– ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮುಖಂಡರ ಕಿಡಿ
ಪ್ರತಿನಿಧಿ ವರದಿ ಮೈಸೂರು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ) ಮಂಜೂರು ಮಾಡಿರುವ ನಿವೇಶನ ಕೇಳುತ್ತಿದ್ದಾರೆ ಹೊರತು, 50:50 ಅನುಪಾತದಲ್ಲಿ ನಿವೇಶನ ಕೇಳುತ್ತಿಲ್ಲ ಎಂದು ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ತಿಳಿಸಿದರು.
ಮುಡಾ ಹಗರಣ ವಿಚಾರದಲ್ಲಿ ಎಂ.ಲಕ್ಷ್ಮಣ್ ಮತ್ತು ಭೈರತಿ ಸುರೇಶ್ ಅವರು ವಿನಾಕಾರಣ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪಿಸಲು 1983ರಲ್ಲಿ ನಿವೇಶನಕ್ಕೆ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದರು. 1984ರಲ್ಲಿ ಮೈಸೂರಿನ ಜೆ.ಪಿ.ನಗರದಲ್ಲಿ 280*75 ಅಳತೆಯ ನಿವೇಶನವನ್ನು ಮುಡಾ ಮಂಜೂರು ಮಾಡಿತು ಹಾಗೂ ಇದಕ್ಕೆ 37,334 ರೂ.ಗಳನ್ನು ಕಟ್ಟಿದ್ದಾರೆ. ಆದರೆ ಅವರು ಹಕ್ಕು ಪತ್ರ ಕೇಳುವ ಸಂದರ್ಭದಲ್ಲಿ ಈ ನಿವೇಶನದ ಅರ್ಧ ಭಾಗವನ್ನು ಬೇರೆ ಅವರಿಗೆ ಮಂಜೂರು ಮಾಡಿರುವ ವಿಷಯ ತಿಳಿದು 2017ರಲ್ಲಿ ಮುಡಾ ಆಯುಕ್ತರಿಗೆ ಪತ್ರ ಬರೆದು ಸದರಿ ನಿವೇಶನದ ಹಕ್ಕು ಪತ್ರ ನೀಡುವಂತೆ ಅಥವಾ ಬದಲಿ ನಿವೇಶನದ ಹಕ್ಕು ಪತ್ರವನ್ನಾದರೂ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿದ್ದ ಮುಡಾ ಆಯುಕ್ತರು ಬದಲಿ ನಿವೇಶನ ನೀಡಲು ಸಮ್ಮತಿಸಿದ್ದರು ಸಹ, ಈವರೆಗೂ ಅವರಿಗೆ ಯಾವುದೇ ನಿವೇಶನ ನೀಡಿಲ್ಲ. ಈ ವಿಷಯವನ್ನು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ ಹೊರತು, ೫೦:೫೦ ಅನುಪಾತದಲ್ಲಿ ನಿವೇಶನ ಕೇಳಿಲ್ಲ. ಕುಮಾರಸ್ವಾಮಿ ಅವರಿಗೆ ನಿವೇಶನ ಮಂಜೂರಾದ ಸಂದರ್ಭದಲ್ಲಿ ಭೈರತಿ ಸುರೇಶ್ ಇನ್ನೂ ಚಿಕ್ಕ ಹುಡುಗ ಅವರಿಗೇನು ಗೊತ್ತು? ಎಂದು ಟೀಕಿಸಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿದ್ದು, ಅವರ ವಿರುದ್ಧ ಯಾವುದೇ ಹಗರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮೇಯರ್ ಆರ್.ಲಿಂಗಪ್ಪ ಮಾತನಾಡಿ, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಅಧಿಕಾರಿಗಳು ಸೈಟುಗಳನ್ನು ಮಾರಾಟ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಈ ಹಗರಣದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರವೇನು? ಎಂಬುದು ತಿಳಿಯುತ್ತದೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಎನ್.ಆರ್. ರವಿಚಂದ್ರೇಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಂಜುನಾಥ್, ರಾಮು, ಬೋರೇಗೌಡ, ಮುದ್ದುರಾಜ್ ಇದ್ದರು.
================