ಶಾಸಕ ಎಚ್.ಕೆ.ಸುರೇಶ್ ಸ್ಪಷ್ಟನೆ
ಪ್ರತಿನಿಧಿ ವರದಿ ಬೇಲೂರು
ಪಟ್ಟಣವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬೇಲೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಜನಾಭಿಪ್ರಾಯ ಪಡೆದು ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದೇ ಹೊರತು ನನ್ನದು ಯಾವುದೇ ಸ್ವಾರ್ಥವಿಲ್ಲ. ಟೀಕೆ ಟಿಪ್ಪಣಿಗಳಿಗೆ ನಾನು ಕಿವಿಗೊಡುವ ಮಾತು ಇಲ್ಲ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಕೋಟೆ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಕರೆದ ಜನಾಭಿಪ್ರಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾನು ಚುನಾವಣೆ ಪೂರ್ವ ಕೂಡ ಬೇಲೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಕನಸು ಕಂಡಿದೆ. ಅಂತಯೇ ನಾನು ನಿಮ್ಮಲ್ಲರ ಆಶೀರ್ವಾದದಿಂದ ಶಾಸಕನಾದ ಬಳಿಕ ಶಿಲ್ಪಕಲಾ ನಾಡು ಬೇಲೂರು ಹಳೇಬೀಡಿನ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಮಾತನಾಡಿ, ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿದೆ. ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಶೇಷವಾಗಿ ನಗರಾಭಿವೃದ್ಧಿ ಸಚಿವರು ಕೂಡ ಬಸ್ ನಿಲ್ದಾಣ ನಿರ್ಮಾಣಕ್ಕೆ ೫ ಕೋಟಿ ರೂ. ನೀಡಿದ ಕಾರಣದಿಂದಲೇ ನಾವುಗಳು ಇಂದು ಜನಾಭಿಪ್ರಾಯ ಪಡೆಯಲು ಸಭೆ ಕರೆಯಲಾಗಿದೆ. ಬಸ್ ನಿಲ್ದಾಣಕ್ಕೆ ಇನ್ನೂ ಯಾವುದೇ ಶಾಶ್ವತ ಜಾಗ ಗುರುತಿಸಿಲ್ಲ, ತಾವುಗಳು ನೀಡಿದ ಸಲಹೆ ಮೇರೆಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಬದ್ದವಾಗಿರುವ ಬಗ್ಗೆ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್ ಮಾತನಾಡಿ, ಪಟ್ಟಣದ ಮದ್ಯೆ ಇರುವ ಬಸ್ ನಿಲ್ದಾಣ ಅಗಲೀಕರಣ ಅಸಾದ್ಯವಾಗಿದೆ. ಕಾರಣ ಮುಖ್ಯ ರಸ್ತೆ ಅಗಲೀಕರಣವಾಗಬೇಕಿದೆ. ವಿಶೇಷವಾಗಿ ಬೇಲೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಹೊರಭಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬಹುದು. ಈಗಾಗಲೇ ಹೊಸನಗರ ಸಮೀಪದ ಹೈಟೆಕ್ ಬಸ್ ನಿಲ್ದಾಣ ಸೂಕ್ತವಾಗಿದೆ. ಈಗಾಗಲೇ ಬೈಪಾಸ್ ರಸ್ತೆ ಪ್ರಗತಿಯಿಂದ ಬೇಲೂರು ಕೂಡ ವಿಸ್ತರಣೆಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯರಸ್ತೆ ವರ್ತಕರ ಸಂಘದ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಬಸ್ ನಿಲ್ದಾಣ ಸ್ಥಳಾಂತರದಿಂದ ಇಲ್ಲಿನ ವರ್ತಕರ ವ್ಯಾಪಾರ ವಹಿವಾಟಿಗೆ ಕೊಡಲಿಪೆಟ್ಟು ಬಿಳಲಿದೆ. ಶಾಸಕರು ಹಾಲಿ ಇರುವ ಬಸ್ ನಿಲ್ದಾಣದ ಸಮೀಪದ ಪ್ರವಾಸಿ ಮಂದಿರವನ್ನೇ ಸ್ಥಳಾಂತರ ಮಾಡುವ ಮೂಲಕ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ದೇವರಾಜ್ ಮಾತನಾಡಿ, ಚನ್ನಕೇಶವಸ್ವಾಮಿ ದೇಗುಲದ ಸುತ್ತ ಪಾಳುಬಿದ್ದ ಭೂಮಿ ಖಾಲಿಯಿದೆ. ಇಲ್ಲಿಯೇ ಬಸ್ ನಿಲ್ದಾಣ ಮಾಡಬೇಕು, ಹೊರ ಭಾಗದಲ್ಲಿ ಬಸ್ ನಿಲ್ದಾಣದಿಂದ ಕೆಲ ರಿಯಲ್ ಎಸ್ಟೇಟ್ ಅವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಜೆ.ಕೆ.ಕುಮಾರ್ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿ ಬಸ್ ನಿಲ್ದಾಣ ಮಾಡಿದರೆ ಮುಂದಿನ ದಿನದಂದು ಕಷ್ಟವಾಗುತ್ತದೆ. ಅದ್ದರಿಂದ ಪಟ್ಟಣದ ಹೊರ ಭಾಗದಲ್ಲಿ ಬಸ್ ನಿಲ್ದಾಣ ಸೂಕ್ತವೆಂದರು.
ತಹಸೀಲ್ದಾರ್ ಎಂ.ಮಮತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಕುಮಾರ್, ವಿಭಾಗೀಯ ಸಂಚಾರ ಅಧಿಕಾರಿ ಚನ್ನಬಸಪ್ಪ, ಕಿರಿಯ ಅಭಿಯಂತರ ಅರವಿಂದ, ಚನ್ನಕೇಶವಸ್ವಾಮಿ ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್ ಹಾಜರಿದ್ದರು.
—————————
ಪೋಟೋ: ಬೇಲೂರು ಪಟ್ಟಣದ ಬಸ್ ನಿಲ್ದಾಣ ಸ್ಥಳಾಂತರ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಮಾತನಾಡಿದರು.