರಲ್ಲ, ಸದಾ ಮಗನಾಗಿ ಇರುತ್ತಾರೆ. ನಾಡಿನ ಜನತೆಗೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದ್ದೇವೆ. ಅತಿವೃಷ್ಠಿಯೂ ಬೇಡ, ಅನಾವೃಷ್ಟಿಯೂ ಬೇಡ, ಸಮವೃಷ್ಟಿಯಲ್ಲಿ ಮಳೆ ಆಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ತಾಯಿ ಚಾಮುಂಡೇಶ್ವರಿಗೆ ಕಳೆದ ಬಾರಿಯೇ ಸೀರೆ ಕೊಡಬೇಕು ಎಂದುಕೊಂಡಿದ್ದೆ, ಕೊಡಲು ಸಾಧ್ಯವಾಗಿರಲಿಲ್ಲ. ಪ್ರತಿ ವರ್ಷದಂತೆ ಈ ಬಾರಿ ಮೂಲ ಮೂರ್ತಿ, ಉತ್ಸವಮೂರ್ತಿ ಎರಡಕ್ಕೂ ಸೀರೆ ನೀಡಿದ್ದೇನೆ.
ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥೆ.
================
ಫೋಟೋಗಳು ಬರಲಿದೆ