ಪ್ರತಿನಿಧಿ ವರದಿ ಹೊಳೆನರಸೀಪುರ
ನಿಮ್ಮಗಳ ಹಿಂದೆ ಗುರುಗಳಿದ್ದರೆ, ನಿಮ್ಮ ಮುಂದೆ ಗುರಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ನಿಮಗೆ ಗುರಿ ಇಲ್ಲ ಅಂದರೆ ಯಾವ ಗುರುಗಳು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಕಿರಣ್ ಫರ್ನೀಚರ್ಸ್ ಮಾಲೀಕ ಹಾಗೂ ಸ್ನೇಹ ಬಳಗದ ಅಧ್ಯಕ್ಷ ಜಯಪ್ರಕಾಶ್ ತಿಳಿಸಿದರು.
ತಾಲೂಕಿನ ಅಗ್ರಹಾರ ಗೇಟ್ನ ಹಡವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ದ್ದೇಶಿಸಿ ಮಾತನಾಡಿದರು.
ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿಕೆಗೆ ಎಷ್ಟು ಪ್ರಾಶಸ್ತ್ಯ ಕೊಡಬೇಕು. ಗುರುಗಳು ಏನಾದರೂ ಶಿಕ್ಷೆ ನೀಡಿದರೆ ಆನಂದದಿಂದ ಸ್ವೀಕರಿಸಿ. ಶಿಕ್ಷೆ ಇದ್ದರೆ ಶಿಕ್ಷಣ ಬಹಳ ಅಚ್ಚುಕಟ್ಟಾಗಿರುತ್ತದೆ. ತಾವುಗಳೆಲ್ಲರೂ ಉತ್ತಮವಾಗಿ ಓದಿ ಉತ್ತಮ ಪ್ರಜೆಗಳಾಗಿ ಈ ಶಾಲೆಗೆ ಯಶಸ್ಸನ್ನು ತಂದುಕೊಟ್ಟರೆ ನಿಮ್ಮ ತಂದೆ ತಾಯಿಗಳಿಗೆ ಗುರುಗಳಿಗೆ ಆಗುವಂತಹ ಖುಷಿ ಮತ್ತಾರಿಗೂ ಆಗುವುದಿಲ್ಲ ಎಂದರು.
ಹಳ್ಳಿ ಮೈಸೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭುಶಂಕರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜೇತ ಶಿಕ್ಷಕ ಕೆ.ಶಿವಕುಮಾರಾಚಾರ್ ಮಾತನಾಡಿದರು.
ತಾ.ಪಂ.ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್, ಭವಾನಿ ರೈಸ್ ಮಿಲ್ ಮಾಲೀಕ ಕೃಷ್ಣಕಾಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭಕ್ತರ್ ಸಾಬ್, ಉಪನ್ಯಾಸಕ ಮಂಜುನಾಥ್, ಉಪನ್ಯಾಸಕಿ ಮಾಲತಿ, ನಿವೃತ್ತ ನಿಲಯ ಪಾಲಕ ಎಚ್.ಆರ್.ನಿಂಗೇಗೌಡ, ತಾ.ಕ.ಸಾ.ಪ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ವಿಜ್ಞಾನ ವಿಭಾಗದ ಶಿಕ್ಷಕಿ ಸರಸ್ವತಿ, ನಿರ್ಮಲಾ ಕುಮಾರಿ, ಕನ್ನಡ ವಿಭಾಗದ ಶಿಕ್ಷಕಿ ಭಾಗ್ಯಮ್ಮ ಇದ್ದರು.