ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ತಾಲೂಕಿನ ಹಿರಿಸಾವೆ ಗ್ರಾಮದ ಗ್ರಾಮ ದೇವತೆ ಶ್ರೀ ಉಡಸಲಮ್ಮ ದೇವಿಯ ಉತ್ಸವ ಶನಿವಾರ ನಡೆಯಿತು.
ಬೆಳಗ್ಗೆ ರಂಗ ಮಂಟಪದ ಬಳಿಯಿರುವ ದೇಗುಲದಲ್ಲಿ ಅಮ್ಮನವರಿಗೆ ಅರ್ಚಕ ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದರು. ಬಳಿಕ ಉತ್ಸವ ಮೂರ್ತಿಯನ್ನು ವಿವಿಧ ವಸ್ತ್ರ, ಆಭರಣ ಹಾಗೂ ಪುಷ್ಪಗಳಿಂದ ಸಿಂಗರಿಸಿ ತೆರೆದ ವಾಹನದ ಮೇಲೆ ಪ್ರತಿಷ್ಠಾಪಿಸಲಾಯಿತು.
ಮೇಟಿಕೆರೆ ಬಳಿ ಇರುವ ದೇವರ ಮೂಲಸ್ಥಾನಕ್ಕೆ ಉತ್ಸವದೊಂದಿಗೆ ದೇವಿ, ಕೆಂಪರಾಯ ಹಾಗೂ ಕೆಂಚರಾಯ ಸೋಮವನ್ನು ಕರೆದೊಯ್ಯಲಾಯಿತು. ಮೂಲ ಸ್ಥಾನದಲ್ಲಿ ಉಡಸಲಮ್ಮ ಮತ್ತು ಚಿಕ್ಕಮ್ಮ ದೇವಿಗೆ ನೈವೇದ್ಯ ಅರ್ಪಿಸಲಾಯಿತು. ಸಂಜೆ ದೇವಿಯನ್ನು ಗ್ರಾಮಕ್ಕೆ ಕರೆತಂದು ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ದೇವರ ಮನೆತನದವರು ಹಾಗೂ ಹರಕೆ ಹೊತ್ತ ಭಕ್ತರು ಮಡಿಲು ಅಕ್ಕಿ ಮತ್ತು ಕಾಣಿಕೆಗಳನ್ನು ದೇವಿಗೆ ಅರ್ಪಿಸಿದರು.